ಗೌರಿ ಲಂಕೇಶ್ ಹಂತಕರು ಸ್ವಲ್ಪದರಲ್ಲೇ ಮಿಸ್!?
ಬೆಂಗಳೂರು, ಮಾರ್ಚ್ 06: ಇಷ್ಟು ದಿನಗಳ ಕಾಲ ನಿಧಾನಗತಿಯಲ್ಲಿ ಸಾಗುತ್ತಿದ್ದ ಗೌರಿ ಲಂಕೇಶ್ ಹತ್ಯೆ ಪ್ರಕರಣ, ಆರೋಪಿ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜನ ಬಂಧನ ಆಗುತ್ತಿದ್ದಂತೆ ಚುರುಕುಗೊಂಡಿದೆ.
ಗೌರಿ ಹಂತಕರು ಎಂದು ಅನುಮಾನಿಸಲಾಗಿರುವರು ಸ್ವಲ್ಪದರಲ್ಲಿಯೇ ಎಸ್ಐಟಿ ತಂಡಕ್ಕೆ ದೊರಕದೇ ಮಿಸ್ ಆದರು ಎಂಬದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ನವೀನ್ ಬಂಧನದ ಕೆಲವು ದಿನಗಳ ಹಿಂದೆಯಷ್ಟೆ ಮದುವೆಯೊಂದಕ್ಕೆ ಫೆ.28ರಂದು ರಾಜ್ಯಕ್ಕೆ ಬರುವುದಾಗಿ ನವೀನ್ ಸಹಚರರು ಹೇಳಿದ್ದರು ಎನ್ನಲಾಗಿದೆ. ಆದರೆ ಅಷ್ಟರೊಳಗೆ ನವೀನ್ ಬಂಧನದ ಸುದ್ದಿ ಪ್ರಸಾರವಾದ ಕಾರಣ ಅವರು ಮದುವೆಗೆ ಬರದೆ ತಲೆ ಮರೆಸಿಕೊಂಡಿದ್ದಾರೆ.
ಗೌರಿ ಲಂಕೇಶ್ ಹತ್ಯೆ : ಬಂಧಿತನಿಂದ ಸ್ಟೋಟಕ ಮಾಹಿತಿ
ನವೀನ್ಗೆ ಗೌರಿ ಹಂತಕರ ಜೊತೆ ನಂಟು ಇರುವ ಬಗ್ಗೆ ತೀವ್ರ ಅನುಮಾನ ಹೊಂದಿರುವ ಎಸ್ಐಟಿ ತಂಡ ಆ ನಿಟ್ಟಿನಲ್ಲೇ ನವೀನ್ನ ವಿಚಾರಣೆ ನಡೆಸುತ್ತಿದ್ದಾರೆ. ಹಂತಕರಿಗೆ ಗೌರಿಯನ್ನು ಕೊಲ್ಲಲು ನವೀನ್ ಸಹಾಯ ಮಾಡಿದ್ದ ಎಂಬ ಅನುಮಾನಗಳು ದಟ್ಟವಾಗಿವೆ.
ಇದೇ ನವೀನ್ ಕೆ.ಎಸ್.ಭಗವಾನ್ ರ ಹತ್ಯೆಗೂ ಸಂಚು ರೂಪಿಸಿದ್ದ ಅದೇ ಆರೋಪದ ಮೇಲೆ ನವೀನ್ನನ್ನು ಬಂಧಿಸಲಾಗಿತ್ತು, ನ್ಯಾಯಾಲಯದಿಂದ ವಿಶೇಷ ಅನುಮತಿ ಮೇರೆಗೆ 8 ದಿನಗಳ ಕಾಲ ಆತನನ್ನು ಎಸ್ಐಟಿ ತನ್ನ ವಶಕ್ಕೆ ಪಡೆದಿದ್ದು, ಇನ್ನು ಮೂರು ದಿನಗಳ ಕಾಲ ಮಾತ್ರ ಕಾಲಾವಕಾಶ ಇರುವ ಕಾರಣ ದಿನಕ್ಕೆ 18 ಗಂಟೆಗಳ ಕಾಲ ನವೀನ್ನನ್ನು ವಿಚಾರಣೆ ನಡೆಸಲಾಗುತ್ತಿದೆ.
ಆದರೆ ನವೀನ್ ತನಿಖೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ, ಸಹಚರರ ಹೆಸರುಗಳನ್ನು ಆತ ಹೇಳುತ್ತಿಲ್ಲ ಎಂದು ತಿಳಿದುಬಂದಿದ್ದು, ಆತನ ಮೊಬೈಲ್ ಕರೆ ದಾಖಲೆಗಳನ್ನು ಪರಿಶೀಲಿಸಿದಾಗ ನವೀನ್ ಸಹಚರರು ಕಾಯಿನ್ ಬಾಕ್ಸ್ಗಳಿಂದ ನವೀನ್ಗೆ ಕರೆ ಮಾಡಿರುವ ಬಗ್ಗೆ ಮಾಹಿತಿ ದೊರೆತಿದೆ.
ಆರೋಪಿಗಳು ಸಿಸಿಟಿವಿ ಇಲ್ಲದ ಸ್ಥಳಗಳನ್ನೇ ಕರೆ ಮಾಡಲು ಆಯ್ಕೆ ಮಾಡಿಕೊಂಡಿರುವ ಕಾರಣ ಆರೋಪಿಗಳ ಪತ್ತೆ ತಡವಾಗುತ್ತಿದೆ ಎನ್ನಲಾಗಿದೆ. ನವೀನ್ ಕಟ್ಟಿದ್ದ ಹಿಂದೂ ಯುವಸೇನೆ ಸಂಘಟನೆಯ ಕಾರ್ಯಕರ್ತರನ್ನು ವಿಚಾರಣೆಗೆ ಒಳಪಡಿಸಿದ್ದು, ಆತನ ಧ್ಯೇಯಗಳು ಏನಾಗಿದ್ದವು ಎಂದು ತಿಳಿದುಕೊಳ್ಳುವ ಪ್ರಯತ್ನ ಕೂಡ ನಡೆದಿದೆ.
ಮೂರು ದಿನಗಳ ತನಿಖೆ ನಂತರ ನವೀನ್ನನ್ನು ಭಗವಾನ್ ಹತ್ಯೆ ಸಂಚು ಹಾಗೂ ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಆರೋಪಗಳ ಮೇಲೆ ಆತನ ಬಂಧನವನ್ನು ಅಧಿಕೃತಗೊಳಿಸಲಾಗುವುದು.