Government Employee: ಕಛೇರಿಯಲ್ಲಿ ಜನರ ಭೇಟಿ, ಸರ್ಕಾರಿ ಅಧಿಕಾರಿಗಳಿಗೆ ಹೊಸ ಸುತ್ತೋಲೆ
ಬೆಂಗಳೂರು, ಸೆಪ್ಟೆಂಬರ್ 23: ಸರ್ಕಾರಿ ಕಛೇರಿಗಳಲ್ಲಿ ಜನರ ಭೇಟಿಗೆ ಅಧಿಕಾರಿಗಳು/ ಸಿಬ್ಬಂದಿ ಸಿಗುವುದಿಲ್ಲ ಎಂಬ ದೂರು ಸಾಮಾನ್ಯ. ಕರ್ನಾಟಕ ಸರ್ಕಾರ ಈ ದೂರು ಬಗೆಹರಿಸಲು ಮುಂದಾಗಿದೆ. ಸಾರ್ವಜನಿಕರನ್ನು ಭೇಟಿ ಮಾಡಲು ನಿಗದಿಪಡಿಸಿರುವ ಸಂದರ್ಶನ ಸಮಯವನ್ನು ಅಧಿಕಾರಿಗಳು ಪಾಲಿಸುವ ಬಗ್ಗೆ ಸುತ್ತೋಲೆಯನ್ನು ಹೊರಡಿಸಲಾಗಿದೆ. ಅಧಿಕಾರಿಗಳು ಪ್ರತಿ ದಿನ (ಸಾರ್ವಜನಿಕ ರಜೆ ಹೊರತುಪಡಿಸಿ) ಕಛೇರಿಯಲ್ಲಿ ಜನರನ್ನು ಭೇಟಿ ಮಾಡಿ, ಅವರ ಅಹವಾಲುಗಳನ್ನು ಆಲಿಸಬೇಕು ಎಂದು ಸೂಚನೆ ನೀಡಲಾಗಿದೆ.
ಈ ಕುರಿತು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು/ ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳು, ಸಚಿವಾಲಯದ ಎಲ್ಲಾ ವಿಶೇಷ/ ಅಪರ/ ಜಂಟಿ/ ಉಪ/ ಅಧೀನ ಕಾರ್ಯದರ್ಶಿಗಳಿಗೆ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಸುತ್ತೋಲೆ ದಿನಾಂಕ 09/12/2013, ಸುತ್ತೋಲೆ ದಿನಾಂಕ 11/12/2019 ಉಲ್ಲೇಖಿಸಿದ್ದಾರೆ.

ಸುತ್ತೋಲೆಯ ವಿವರ: ಜನಸ್ಪಂದನ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ನಾಗರೀಕರು ಅವರ ಅಹವಾಲುಗಳೊಂದಿಗೆ ಬರುತ್ತಿರುವುದರಿಂದ ಹಿರಿಯ ಅಧಿಕಾರಿಗಳು ಎಲ್ಲಾ ಹಂತಗಳಲ್ಲಿ ಅರ್ಜಿದಾರರಿಗೆ ನಿಯಮಿತವಾಗಿ ಆಲಿಸಿದರೆ ಮಾತ್ರ ಕುಂದುಕೊರತೆಗಳನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಾಗುವುದು. ಸುತ್ತೋಲೆಗಳಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು/ ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳು ಹಾಗೂ ಇತರ ಕ್ಷೇತ್ರ ಅಧಿಕಾರಿಗಳು ಮಧ್ಯಾಹ್ನ 3.30 ಗಂಟೆಯಿಂದ 5.30 ಗಂಟೆಯವರೆಗೆ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳನ್ನು ಭೇಟಿ ಮಾಡಲು ಸಮಯವನ್ನು ಕಲ್ಪಿಸುವ ಬಗ್ಗೆ ನಿರ್ದೇಶನ ನೀಡಲಾಗಿದೆ.
