ಹಾಸನ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ತಡೆಗೆ ಸರ್ಕಾರ ಕ್ರಮ: ಕೆ. ಗೋಪಾಲಯ್ಯ
ಹಾಸನ,ಡಿಸೆಂಬರ್ 10: ಹಾಸನ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ತಡೆ ಸಂಬಂಧಪಟ್ಟಂತೆ ಸರ್ಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.
ಈ ಕುರಿತು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿಂದು ಪ್ಲಾಂರ್ಸ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ಕಾಡಾನೆ ಹಾವಳಿ ತಡೆ ಕುರಿತ ಸಂಸದರು, ಶಾಸಕರು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಇದು ಒಮ್ಮೆಗೆ ಆಗುವ ಕೆಲಸವಲ್ಲ. ಕಳೆದ 40-50 ವರ್ಷ ಆಳಿದ ಸರ್ಕಾರಗಳು ಕಾಡಾನೆ ಹಾವಳಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದೀಗ ನಮ್ಮ ಸರ್ಕಾರ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಎಲ್ಲ ಕ್ರಮಗಳನ್ನು ಕೈಗೊಂಡಿದೆ ಎಂದರು.
ಸರ್ಕಾರದ ಪರವಾಗಿ ಕಳೆದ ಬಾರಿ ಕೊಟ್ಟ ಮಾತಿಗೆ ಈಗಲೂ ಬದ್ಧನಾಗಿದ್ಧೇನೆ. ಸುಮಾರು 25 ಕಿಮಿ ಆನೆ ಕಾರಿಡಾರ್ ನಿರ್ಮಾಣಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಪ್ರತಿ 1 ಕಿಮಿ ಕಾರಿಡಾರ್ ನಿರ್ಮಾಣಕ್ಕೆ ಪ್ರತ್ಯೇಕವಾಗಿ ಟೆಂಡರ್ ಕರೆಯಬೇಕು. ಇದು 15-20 ದಿನಗಳಲ್ಲಿ ಆಗದ ಕೆಲಸ. 15-20 ಗುತ್ತಿಗೆದಾರರಿಂದ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ ಎಂದರು.

ಬಜೆಟ್ನಲ್ಲಿ ಇಲ್ಲದ ಕೆಲಸಗಳು ಕೂಡ ತುರ್ತಾಗಿ ಆಗುತ್ತವೆ. ಇಂಥಹ ತುರ್ತು ಕೆಲಸಗಳಿಗೆ ಬಜೆಟ್ನ ಅಗತ್ಯ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಸಮಾಜದ ಎಲ್ಲ ವರ್ಗದ ಜನರ ಸಲಹೆಗಳನ್ನು ಪಡೆದುಕೊಂಡು ಶಾಶ್ವತ ಪರಿಹಾರ ಕಂಡು ಹಿಡಿಯಲಾಗುವುದು. ಈ ಸಂಬಂಧ ನಾಳೆ ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ಕರೆಯಲಾಗುವುದು ಎಂದು ಹೇಳಿದರು.
ಹಾಸನ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ಸಮಸ್ಯೆ ಇದೆ. ಈ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ನಾಳೆ ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸಲಿದ್ದಾರೆ ಎಂದರು.
ಸದ್ಯ 2 ಆನೆಯನ್ನು ಸ್ಥಳಾಂತರಿಸುವ ಕುರಿತು ಆದೇಶವನ್ನು ತುರ್ತಾಗಿ ನೀಡಲು ಅಧಿಕಾರಿ ಸೂಚನೆ ನೀಡಲಾಗಿದೆ. ಆನೆಗಳನ್ನು ಸ್ಥಳಾಂತರಿಸಿ ಆನೆಗಳು ಸಂಚರಿಸುವ ಜಾಗವನ್ನು ಗುರುತಿಸಿ ಹೆಚ್ಚಿನ ಕ್ರಮ ವಹಿಸಬೇಕು. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಸ್ಥಳಕ್ಕೆ ಬಂದು ಬಗೆ ಹರಿಸಬೇಕು . ಸಕಲೇಶಪುರ ಹಾಸನ ಜಿಲ್ಲೆಯ ಪ್ರಕರಣವನ್ನು ಪರಿಗಣಿಸಬೇಕು.
ಬೆಳೆ ಹಾನಿಯಗೆ ಪರಿಹಾರ ನೀಡುವ ಕೆಲಸವಾಗಬೇಕು. ಸಮಸ್ಯೆಯನ್ನು ಬಗೆಹರಿಸುವ ಕೆಲಸ ಆಗಬೇಕು. ರಾಷ್ಟ್ರೀಯ ಹೆದ್ದಾರಿಯ ಬಗ್ಗೆ ವಿಶೇಷ ಚರ್ಚೆಸಲಾಗಿದೆ. ಎತ್ತಿನ ಹೊಳೆ ಭೂಸ್ವಾಧೀನ ಪ್ರಕ್ರಿಯೆ ವೇಗವಾಗಿ ಹಣ ನೀಡಲು ಕ್ರಮ ವಹಿಸುವಂತೆ ತಿಳಿಸಿದರು.

ಶಾಸಕರಾದ ಹೆಚ್.ಕೆ ಕುಮಾರಸ್ವಾಮಿ ಅವರು ಮಾತನಾಡಿ ಆನೆ ಹಾವಳಿ ಕುರುತಂತೆ ಸಾಕಷ್ಟು ಚರ್ಚೆ ನಡೆಸಿವೆ ಪರಿಹಾರ ಕಂಡುಕೊಳ್ಳುವುದೊಂದೇ ಮಾರ್ಗ, ಟಾಸ್ಕ್ ಫೋರ್ಸ್ ಬಲಪಡಿಸಿ,ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಎಂದು ಮನವಿ ಮಾಡಿದರು.
ಶಾಸಕರಾದ ಪ್ರೀತಂ ಜೇ. ಗೌಡ ,ಮಾಜಿ ಶಾಸಕರಾದ ವಿಶ್ವನಾಥ್, ಗುರುದೇವ್, ಅರಣ್ಯ ಇಲಾಖೆಯ ಹೆಚ್ಚುವರಿ ಅಪರ ಕಾರ್ಯದರ್ಶಿ ಜಾವೇದ್ ಅಖ್ತರ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಿದ್ದರಾಮಪ್ಪ , ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ , ಪೋಲಿಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ್ ಹಾಗೂ ಇತರರು ಉಪಸ್ಥಿತರಿದ್ದರು.












Click it and Unblock the Notifications