ಗೃಹಜ್ಯೋತಿ; ಹೊಸ ಲಿಂಕ್ ಬಿಡುಗಡೆ, ನೋಂದಣಿಗೆ ಡೆಡ್ಲೈನ್ ಇಲ್ಲ
ಬೆಂಗಳೂರು, ಜೂನ್ 21; ಕರ್ನಾಟಕ ಕಾಂಗ್ರೆಸ್ ನೀಡಿದ್ದ 'ಗೃಹಜ್ಯೋತಿ' ಗ್ಯಾರಂಟಿ ಯೋಜನೆಗೆ ಅರ್ಜಿ ಸಲ್ಲಿಕೆಗೆ ಸರ್ವರ್ ಸಮಸ್ಯೆ ಎದುರಾಗಿದೆ. ಈ ಯೋಜನೆ ಆಗಸ್ಟ್ನಲ್ಲಿ ಜಾರಿಗೆ ಬರಲಿದ್ದು, ಯೋಜನೆ ಫಲಾನುಭವಿಯಾಗಲು ನೋಂದಣಿ ಮಾಡಲು ಯಾವುದೇ ಗಡುವು ಇಲ್ಲ ಎಂದು ಇಂಧನ ಸಚಿವರು ಹೇಳಿದ್ದಾರೆ.
ಜೂನ್ 18ರ ಭಾನುವಾರದಿಂದ 'ಗೃಹಜ್ಯೋತಿ' ಯೋಜನೆ ಅರ್ಜಿ ಸಲ್ಲಿಕೆ ಆರಂಭವಾಗಿದೆ. ರಾಜ್ಯದ ಗೃಹಬಳಕೆಯ ಗ್ರಾಹಕರಿಗೆ 200 ಯೂನಿಟ್ಗಳ ತನಕ ಉಚಿತ ವಿದ್ಯುತ್ ನೀಡುವ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 20/6/2023 ರವರೆಗೆ 8,16,631 ಗ್ರಾಹಕರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ.

'ಗೃಹಜ್ಯೋತಿ' ಯೋಜನೆ ಫಲಾನುಭವಿಯಾಗಲು ಆನ್ಲೈನ್ ಮೂಲಕ ಸೇವಾ ಸಿಂಧು ಪೋರ್ಟಲ್ಗೆ ಭೇಟಿ ನೀಡಿ (https://sevasindhugs.karnataka.gov.in/) ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಅಲ್ಲದೇ ಹತ್ತಿರದ ವಿದ್ಯುತ್ ಕಚೇರಿ, ಬೆಂಗಳೂರು ಒನ್, ಗ್ರಾಮ್ ಒನ್ ಮತ್ತು ಕರ್ನಾಟಕ ಒನ್ ಕೇಂದ್ರದಲ್ಲಿಯೂ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಆದರೆ ಕೇಂದ್ರಗಳಲ್ಲಿ ಜನರು ಸಾಲುಗಟ್ಟಿ ನಿಂತಿದ್ದು, ಸರ್ವರ್ ಸಮಸ್ಯೆಯಿಂದ ನೋಂದಣಿ ಆಗುತ್ತಿಲ್ಲ. ಆದ್ದರಿಂದ ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಯಾವುದೇ ಡೆಡ್ಲೈನ್ ಇಲ್ಲ; 'ಗೃಹಜ್ಯೋತಿ' ಯೋಜನೆ 2023ರ ಆಗಸ್ಟ್ 1 (ಜುಲೈ ಮಾಹೆಯ ವಿದ್ಯುಚ್ಛಕ್ತಿ ಬಳಕೆ) ರಿಂದ ಜಾರಿಗೆ ಬರಲಿದೆ. ಯೋಜನೆಯ ಅರ್ಹತೆಯ ಮಿತಿಯಲ್ಲಿದ್ದ ಫಲಾನುಭವಿಗಳು ಆಗಸ್ಟ್ 1 ರಿಂದ ಶೂನ್ಯ ಬಿಲ್ ಪಡೆಯಲಿದ್ದಾರೆ. ಯೋಜನೆಗೆ ಫಲಾನುಭವಿಯಾಗಲು ನೋಂದಣಿ ಮಾಡುವುದು ಕಡ್ಡಾಯ.
ಜನರು ನೋಂದಣಿ ಮಾಡಿಸಲು ಕ್ಯೂ ನಿಂತಿದ್ದಾರೆ. ಇಂಧನ ಸಚಿವ ಕೆ. ಜೆ. ಜಾರ್ಜ್ ಬೆಂಗಳೂರಿನಲ್ಲಿ ಬುಧವಾರ ಮಾತನಾಡಿ, "ಗೃಹಜ್ಯೋತಿ ಯೋಜನೆ ಫಲಾನುಭವಿಯಾಗಲು ನೋಂದಣಿ ಮಾಡಲು ಯಾವುದೇ ಗಡುವು ಇಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಸೇವಾ ಸಿಂಧು ಪೋರ್ಟಲ್ನಲ್ಲಿ ನೋಂದಣಿ ತಡವಾಗುತ್ತಿರುವ ಕಾರಣ ಸರ್ಕಾರ ಹೊಸ ಲಿಂಕ್ ಒಂದನ್ನು ಸಂಜೆಯೊಳಗೆ ನೀಡಲಿದೆ. ಈ ಲಿಂಕ್ ಮೂಲಕ ಜನರು ಒಂದು ನಿಮಿಷದಲ್ಲಿ ನೋಂದಣಿ ಮಾಡಬಹುದು ಎಂದು ಸರ್ಕಾರ ಹೇಳಿದೆ.
