ಗೌರಿ ಲಂಕೇಶ್ ಹತ್ಯೆ; ಜಾರ್ಖಂಡ್ನಲ್ಲಿ 18ನೇ ಆರೋಪಿ ಬಂಧನ
Recommended Video
ಬೆಂಗಳೂರು, ಜನವರಿ 10 : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಸಂಚು ರೂಪಿಸಿದ್ದ ಆರೋಪಿಯನ್ನು ಎಸ್ಐಟಿ ಬಂಧಿಸಿದೆ. 2017ರ ಸೆಪ್ಟೆಂಬರ್ 5ರಂದು ಬೆಂಗಳೂರಿನಲ್ಲಿ ಗೌರಿ ಲಂಕೇಶ್ ಹತ್ಯೆ ನಡೆದಿತ್ತು.
ಮಹಾರಾಷ್ಟ್ರದ ಋಷಿಕೇಶ್ ದೇವ್ಡೆಕರ್ ಅಲಿಯಾಸ್ ಮುರಳಿ (44) ಬಂಧಿತ ಆರೋಪಿ. ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಜಾರ್ಖಂಡ್ ರಾಜ್ಯದ ಧನಾಬಾದ್ ಜಿಲ್ಲೆಯ ಕತ್ರಾಸ್ನಲ್ಲಿನ ಮನೆಯಲ್ಲಿ ಮುರಳಿ ಬಂಧಿಸಿದೆ.
ಗೌರಿ ಹತ್ಯೆ ಪ್ರಕರಣ ಭೇದಿಸಲು ಸಹಕರಿಸಿದ ಸಿಬ್ಬಂದಿಗೆ ಬಹುಮಾನ ಘೋಷಣೆ
ಗೌರಿ ಲಂಕೇಶ್ ಹತ್ಯೆಗೆ ಬಳಸಲಾದ ಪಿಸ್ತೂಲ್ ನಾಶಪಡಿಸುವಲ್ಲಿ ಮುರಳಿ ಪ್ರಮುಖ ಪಾತ್ರ ವಹಿಸಿದ್ದ. ಹತ್ಯೆಯ ಆರೋಪಿಯಾಗಿರುವ ಅಮೋಲ್ ಕಾಳೆಯ ಡೈರಿಯಲ್ಲಿ ಮುರಳಿ ಬಗ್ಗೆ ಮಾಹಿತಿ ಇತ್ತು. ಹತ್ಯೆ ಪ್ರಕರಣದ ಬಳಿಕ ಈತ ತಲೆಮರೆಸಿಕೊಂಡಿದ್ದ.
ಗೌರಿ ಹತ್ಯೆಯ ಸಂಚು ನಡೆದಿದ್ದು ಹೇಗೆ? 'ಈವೆಂಟ್'ನ ರೋಚಕ ಸತ್ಯ ಬಯಲು
ಎಸ್ಐಟಿ ಪೊಲೀಸರು ಚಾರ್ಜ್ಶೀಟ್ ಸಲ್ಲಿಕೆ ಮಾಡುವಾಗ ಮುರಳಿಯನ್ನು 18ನೇ ಆರೋಪಿ ಎಂದು ಉಲ್ಲೇಖಿಸಿದ್ದರು. ಜಾರ್ಖಂಡ್ ನ್ಯಾಯಾಲಯಕ್ಕೆ ಶುಕ್ರವಾರ ಆರೋಪಿಯನ್ನು ಹಾಜರುಪಡಿಸಿ ಬಳಿಕ ವಿಚಾರಣೆಗಾಗಿ ಬೆಂಗಳೂರಿಗೆ ಕರೆತರಲಾಗುತ್ತದೆ.
ಎಂ.ಎಂ.ಕಲಬುರ್ಗಿ ಹತ್ಯೆ : ಮಸಾಲಾವಾಲಾ ಸಿಕ್ಕಿಬಿದ್ದಿದ್ದು ಹೇಗೆ?
