ಗೌರಿ ಲಂಕೇಶ್ರನ್ನು ಕೊಲ್ಲಲು ಕೊಟ್ಟಿದ್ದು ಕೇವಲ 13000 ರೂಪಾಯಿ
ಬೆಂಗಳೂರು, ಜೂನ್ 18: ಗೌರಿ ಲಂಕೇಶ್ಗೆ ಗುಂಡು ಹಾರಿಸಿದ್ದಾನೆ ಎನ್ನಲಾಗಿರುವ ಸಿಂಧಗಿಯ ಪರಶುರಾಮ್ ವಾಘ್ಮೋರೆಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗಿನಿಂದಲೂ ದಿನಕ್ಕೊಂದು ಕುತೂಹಲಕಾರಿ ಮಾಹಿತಿ ಹೊರ ಬೀಳುತ್ತಲೇ ಇವೆ.
ಗೌರಿ ಲಂಕೇಶ್ರನ್ನು ಹತ್ಯೆ ಮಾಡಿದ್ದಕ್ಕೆ ಪರಶುರಾಮ್ಗೆ ಸಿಕ್ಕಿದ್ದು ಕೇವಲ 13000 ರೂಪಾಯಿ ಮಾತ್ರವೇ ಅಂತೆ. ಹೀಗೆಂದು ವಿಚಾರಣೆ ವೇಳೆ ಪರಶುರಾಮ್ ಹೇಳಿದ್ದಾನೆ ಎಂದು ಎಸ್ಐಟಿ ಅಧಿಕಾರಿಗಳು ಹೇಳುತ್ತಿದ್ದಾರೆ.
ಸಚಿವರ ಹತ್ಯೆಗೂ ಸ್ಕೆಚ್ ಹಾಕಿದ್ರು ಗೌರಿ ಹತ್ಯೆ ಆರೋಪಿಗಳು
ಗೌರಿಯನ್ನು ಕೊಲ್ಲಲು ಬೆಂಗಳೂರಿಗೆ ಬರುವಾಗ 3000 ಸಾವಿರ ರೂಪಾಯಿ ಕೊಟ್ಟಿದ್ದರಂತೆ ಆ ನಂತರ ಗೌರಿಯನ್ನು ಕೊಂದ ದಿನವೇ ವ್ಯಕ್ತಿಯೊಬ್ಬ ಬಂದು 10000 ಸಾವಿರ ಪರಶುರಾಮ್ಗೆ ಕೊಟ್ಟು ಹೊರಟುಹೋದನಂತೆ. ಹಣ ಕೊಟ್ಟವರ ಮಾಹಿತಿ ಸಹ ಪರಶುರಾಮ್ಗೆ ಗೊತ್ತಿಲ್ಲ. ಆದರೆ ಮುಖ ನೋಡಿದರೆ ಗುರುತು ಹಿಡಿಯುತ್ತೇನೆ ಎಂದಿದ್ದಾನೆ ಪರಶುರಾಮ್.
ಹಣಕ್ಕಾಗಿ ಮಾಡಿಲ್ಲ ಕೊಲೆ
ಆದರೆ ಹಣಕ್ಕಾಗಿ ನಾನು ಕೊಲೆ ಮಾಡಿಲ್ಲ, ಗೌರಿ ಅವರ ಹಿಂದೂ ವಿರೋಧಿ ಭಾಷಣಗಳಿಂದ ಕೋಪೋಧ್ರಿಕ್ತನಾಗಿ ಧರ್ಮದ ಕಾರಣಕ್ಕಾಗಿ ಅವರನ್ನು ಕೊಂದೆ ನಾನು ಅವರಲ್ಲಿ ಹಣದ ಬೇಡಿಕೆ ಇಟ್ಟಿರಲಿಲ್ಲ ಎಂದು ಪರಶುರಾಮ್ ಎಸ್ಐಟಿ ಬಳಿ ಹೇಳಿದ್ದಾನೆ.
