ಕರ್ನಾಟಕದ ವಿವಿಧೆಡೆ ಉತ್ತಮ ಮಳೆ: ಧರೆಗುರುಳಿದ ಮರಗಳು
ಬೆಂಗಳೂರು, ಜುಲೈ 8: ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹಲವು ಭಾಗಗಳಲ್ಲಿ ಭಾರೀ ಮಳೆ ಮುಂದುವರಿದಿದೆ. ದಕ್ಷಿಣ ಕನ್ನಡ, ಉಡುಪಿ ಕೊಡಗು, ಚಿಕ್ಕಮಗಳೂರು ಸೇರಿದಂತೆ 13 ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ (ಕೆಎಸ್ಎನ್ಡಿಎಂಸಿ) ಅಂಕಿಅಂಶಗಳ ಪ್ರಕಾರ ಉಡುಪಿ ಜಿಲ್ಲೆಯ ಮಣಿಪುರ ಗ್ರಾಮ ಪಂಚಾಯಿತಿಯಲ್ಲಿ 24 ಗಂಟೆಗಳ ಅವಧಿಯಲ್ಲಿ 311 ಮಿಮೀ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪಲ್ಲಡ್ಕ ಗ್ರಾಮದಲ್ಲಿ ಗರಿಷ್ಠ 274.5 ಮಿ.ಮೀ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಾಸರಿ 192.8 ಮಿ.ಮೀ ಹಾಗೂ ಉಡುಪಿಯಲ್ಲಿ 124.6 ಮಿ.ಮೀ ಸರಾಸರಿ ಮಳೆ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಉಡುಪಿ ಮಠದ ಆವರಣ, ರಾಜಾಂಗಣ ಸೇರಿದಂತೆ ತಗ್ಗು ಪ್ರದೇಶಗಳು ಜಲಾವೃತವಾಗಿರುವುದರಿಂದ ಉಡುಪಿ ಜಿಲ್ಲೆಯಲ್ಲಿ ಪೊಲೀಸ್ ಮತ್ತು ತುರ್ತು ಸೇವಾ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದಾರೆ. ಏತನ್ಮಧ್ಯೆ, ಪ್ರವಾಹದ ಪರಿಸ್ಥಿತಿಯಿಂದಾಗಿ ಮೂಡುನಿಡುಂಬೂರು ಮತ್ತು ನಿಟ್ಟೂರಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಕೆಎಸ್ಎನ್ಡಿಎಂಸಿ ನೀಡಿದ ಮಾಹಿತಿ ಪ್ರಕಾರ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ 108 ಮಿ.ಮೀ ಮಳೆಯಾಗಿದೆ. ಕೊಡಗು ಜಿಲ್ಲೆಯ ಮಡಿಕೇರಿಯ ಬಲ್ಲಮಾವಟಿಯಲ್ಲಿ 105.5 ಮಿ.ಮೀ ಮಳೆಯಾಗಿದೆ. ಕೊಡಗಿನಲ್ಲಿ ನಿನ್ನೆ ರಾತ್ರಿಯ ನಂತರ ಮಳೆ ತೀವ್ರಗೊಂಡಿದೆ. ಸುಂಟಿಕೊಪ್ಪದ ಕಂಬಿಬಾಣೆಯ ಭೂದಾನ ಪೈಸಾರಿಯಲ್ಲಿ ಬೀಸಿದ ಗಾಳಿಗೆ ಮರಗಳು ಉರುಳಿಬಿದ್ದು ಮನೆಗಳಿಗೆ ಹಾನಿಯಾಗಿದೆ.
ಮಡಿಕೇರಿ-ಮೈಸೂರು ರಸ್ತೆಯಲ್ಲಿ ಮರ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡ, ಕರಾವಳಿ ತಾಲೂಕುಗಳಾದ ಕಾರವಾರ ಮತ್ತು ಭಟ್ಕಳದಲ್ಲಿ ಧಾರಾಕಾರ ಮಳೆಗೆ ಗರಿಷ್ಠ ಹಾನಿಯಾಗಿದೆ. ಕಾರವಾರ ತಾಲೂಕಿನ ದವಲಮಕ್ಕಿ ಗ್ರಾಮದಲ್ಲಿ ಕಳೆದ 24 ಗಂಟೆಗಳಲ್ಲಿ 23 ಸೆಂ.ಮೀ ಮಳೆಯಾಗಿದ್ದು, ಭಟ್ಕಳ ತಾಲೂಕಿನ ಮುಂಡಳ್ಳಿಯಲ್ಲಿ 22 ಸೆಂ.ಮೀ ಮಳೆಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಇದೇ ವೇಳೆ ವೈಲವಾಡ, ಮಡಿಕೇರಿ, ಕದ್ರಾ, ಭಟ್ಕಳ, ಕಾಯ್ಕಿಣಿ ಮತ್ತಿತರ ಕಡೆ 20 ಸೆಂ.ಮೀ.ಗೂ ಹೆಚ್ಚು ಮಳೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುವಾರ ಯಾವುದೇ ಮಾನವ ಸಾವು ನೋವು ಸಂಭವಿಸಿದ ವರದಿಗಳಿಲ್ಲ, ಮೈಲಾರಿ ಗ್ರಾಮದಿಂದ ಮುಖ್ಯ ಭೂಮಿಗೆ ಸಂಪರ್ಕ ಕಲ್ಪಿಸುವ ಸೇತುವೆಗೆ ಹಾನಿಯಾಗಿದೆ. ಸ್ಥಳೀಯರು ಸ್ವಯಂಸೇವಾ ಸಂಸ್ಥೆಗಳ ನೆರವಿನೊಂದಿಗೆ ಈ ಗ್ರಾಮದ ನಿವಾಸಿಗಳಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದಾರೆ.