ಎರಡು ವರ್ಷಗಳಿಂದ ಹುಡುಕಾಟ
ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್ಐಟಿ ಮುರಳಿಗಾಗಿ ಎರಡು ವರ್ಷಗಳಿಂದ ಹುಡುಕಾಟ ನಡೆಸಿತ್ತು. ಹತ್ಯೆಗೆ ಬಳಸಲಾದ ಪಿಸ್ತೂಲ್ ಅನ್ನು ಮುರಳಿ ತೆಗೆದುಕೊಂಡು ಹೋಗಿ ನಾಶ ಮಾಡಿದ್ದಾನೆ ಎಂಬುದು ಆರೋಪ. ಹತ್ಯೆಯ ಆರೋಪಿಯಾಗಿರುವ ಅಮೋಲ್ ಕಾಳೆ ವಿಚಾರಣೆ ನಡೆಸಿದಾಗ ಮುರಳಿ ಬಗ್ಗೆ ಹೇಳಿದ್ದ. ಆತನ ಡೈರಿಯಲ್ಲಿಯೂ ಮುರಳಿ ಉಲ್ಲೇಖವಿತ್ತು.
ತರಬೇತಿ ನೀಡುತ್ತಿದ್ದ
ಬಲಪಂಥೀಯ ವಿಚಾರಧಾರೆಯನ್ನು ವಿರೋಧಿಸುವವರ ಹತ್ಯೆಗೆ ಸಜ್ಜಾಗಿದ್ದ ತಂಡವನ್ನು ಸಂಘಟಿಸುವ ವಿಷಯದಲ್ಲಿ ಮುರಳಿ ಕೆಲಸ ಮಾಡಿದ್ದ. ಅಲ್ಲದೆ ಸಂಘಟನೆಗೆ ನೇಮಕವಾದ ಸದ್ಯರಿಗೆ ಪಿಸ್ತೂಲ್ ಬಳಕೆ ಬಗ್ಗೆ ತರಬೇತಿ ನೀಡುತ್ತಿದ್ದ. ಹತ್ಯೆ ಪ್ರಕರಣದ ಆರೋಪಿಗಳಿಗೆ ಆರ್ಥಿಕ ನೆರವು, ವಸತಿ ವ್ಯವಸ್ಥೆಯನ್ನು ಮಾಡಿದ್ದ ಎಂದು ಎಸ್ಐಟಿ ಪೊಲೀಸರು ಹೇಳಿದ್ದಾರೆ.
ಎರಡೂ ಹತ್ಯೆಯಲ್ಲಿ ಭಾಗಿ?
ಗೌರಿ ಲಂಕೇಶ್ ಹತ್ಯೆ ಪ್ರಕರಣದ ಹಲವು ಆರೋಪಿಗಳು ವಿಚಾರವಾದಿ, ಸಂಶೋಧಕ ಎಂ. ಎಂ. ಕಲಬುರ್ಗಿ ಹತ್ಯೆಯಲ್ಲಿಯೂ ಆರೋಪಿಗಳು. ಮುರಳಿ ಸಹ ಕಲಬುರ್ಗಿ ಅವರ ಹತ್ಯೆಯಲ್ಲಿ ಭಾಗಿಯಾಗಿದ್ದಾನೆಯೇ ಎಂದು ಎಸ್ಐಟಿ ತನಿಖೆ ನಡೆಸಲಿದೆ. ಎಂ. ಎಂ. ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆಯನ್ನು ಎಸ್ಐಟಿ ನಡೆಸುತ್ತಿದೆ.
ಇನ್ನೂ ಒಬ್ಬ ಆರೋಪಿ ಸಿಗಬೇಕು
ಎಸ್ಐಟಿ ಪೊಲೀಸರ ಪ್ರಕಾರ ಗೌರಿ ಲಂಕೇಶ್ ಹತ್ಯೆಗೆ ಸಂಚು ರೂಪಿಸಿದ್ದ ಮತ್ತೊಬ್ಬ ಆರೋಪಿ ಇನ್ನೂ ಸಿಗಬೇಕಿದೆ. ಚಾರ್ಜ್ಶೀಟ್ನಲ್ಲಿ ಪೊಲೀಸರ ಆತನ ಹೆಸರು ಉಲ್ಲೇಖಿಸಿದ್ದು, ಬಂಧನಕ್ಕಾಗಿ ಹುಡುಕಾಟವನ್ನು ಮುಂದುವರೆಸಿದ್ದಾರೆ.