ಗೌರಿ ಲಂಕೇಶ್ ಹತ್ಯೆ: ತನಿಖಾಧಿಕಾರಿಗಳಿಗೆ ಸಿಕ್ಕಿತು ಮತ್ತೊಂದು ಟ್ವಿಸ್ಟ್?
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ವಿಚಾರದಲ್ಲಿ ವಿಶೇಷ ತನಿಖಾ ತಂಡಕ್ಕೆ ಮಹತ್ವದ ದೂರೊಂದು ದಾಖಲು.
ಬೆಂಗಳೂರು, ಸೆ 16: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ವಿಚಾರದಲ್ಲಿ ವಿಶೇಷ ತನಿಖಾ ತಂಡಕ್ಕೆ (SIT) ಮಹತ್ವದ ದೂರೊಂದು ದಾಖಲಾಗಿದ್ದು, ನಾಡಿನ ಪ್ರಮುಖ ಮಠದ ಮೇಲೆ ಗಂಭೀರ ಆರೋಪ ಹೊರಿಸಲಾಗಿದೆ.
ಗೌರಿ ಲಂಕೇಶ್ ಹತ್ಯೆಯ ವಿಚಾರದಲ್ಲಿ ಹತ್ತು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ತನಿಖಾ ತಂಡಕ್ಕೆ, ರಾಮಚಂದ್ರಾಪುರ ಮಠದ ಮಾಜಿ ಶಿಷ್ಯೆ, ಪ್ರೇಮಲತಾ ದಿವಾಕರ್ ದಂಪತಿಗಳು ದೂರು ಸಲ್ಲಿಸಿದ್ದು, ಅದರಲ್ಲಿ ರಾಘವೇಶ್ವರ ಶ್ರೀಗಳ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ಕನ್ನಡ ಟಿವಿ ಮಾಧ್ಯಮಗಳು ವರದಿ ಮಾಡಿವೆ.
ಗೌರಿ ಹತ್ಯೆ ಪ್ರಕರಣ: ಸನಾತನ ಸಂಸ್ಥೆ ಕಚೇರಿ ಮೇಲೆ ಎಸ್ಐಟಿ ದಾಳಿ
ರಾಘವೇಶ್ವರ ಶ್ರೀಗಳ ವಿರುದ್ದ ಗೌರಿ ಲಂಕೇಶ್ ಲೇಖನ ಬರೆದಿದ್ದರು. ಹಾಗಾಗಿ, ರಾಘವೇಶ್ವರ ಶ್ರೀಗಳೇ ಗೌರಿ ಹತ್ಯೆಗೆ ಸುಪಾರಿ ಯಾಕೆ ಕೊಟ್ಟಿರಬಾರದು ಎನ್ನುವ ಶಂಕೆಯನ್ನು ವ್ಯಕ್ತಪಡಿಸಿ, ಪ್ರೇಮಲತಾ ದಿವಾಕರ್ ಸುಮಾರು ಐನೂರು ಪುಟಗಳ ದಾಖಲೆ ಮತ್ತು ಪತ್ರವನ್ನು ಎಸ್ ಐಟಿಗೆ ನೀಡಿದ್ದಾರೆಂದು ಸುವರ್ಣ ವಾಹಿನಿ ವರದಿ ಮಾಡಿದೆ.
ವಿಶೇಷ ತನಿಖಾ ತಂಡ ಈ ನಿಟ್ಟಿನಲ್ಲೂ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ಪ್ರಜಾವಾಣಿ ಪತ್ರಿಕೆ ಕೂಡಾ ವರದಿ ಮಾಡಿತ್ತು. ಪ್ರೇಮಲತಾ ನೀಡಿರುವ ದೂರುಗಳನ್ನು SIT ಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ.
ಗೌರಿ ಹತ್ಯೆಯ ವಿಚಾರದಲ್ಲಿ ಏನಾದರೂ ಮಾಹಿತಿಯಿದ್ದರೆ ಸಾರ್ವಜನಿಕರು ಕರೆ ಮಾಡಿ ಮಾಹಿತಿ ನೀಡಬಹುದು ಎನ್ನುವ ಇಲಾಖೆಯ ಪತ್ರಿಕಾ ಪ್ರಕಟಣೆಗೆ ಇದುವರೆಗೆ ನೂರಾರು ದೂರವಾಣಿ ಕರೆಗಳು ಬಂದಿವೆ.
ಅದರಲ್ಲಿ ಹೆಚ್ಚಿನ ಕರೆಗಳು ರಾಘವೇಶ್ವರ ಶ್ರೀಗಳ ಮೇಲೆ ಶಂಕೆ ವ್ಯಕ್ತಪಡಿಸಿ ಬಂದಿದ್ದು ಎನ್ನಲಾಗುತ್ತಿದ್ದು, ಆದರೆ ಯಾವುದೇ ಸಂಬಂಧಪಟ್ಟ ಸಾಕ್ಷಿಗಳು ಲಭ್ಯವಾಗಿಲ್ಲ ಎನ್ನುವ ಮಾಹಿತಿಯಿದೆ.
ಗೌರಿ ಹತ್ಯೆಗೆ ಸಂಬಂಧ ಶ್ರೀಗಳ ವಿರುದ್ದ ಪ್ರೇಮಲತಾ ಅವರು ಏನು ಆರೋಪ ಮಾಡಿದ್ದಾರೋ, ಅದಕ್ಕೆ ಪೂರಕ ದಾಖಲೆಗಳನ್ನು ತೆಗೆದುಕೊಂಡು ಶ್ರೀಮಠಕ್ಕೆ ಬಂದರೆ, ಮಠ ಮುಕ್ತವಾಗಿ ವಿಚಾರಣೆ ಎದುರಿಸುತ್ತದೆ ಎಂದು ರಾಮಚಂದ್ರಾಪುರ ಮಠದ ಅಧಿಕಾರಿಗಳು ' ಒನ್ ಇಂಡಿಯಾ' ಗೆ ತಿಳಿಸಿದ್ದಾರೆ.