ಕೈ ಮುಗೀತೀನಿ ಮಗನ ಬಗ್ಗೆ ಕೇಳ್ಬೇಡಿ: ಅಂಗಲಾಚಿದ ಪರಶುರಾಮ್ ತಂದೆ
ಕೊಲೆ ಮಾಡಿದ ದಿನ 10000 ನೀಡಿದ್ದರು
10000 ಸಾವಿರ ಹಣ ಕೊಟ್ಟಾತ, 'ಈಗ ಇಷ್ಟು ಇಟ್ಟುಕೊ, ನಿಮ್ಮ ಕುಟುಂಬದವರಿಗೆ ನಾವು ಹಣ ತಲುಪಿಸುತ್ತೇವೆ, ನಮ್ಮನ್ನು ಭೇಟಿಯಾಗುವ ಪ್ರಯತ್ನ ಮಾಡಬೇಡ, ನಾವೇ ಭೇಟಿ ಮಾಡುತ್ತೇವೆ' ಎಂದು ಮಾತ್ರವೇ ಹೇಳಿ ಹೊರಟು ಹೋಗಿದ್ದನಂತೆ.
ಕೊಲೆಯ ಬಗ್ಗೆ ಎಲ್ಲಿಯೂ ಚರ್ಚೆಯೇ ಮಾಡಿಲ್ಲ
ಕೊಲೆ ಮಾಡಿದ ನಂತರ ಪರಶುರಾಮ್ ಆ ಬಗ್ಗೆ ಯಾರ ಬಳಿಯೂ ಮಾತನಾಡಿರಲೇ ಇಲ್ಲವಂತೆ. ಮನೆಯವರಿಗೂ ಸಹ ಅನುಮಾನ ಬಾರದ ಹಾಗೆ ನಡೆದುಕೊಂಡಿದ್ದನಂತೆ. ಆದರೆ ಕುಟುಂಬವನ್ನು ಬಹಳವಾಗಿ ಪ್ರೀತಿಸುವ ಪರಶುರಾಮ್ ಈಗ ಸಂಪೂರ್ಣ ಕುಗ್ಗಿಹೋಗಿದ್ದು, ಕುಟುಂಬಕ್ಕೆ ದ್ರೋಹ ಮಾಡಿದೆನೆಂದು ಕೊರಗುತ್ತಿದ್ದಾನಂತೆ.
ತಾನೇ ಮಾಹಿತಿ ನೀಡುತ್ತಿದ್ದಾನೆ ಪರಶುರಾಮ್
ಎಸ್ಐಟಿ ಪೊಲೀಸರ ಯಾವ ಒತ್ತಾಯವೂ ಇಲ್ಲದೆ ಪರಶುರಾಮ್ನೇ ತನಗೆ ಗೊತ್ತಿರುವ ಎಲ್ಲಾ ಮಾಹಿತಿಯನ್ನೂ ಎಸ್ಐಟಿ ತಂಡಕ್ಕೆ ನೀಡುತ್ತಿದ್ದಾನೆ ಎನ್ನಲಾಗಿದೆ. ಏನೇ ಆಗಲಿ ಕುಟುಂಬದ ಕಷ್ಟಗಳಿಗೆ ಹೆಗಲು ಕೊಡಬೇಕಿದ್ದ ಮಗ ಧರ್ಮದ ಅಮಲು ಏರಿಸಿಕೊಂಡು ತಾನೂ ಶಿಕ್ಷೆ ಅನುಭವಿಸುತ್ತಾ ತನ್ನ ನಂಬಿದವರಿಗೂ ಶಿಕ್ಷೆ ನೀಡುತ್ತಿದ್ದಾನೆ.
ಪಿಸ್ತೂಲ್ ಕೊಟ್ಟವರಿಗೆ ಹುಡುಕಾಟ
ಗೌರಿ ಲಂಕೇಶ್ ಹತ್ಯೆ ಹಿಂದಿರುವ ಪ್ರಮುಖ ಆರೋಪಿಗಾಗಿ ಎಸ್ಐಟಿ ತನಿಖೆ ನಡೆಸುತ್ತಿದೆ. ಅಲ್ಲದೆ ಪರಶುರಾಮ್ಗೆ ಬಂದೂಕು ನೀಡಿದವನ ಪತ್ತೆಗಾಗಿಯೂ ಎಸ್ಐಟಿ ಬಲೆ ಬೀಸಿದೆ. ಕೊಲೆ ನಡೆದ ದಿನದಂದು ಪರಶುರಾಮ್ ಜೊತೆಗಿದ್ದವನ ಬಗ್ಗೆಯೂ ಎಸ್ಐಟಿ ಹುಡುಕಾಟ ನಡೆಸುತ್ತಿದೆ.