'ಗೃಹಜ್ಯೋತಿ' ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುವಾಗ ಫಲಾನುಭವಿಗಳು ಆಧಾರ್ ಕಾರ್ಡ್, ಗ್ರಾಹಕರ ID ಗಳ ಮಾಹಿತಿಗಳನ್ನು (ವಿದ್ಯುಚ್ಛಕ್ತಿ ಬಿಲ್ನಲ್ಲಿ ಇರುವಂತೆ) ನೀಡಬೇಕಾಗುತ್ತದೆ. ಒಂದು ವೇಳೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರೆ ಕರಾರು ಪತ್ರವನ್ನು ಸಹ ನೀಡಬೇಕು. ನೋಂದಣಿ ಸಮಯದಲ್ಲಿ
* ಎಸ್ಕಾಂ ಹೆಸರು
* ಖಾತೆ ಸಂಖ್ಯೆ
* ಖಾತೆದಾರರ ಹೆಸರು ಎಸ್ಕಾಂ ನಲ್ಲಿರುವಂತೆ
* ಖಾತೆದಾರರ ವಿಳಾಸ ಎಸ್ಕಾಂ ನಲ್ಲಿರುವಂತೆ
* ಎಸ್ಕಾಂ ಹೆಸರು1
* ಬಳಕೆದಾರರ ವಿಧ (ಇಲ್ಲಿ ಎರಡು ಆಯ್ಕೆಗಳಿದ್ದು ಬಾಡಿಗೆದಾರರು/ ಮಾಲೀಕರು) ಎಂದಿದೆ
* ಆಧಾರ್ ಸಂಖ್ಯೆ
* ಅರ್ಜಿದಾರರ ಹೆಸರು
* ಸಂವಹನಕ್ಕಾಗಿ ದೂರವಾಣಿ ಸಂಖ್ಯೆ
ಈ ವಿವರಗಳನ್ನು ಭರ್ತಿ ಮಾಡಬೇಕಿದೆ.
ಜನರೇ ಆತಂಕ ಬೇಡ; 'ಗೃಹಜ್ಯೋತಿ' ಯೋಜನೆಗೆ ನೋಂದಣಿಯನ್ನು ಜೂನ್ 18ರಿಂದ ಆರಂಭಿಸಲಾಗಿದೆ. ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ ಗ್ರಾಮ ಒನ್ ಜೊತೆಗೆ, ಜನರು ತಮ್ಮ ಕಂಪ್ಯೂಟರ್, ಲ್ಯಾಪ್ಟಾಪ್, ಮೊಬೈಲ್ ಫೋನ್ಗಳ ಮೂಲಕವೂ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಕೆಲವು ವಿದ್ಯುತ್ ಕಚೇರಿಗಳಲ್ಲಿ ಗ್ರಾಹಕರು ಯೋಜನೆಗೆ ನೋಂದಣಿಗೊಂಡಿದ್ದಾರೆ.
ಮೊದಲ ದಿನ 96,305 ಮಂದಿ ಗ್ರಾಹಕರು ನೋಂದಣಿ ಮಾಡಿದ್ದರು, 2ನೇ ದಿನ ನೋಂದಣಿ ಸಂಖ್ಯೆ 3,34,845 ಆಗಿದೆ. 3ನೇ ದಿನ 3,85,481ಗೆ ತಲುಪಿದೆ. ಮಂಗಳವಾರ ಸಂಜೆಯ ತನಕ ಒಟ್ಟು 8,16,631 ಮಂದಿ ಯೋಜನೆಗೆ ನೋಂದಣಿ ಮಾಡಿದ್ದಾರೆ. ಯೋಜನೆ ನೋಂದಣಿ ಪ್ರಕ್ರೀಯೆ ತುಂಬಾ ಸರಳ ಇರುವುದರಿಂದ ಭೌತಿಕವಾಗಿ ಯಾವುದೇ ದಾಖಲೆಗಳನ್ನು ನೀಡದೆ ಸೇವಾ ಸಿಂಧು ಪೋರ್ಟಲ್ನಲ್ಲಿ ಖಾತೆ ಸಂಖ್ಯೆ ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಗಳನ್ನು ನಮೂದಿಸುವ ಮೂಲಕ ಸುಲಭವಾಗಿ ನೋಂದಣಿ ಮಾಡಬಹುದಾಗಿದೆ.
ಯೋಜನೆ ಫಲಾನುಭವಿಯಾಗಲು ನೋಂದಣಿಗೆ ಯಾವುದೇ ಗಡುವು ನಿಗದಿಪಡಿಸಲಾಗಿಲ್ಲ. ಆದ್ದರಿಂದ ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲಎಂದು ರಾಜ್ಯ ಸರ್ಕಾರ ಹೇಳಿದೆ.












Click it and Unblock the Notifications