ಹೈಕಮಾಂಡ್ ಸಂಸ್ಕೃತಿಯ ರಾಷ್ಟ್ರೀಯ ಪಕ್ಷಕ್ಕೆ ಅಧಿಕಾರ ನೀಡಬೇಡಿ: ಎಚ್ಡಿಕೆ
ಮಂಡ್ಯ, ಮಾರ್ಚ್ 03: 'ಭತ್ತದ ನಾಡಾಗಿದ್ದ ಮಂಡ್ಯ ಜಿಲ್ಲೆಯ ಜನರಿಗೆ ಹುರುಳಿ ಬೆಳೆಯಿರಿ ಎಂದು ಪತ್ರಿಕಾ ಪ್ರಕಟಣೆ ನೀಡುವ ಮೂಲಕ ಜಿಲ್ಲೆಯ ರೈತರಿಗೆ ಹುರುಳಿ ಭಾಗ್ಯ ನೀಡಿದ ರೈತ ವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ ರೈತರು ತಕ್ಕಪಾಠ ಕಲಿಸಬೇಕು' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ(ಮಾ.2) ನಡೆದ ಕುಮಾರ ಪರ್ವ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಂಡ್ಯ ಜಿಲ್ಲೆಯ ರೈತರ ನಾಲೆಗಳಿಗೆ ಕೆ.ಆರ್.ಎಸ್.ನಿಂದ ನೀರು ಹರಿಸದೇ ತೊಂದರೆ ಕೊಟ್ಟಿದ್ದಲ್ಲದೆ, ಮಾಧ್ಯಮಗಳ ಮೂಲಕ ಪ್ರಕಟಣೆ ನೀಡಿ ಭತ್ತ ಕಬ್ಬು ಬೆಳೆಯದಂತೆ ಮಾಡಿ ರೈತರ ಆರ್ಥಿಕ ಪರಿಸ್ಠಿತಿ ಕೆಡುವಂತೆ ಮಾಡಿದ ರಾಜ್ಯ ಸರಕಾರಕ್ಕೆ ಜಿಲ್ಲೆಯ ಏಳೂ ಸ್ಥಾನಗಳಲ್ಲೂ ಜೆಡಿಎಸ್ ಪಕ್ಷದ ಶಾಸಕರನ್ನು ಗೆಲ್ಲಿಸುವ ಮೂಲಕ ಮಂಡ್ಯ ಜಿಲ್ಲೆಯ ರೈತರು ತಮ್ಮ ಸ್ವಾಭಿಮಾನವನ್ನು ಎತ್ತಿ ಹಿಡಿಯಬೇಕು ಎಂದರು.
ರೈತರ ಸಾಲಮನ್ನಾ ಘೋಷಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಮಾರು 10 ಬಾರಿ ಎಐಸಿಸಿ ನಾಯಕರಾದ ಸೋನಿಯಾಗಾಂಧೀ ಮತ್ತು ರಾಹುಲ್ ಗಾಂಧಿ ಅವರ ಬಳಿಗೆ ಅಲೆದಾಡಿದ್ದಾರೆ. ಇಂತಹ ಹೈಕಮಾಂಡ್ ಸಂಸ್ಕೃತಿಯ ರಾಷ್ಟ್ರೀಯ ಪಕ್ಷಗಳಿಗಿಂತ ಉತ್ತಮ ಆಡಳಿತ ನೀಡುವ ಮೂಲಕ ರಾಜ್ಯದ ರೈತರ ಹಾಗೂ ಬಡವರ ಪರವಾದ ಸರಕಾರ ನೀಡಲು ನನಗೂ ಒಂದು ಬಾರಿ ಅವಕಾಶ ನೀಡುವಂತೆ ಕೋರಿದರು.