ಆದಾಗ್ಯೂ, ಈ ಸಮಯದಲ್ಲಿ ಸಾರ್ವಜನಿಕರಿಗೆ ಸಮಯಾವಕಾಶ ಕಲ್ಪಿಸದೆ ಇಲಾಖೆಗಳ ಸಭೆಗಳನ್ನು/ ಕಛೇರಿಯ ಹೊರಗೆ ಹೋಗುವ ಪ್ರಕರಣಗಳನ್ನು ಗಮನಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಇನ್ನು ಮುಂದೆ ಎಲ್ಲಾ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು/ ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳು ಮತ್ತು ಇತರ ಅಧಿಕಾರಿಗಳು ಪ್ರತಿ ದಿನ (ಸಾರ್ವಜನಿಕ ರಜೆ ಹೊರತುಪಡಿಸಿ) ಮಧ್ಯಾಹ್ನ 3.30 ಘಂಟೆಯಿಂದ 5.00 ಘಂಟೆಯವರೆಗೆ ಯಾವುದೇ ಸಭೆಗಳನ್ನು ನಿಗದಿಪಡಿಸದೆ (ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ) ಸಾರ್ವಜನಿಕರನ್ನು ಭೇಟಿ ಮಾಡುವುದು ಎಂದು ಸುತ್ತೋಲೆ ಹೇಳಿದೆ.
ಅಲ್ಲದೇ ಜನರ ಕುಂದುಕೊರತೆಗಳನ್ನು ಜನಸ್ಪಂದನಾ ತಂತ್ರಾಂಶದಲ್ಲಿ ದಾಖಲಿಸಿ ಹಾಗೂ ನಿವಾರಿಸಲು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದೆ. ಸಂದರ್ಶಕರ ಸಮಯದಲ್ಲಿ ಯಾವುದೇ ತುರ್ತು ಸಭೆಯ ಸಂದರ್ಭ ಒದಗಿದಲ್ಲಿ, ತಮ್ಮ ಕಛೇರಿಯ ಅಧಿಕೃತ ವ್ಯಕ್ತಿ ಸಂದರ್ಶಕರೊಂದಿಗೆ ಸಂವಹನ ನಡೆಸಿ, ನಂತರ ಮೇಲಾಧಿಕಾರಿಗಳ ಗಮನಕ್ಕೆ ತರುವುದು. ಒಟ್ಟಾರೆ, ಸಾರ್ವಜನಿಕರ ಅಹವಾಲುಗಳನ್ನು ಸ್ಥಳೀಯವಾಗಿ ಹಾಗೂ ತುರ್ತಾಗಿ ನಿವಾರಿಸುವುದು ಈ ಸುತ್ತೋಲೆಯ ಮೂಲ ಉದ್ದೇಶವಾಗಿದೆ ಎಂದು ತಿಳಿಸಲಾಗಿದೆ.
ಅಧಿಕಾರಿಗಳು/ ಸಿಬ್ಬಂದಿ ಸರ್ಕಾರಿ ಕಛೇರಿಗಳಲ್ಲಿ ಜನರ ಭೇಟಿಗೆ ಸಿಗುವ ಜೊತೆಗೆ ಅವರು ಸರಿಯಾದ ಸಮಯಕ್ಕೆ ಲಾಗಿನ್ ಆಗಬೇಕು ಎಂದು ಸಹ ಸೂಚನೆ ನೀಡಲಾಗಿದೆ. ಅಲ್ಲದೇ ಈ ಕುರಿತು ಹಿಂದೆ ಹೊರಡಿಸಿದ ಸುತ್ತೋಲೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಸರ್ಕಾರಿ ನೌಕರರ ಗಮನ ಸೆಳೆಯಲಾಗುತ್ತಿದೆ. ಕಛೇರಿಯ ಮಟ್ಟದಲ್ಲಿಯೇ ದೂರಗಳು ಇತ್ಯರ್ಥವಾದರೆ ಜನಸ್ಪಂದನದ ತನಕ ಜನರು ಆಗಮಿಸುವ ಸಂಖ್ಯೆ ಕಡಿಮೆಯಾಗಲಿದೆ ಎಂಬ ಕಾರಣಕ್ಕೆ ಕಛೇರಿಯಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.












Click it and Unblock the Notifications