ಕರ್ನಾಟಕದಲ್ಲಿ ಮುಂದುವರಿದ ವರುಣಬ್ಬರ: ನೆರೆ-ಪ್ರವಾಹ ಸ್ಥಿತಿ ಬಗ್ಗೆ CM ಸಿದ್ದರಾಮಯ್ಯ ಹೇಳಿದ್ದೇನು?
ಬೆಂಗಳೂರು, ಜುಲೈ 26: ಕರ್ನಾಟಕ ರಾಜ್ಯದ ಸುಮಾರು ಅರ್ಧದಷ್ಟು ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಮುಂದುವರಿದಿದೆ. ಈ ಪೈಕಿ ಉತ್ತರ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಎಡೆಬಿಡದೇ ಮಳೆ ಅಬ್ಬರಿಸುತ್ತಿದೆ. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಮಳೆಯಿಂದಾಗಿ ಮಕ್ಕಳ ಹಿತದೃಷ್ಟಿಯಿಂದ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಸದ್ಯ ಉಂಟಾಗುತ್ತಿರುವ ಮಳೆ, ಪ್ರವಾಹ ಭೀತಿಯನ್ನು ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ರಾಜ್ಯದಲ್ಲಿನ ಮಳೆ ಪರಿಸ್ಥಿತಿ ಕುರಿತು ಮಂಗಳವಾರ ರಾತ್ರಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಭಾರಿ ಮಳೆಯ ಕಾರಣದಿಂದಾಗಿ ಹಠಾತ್ ಪ್ರವಾಹ ಸಂಭವಿಸಬಹುದೆಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಸಂಭವನೀಯ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಎದುರಿಸಲು ರಾಜ್ಯ ಸರ್ಕಾರ ಸರ್ವಸನ್ನದ್ಧವಾಗಿದೆ ಎಂದು ಪ್ರವಾಹ ಭೀತಿ ಜನರಿಗೆ ಅಭಯ ನೀಡಿದರು.

ಅತಿವೃಷ್ಟಿ ಮತ್ತು ಪ್ರವಾಹದ ಮುನ್ಸೂಚನೆ ಇರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಈಗಾಗಲೇ ಶಾಲೆ-ಕಾಲೇಜುಗಳಿಗೆ ರಜೆ ಸಾರಿದ್ದಾರೆ. ತಂದೆ-ತಾಯಿಗಳು ಮತ್ತು ವಿದ್ಯಾರ್ಥಿಗಳು ಕಟ್ಟುನಿಟ್ಟಾಗಿ ಜಿಲ್ಲಾಧಿಕಾರಿಯವರ ಆದೇಶಗಳನ್ನು ಪಾಲನೆ ಮಾಡಬೇಕು ಎಂದು ಅವರು ರಾಜ್ಯದ ಜನರಲ್ಲಿ ಮನವಿ ಮಾಡಿದರು.
ರಾಜ್ಯದ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಭಾರಿ ಮಳೆಯ ಕಾರಣದಿಂದಾಗಿ ಹಠಾತ್ ಪ್ರವಾಹ ಸಂಭವಿಸಬಹುದೆಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
— CM of Karnataka (@CMofKarnataka) July 25, 2023
ಸಂಭವನೀಯ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಎದುರಿಸಲು ರಾಜ್ಯ ಸರ್ಕಾರ ಸರ್ವಸನ್ನದ್ಧವಾಗಿದೆ.
ಅತಿವೃಷ್ಟಿ ಮತ್ತು ಪ್ರವಾಹದ ಮುನ್ಸೂಚನೆ ಇರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಈಗಾಗಲೇ…
ಕರಾವಳಿಗೆ ಇಂದು ರೆಡ್ ಅಲರ್ಟ್: ನೆರೆ ಭೀತಿ
ಕಳೆದ ಸುಮಾರು ಒಂದು ತಿಂಗಳಿನಿಂದ ಕರಾವಳಿಯ ಮೂರು ಜಿಲ್ಲೆಗಳಿಗೆ ಧಾರಾಕಾರವಾಗಿ ಮಳೆ ಅಬ್ಬರಿಸುತ್ತಿದೆ. ನೆನ್ನೆ ಜುಲೈ 25ರಂದು ಮತ್ತು ಇಂದು ಜುಲೈ 26ರಂದು ಸಹ ಕರಾವಳಿಗೆ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ರೆಡ್ ಅಲರ್ಟ್ ಪಡೆದಿವೆ. ರಾಜ್ಯದ ಈ ಭಾಗದಲ್ಲಿ ಅತ್ಯಧಿಕ ಗರಿಷ್ಠ ಮಳೆ ದಾಖಲಾಗುತ್ತಿದೆ. ಮುಂದಿನ ಕೆಲವು ದಿನಗಳು ಮಳೆ ಇಲ್ಲಿ ಹೀಗೆ ಮುಂದುವರಿಯಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ಇತ್ತ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬೀದರ್, ಕಲಬುರಗಿ, ವಿಜಯಪುರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ದಿನದ 24 ಗಂಟೆಯು ಮಳೆ ಜಿನುಗುತ್ತಿದೆ. ಇದರಿಂದ ಆಗಬೇಕಿದ್ದ ಕೃಷಿ ಚಟುವಟಿಕೆಗಳಲ್ಲಿ ವ್ಯತ್ಯವಾಗಿದೆ.
ಮಳೆಯು ನಿಲ್ಲುತ್ತಿಲ್ಲ, ನದಿ ಹರಿವಿನ ಪಾತ್ರವು ದಿನೇ ದಿನೆ ಹೆಚ್ಚಾಗುತ್ತಿದ್ದು, ಇದರಿಂದ ನದಿಪಾತ್ರದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. 2019ರಲ್ಲಿ ಆದಂತೆ ಈ ವರ್ಷವು ಪ್ರವಾಹ ಸಂಭವಿಸಿ, ಆಸ್ತಿಪಾಸ್ತಿ, ಬೆಳೆ ಹಾನಿ ಆಗುವ ಭಯದಲ್ಲಿ ಜನರಿದ್ದಾರೆ. ಇವರಿಗೆಲ್ಲ ರಾಜ್ಯ ಸರ್ಕಾರ ಧೈರ್ಯ ಹೇಳಿದ್ದು, ಎಂತದ್ದೆ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಸಮರ್ಥವಾಗಿದೆ ಎಂದು ಸ್ವತಃ ಮುಖ್ಯಮಂತ್ರಿಗಳೇ ತಿಳಿಸಿದ್ದಾರೆ.












Click it and Unblock the Notifications