KIADB ಕಚೇರಿಗಳಲ್ಲಿ ದಲ್ಲಾಳಿಗಳಿಗೆ ಲಗಾಮು ಹಾಕಲು ಸರ್ಕಾರ ಸುತ್ತೋಲೆ
ಬೆಂಗಳೂರು, ಜುಲೈ 23: ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (KIADB)ಯಲ್ಲಿ ದಲ್ಲಾಳಿಗಳು/ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದರ ಕುರಿತು ಆರೋಪಗಳು ಕೇಳಿ ಬಂದಿತ್ತು. ಇದರ ಬೆನ್ನಲ್ಲೆ ಎಚ್ಚೆತ್ತುಕೊಂಡಿರುವ ಸರ್ಕಾರ ಸೂಕ್ತ ಕ್ರಮ ಜರುಗಿಸಲು ಮುಂದಾಗಿದೆ.
ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗಾಗಿ ಭೂಮಿ ಕಳೆದುಕೊಂಡ ರೈತರ ಪರವಾಗಿ ಕೆಐಎಡಿಬಿ ಕೇಂದ್ರ ಕಚೇರಿ ಮತ್ತು ವಲಯ ಕಚೇರಿಗಳಲ್ಲಿ ಕಾಣಿಸಿಕೊಳ್ಳುವ ದಲ್ಲಾಳಿಗಳು/ಮಧ್ಯವರ್ತಿಗಳು ಹಾಗೂ ಅವರ ಜೊತೆ ಕೈಜೋಡಿಸುವ ಅಧಿಕಾರಿ/ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಈ ಕುರಿತು ಭಾರೀ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂಬಿ ಪಾಟೀಲ್ ಎಚ್ಚರಿಸಿ ಭಾನುವಾರ ಸುತ್ತೋಲೆ ಹೊರಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು, ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (KIADB) ಕಚೇರಿಗಳಲ್ಲಿ ಸಂತ್ರಸ್ತ ರೈತರ ಪರವಾಗಿ ಮತ್ತು ಕೈಗಾರಿಕಾ ನಿವೇಶನಗಳು ಮಂಜೂರಾಗಿರುವ ಉದ್ಯಮಿಗಳ ಅಥವಾ ನಿವೇಶನದಾರರ ಹೆಸರಿನಲ್ಲಿ ಕೆಲವು ಅನಪೇಕ್ಷಿತ ವ್ಯಕ್ತಿಗಳು ಓಡಾಡುತ್ತಿರುವುದ ಗಮನಕ್ಕೆ ಬಂದಿದೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಜಮೀನು ಕಳೆದುಕೊಂಡ ರೈತರು ಅಥವಾ ಕಾನೂನುಬದ್ಧ ವಾರಸುದಾರರು/ಪ್ರತಿನಿಧಿಗಳು ಮಾತ್ರ ಕಚೇರಿಗಳಿಗೆ ಭೇಟಿ ನೀಡಿ, ಅಹವಾಲು ಸಲ್ಲಿಸಬಹುದು' ಎಂದು ಹೇಳಿದರು.
ಭ್ರಷ್ಟಾಚಾರ ನಡೆಯದಂತೆ ಸೂಕ್ತ ಕ್ರಮ: ಗೃಹ ಸಚಿವ
ನಮ್ಮ ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ಕೆಐಎಡಿಬಿ ಕಚೇರಿಗಳಲ್ಲಿ ಕೂಡಲೇ ಕಡ್ಡಾಯವಾಗಿ ಪ್ರದರ್ಶಿಸಬೇಕು. ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡುವಂತಹ ಶಕ್ತಿಗಳಿಗೆ ಅಂಕುಶ ಹಾಕಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಕೆಐಎಡಿಬಿ ಕಚೇರಿ ಇದರ ಅನುಸರಣ ಕಾರ್ಯವನ್ನೂ ಮಾಡಬೇಕು ಎಂದು ಅವರು ನಿರ್ದೇಶಿಸಿದ್ದಾರೆ.

ಈ ಹಿಂದೆ ಜೆಡಿಎಸ್ ನಾಯಕ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರು ಸಿಎಂ ಗೃಹ ಕಚೇರಿಯಲ್ಲಿಯೇ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆಯುತ್ತಿದೆ. ಲಂಚ ಸುಲಿಗೆ ಪ್ರಕ್ರಿಯೆ ನಡೆಯುತ್ತಿದೆ. ವೈಎಸ್ಟಿ ತೆರಿಗೆ ರಾಜ್ಯದಲ್ಲಿ ಜಾರಿ ಇದೆ. ಈ ಹಣ ನೀಡದಿದ್ದರೆ ವರ್ಗಾವಣೆ ಪಟ್ಟಿ ಕಸದ ಬುಟ್ಟಿಗೆ ಸೇರಲಿದೆ ಎಂದು ಆರೋಪಿಸಿದ್ದರು.
ಇಂತಹ ಆರೋಪ ಎದುರಿಸುತ್ತಿರುವ ಹೊತ್ತಿನಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (KIADB) ಯಲ್ಲಿ ಭ್ರಷ್ಟಾಚಾರ ನಡೆಯದಂತೆ ಕೈಗಾರಿಕೆ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸುತ್ತೋಲೆ ಹೊರಡಿಸಿದೆ.












Click it and Unblock the Notifications