ಜೆಡಿಎಸ್ ಅನ್ನು ಅಧಿಕಾರಕ್ಕೆ ತನ್ನಿ
ದಕ್ಷಿಣ ಭಾರತದ ಕೇರಳ, ತಮಿಳುನಾಡು, ಆಂಧ್ರ ತೆಲಂಗಾಣ ಎಲ್ಲಾ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರ ನಡೆಸುತ್ತಿವೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಉತ್ತಮ ಆಡಳಿತಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸಾಂತ್ವನ ನೀಡದ ಮುಖ್ಯಮಂತ್ರಿ
ಜಿಲ್ಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ, ಒಬ್ಬ ರೈತರ ಮನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೋಗಿ ಸಾಂತ್ವನ ಹೇಳಿಲ್ಲ. ಆದರೆ ನಾನು ಜಿಲ್ಲೆಯ ಎಲ್ಲಾ ರೈತರ ಮನೆಗಳಿಗೆ ಭೇಟಿ ನೀಡಿ ಸಾಂತ್ವ್ವಾನ ಹೇಳಿದ್ದೇನೆ. ನನಗೆ ನನ್ನ ರೈತರು ಮುಖ್ಯವೇ ಹೊರತು ಅಧಿಕಾರ ಮುಖ್ಯವಲ್ಲ. ರೈತರನ್ನು ಸಾಲಮುಕ್ತನ್ನಾಗಿ ಮಾಡುವುದೇ ನನ್ನ ಮೊದಲ ಆಧ್ಯತೆಯಾಗಿದೆ ಎಂದರು.

ಜನತಾ ದರ್ಶನ ನೆನಪಿಸಿದ ಕುಮಾರಸ್ವಾಮಿ
ನಾನು 20 ತಿಂಗಳು ಮುಖ್ಯಮಂತ್ರಿಯಾಗಿದ್ದಾಗ ಜನತಾದರ್ಶನದ ಮೂಲಕ ಸ್ಥಳದಲ್ಲಿಯೇ ಬಡಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತಿದ್ದೆ ಇದು ಈಗ ನಡೆಯುತ್ತಿದೆಯೇ?, ಗ್ರಾಮ ವಾಸ್ತವ್ಯದ ಮೂಲಕ ಅಧಿಕಾರಿಗಳಲ್ಲಿ ಸಂಚಲನ ಉಂಟು ಮಾಡಿ ಆಡಳಿತ ಯಂತ್ರವನ್ನು ಚುರುಕುಗೊಳಿಸಿದ್ದೆ. 25ಸಾವಿರ ರೂ.ಗಳ ವರೆಗಿನ ರೈತರ ಸಾಲ ಮನ್ನಾ ಮಾಡಿ ಕೇವಲ 20ದಿನದಲ್ಲಿ ರೈತರ ಖಾತೆಗಳಿಗೆ ಹಣ ಜಮಾ ಮಾಡಿದ್ದೆ. ಹೆಕ್ಟೇರ್ ಕಬ್ಬಿಗೆ 25ಸಾವಿರ ರೂ ಬೆಂಬಲ ಬೆಲೆ ನೀಡಿದ್ದೆ, ತೊಗರಿಗೆ ಖರೀದಿ ಕೇಂದ್ರ, ಭತ್ತ ಖರೀದಿ, ರಾಗಿ ಖರೀದಿ ಕೇಂದ್ರ ಆರಂಭಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದೆ. ಆದರೆ ಸಿದ್ದರಾಮಯ್ಯ ಅವರು ಸಾಲಮನ್ನಾ ಮಾಡುವ ಘೋಷಣೆ ಮಾಡಿ ಏಳೆಂಟು ತಿಂಗಳು ಕಳೆದರೂ ಇದುವರೆಗೂ ರೈತರ ಖಾತೆಗಳಿಗೆ ಹಣ ಜಮಾ ಮಾಡಿಲ್ಲ ಎಂದು ದೂರಿದರು.

ಭಾಗ್ಯಗಳಿಂದ ಯಾವ ಉಪಯೋಗವಾಗಿದೆ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ವಿವಿಧ ಭಾಗ್ಯ ಯೋಜನೆಗಳಿಂದ ಜನತೆಗೆ ಏನು ಉಪಯೋಗವಾಗಿದೆ ಎಂದು ಪ್ರಶ್ನಿಸಿದ ಕುಮಾರ ಸ್ವಾಮಿ, ಹಸಿವುಮುಕ್ತ ರಾಜ್ಯವಾಗಿದೆಯೇ, 10 ಕೆ.ಜಿ.ಅಕ್ಕಿ ಪಡೆಯಲು ದಿನಗಟ್ಟಲೆ ಸೊಸೈಟಿಗಳ ಮುಂದೆ ಕಾದುಕುಳಿತುಕೊಳ್ಳುವಂತಾಗಿದೆ ಎಂದರು.












Click it and Unblock the Notifications