ನಿರಂತರ ಮಳೆಯಿಂದಾಗಿ ಗಂಗವಳ್ಳಿ ನದಿ ಹಲವು ಕಡೆ ಉಕ್ಕಿ ಹರಿಯುತ್ತಿದೆ. ಗುಳ್ಳಾಪುರ-ಹೆಗ್ಗೆರೆ ನಿವಾಸಿಗಳು ನಿರ್ಮಿಸಿದ್ದ ತಾತ್ಕಾಲಿಕ ಕಾಲುಸಂಕ ಕೊಚ್ಚಿ ಹೋಗಿದೆ. ಭಾರೀ ಮಳೆಗೆ ಶಿರಸಿ ಹಾಗೂ ತಾಲೂಕಿನ ಕೆಲವೆಡೆ ಹಲವು ಕಡೆ ಮರಗಳು ಧರೆಗುರುಳಿವೆ.
ಮಂಗಳೂರಿನಲ್ಲಿ, ನಗರದ ಹೊರವಲಯದ ತಲಪಾಡಿಯ ದೇವಿನಗರದಲ್ಲಿರುವ ಶಾರದ ವಿದ್ಯಾಲಯದ ಬಳಿ ನಿಂತಿದ್ದ ಹಲವು ವಾಹನಗಳು ಗಾಳಿಯ ರಭಸಕ್ಕೆ ಆರು ಅಂತಸ್ತಿನ ಕಟ್ಟಡದ ಮೇಲೆ ಅಳವಡಿಸಲಾಗಿದ್ದ ಶೀಟ್ ನೆಲಕ್ಕೆ ಅಪ್ಪಳಿಸಿ ಹಾನಿಗೀಡಾಗಿವೆ. ಜಿಲ್ಲಾಡಳಿತದ ಆದೇಶದಿಂದಾಗಿ ಶಾಲೆಗಳು ಮುಚ್ಚಿದ್ದವು. ಮಂಗಳೂರು ಮತ್ತು ಬಂಟ್ವಾಳದಲ್ಲಿ ಸುಮಾರು 17 ಕಡೆ ಮರಗಳು ಧರೆಗುರುಳಿದ್ದು, ಮನೆ, ಕಟ್ಟಡಗಳಿಗೆ ಹಾನಿಯುಂಟಾಗಿದ್ದು, ರಸ್ತೆ ತಡೆಯಾಗಿದೆ. ಇದುವರೆಗೆ ಯಾವುದೇ ಪ್ರಾಣ ಹಾನಿ ವರದಿಯಾಗಿಲ್ಲ.
ಉಡುಪಿಯಲ್ಲಿ ಬೈಲಕೆರೆ, ಕಲ್ಸಂಕ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುರುವಾರ ಬೆಳಗ್ಗೆ ಮಳೆಯ ಚರಂಡಿಯಿಂದ ಮನೆಗಳು ಜಲಾವೃತಗೊಂಡಿದ್ದು, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ಮೂಡನಿಡಂಬೂರು, ಮಾಟದಬೆಟ್ಟಿ, ಬೈಲಕೆರೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಪಡುಬಿದ್ರಿಯ ಕಡಿಪಟ್ಣದಲ್ಲಿಯೂ ಮಳೆ ನೀರಿನಿಂದ ಮನೆಗಳಿಗೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. IMD ಯ ಮುನ್ಸೂಚನೆಯ ಪ್ರಕಾರ, ಮುಂದಿನ ಎರಡು ದಿನಗಳ ಕಾಲ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರಿಯುವ ಸಾಧ್ಯತೆಯಿದೆ.












Click it and Unblock the Notifications