ಸಚಿವರ ಹತ್ಯೆಗೂ ಸ್ಕೆಚ್ ಹಾಕಿದ್ರು ಗೌರಿ ಹತ್ಯೆ ಆರೋಪಿಗಳು
ಬೆಂಗಳೂರು, ಜೂನ್ 16: ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳು ಕರ್ನಾಟಕದ ವಿಚಾರವಾದಿಗಳು, ಕೆಲವು ಸ್ವಾಮೀಜಿಗಳು ಸೇರಿದಂತೆ ಸಚಿವರನ್ನೂ ಕೊಲ್ಲಲು ಯೋಜನೆ ರೂಪಿಸಿದ್ದರು ಎಂಬ ಅಂಶ ಎಸ್ಐಟಿ ತನಿಖೆಯಿಂದ ಬಹಿರಂಗವಾಗಿದೆ.
ಲಿಂಗಾಯತ ಪ್ರತ್ಯೇಕ ಧರ್ಮ ಹೊರಾಟದ ಮುಂಚೂಣಿಯಲ್ಲಿದ ಮಾಜಿ ನೀರಾವರಿ ಸಚಿವ ಎಂ.ಬಿ.ಪಾಟೀಲ ಹಾಗೂ ಗಣಿ ಮತ್ತು ಭು ವಿಜ್ಞಾನ ಸಚಿವ ವಿನಯ್ ಕುಲಕರ್ಣಿ ಅವರನ್ನು ಕೊಲ್ಲಲು ಸಹ ಯೋಜನೆ ರೂಪಿಸಲಾಗತ್ತಂತೆ.
ಗೌರಿ ಹತ್ಯೆಯನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟ ಆರೋಪಿ ಪರಶುರಾಮ್
ಸಾಹಿತಿ ಭಗವಾನ್, ಪ್ರೊಫೆಸರ್ ಮಹೇಶ್ ಚಂದ್ರ ಗುರು, ನಿಜಗುಣಾನಂದ ಸ್ವಾಮೀಜಿ ಇನ್ನೂ ಹಲವು ವಿಚಾರವಾದಿಗಳ ಪಟ್ಟಿಯಲ್ಲಿ ಮಾಜಿ ಸಚಿವರಾದ (ಆಗಿನ ಹಾಲಿ ಸಚಿವರು) ಎಂ.ಬಿ.ಪಾಟೀಲ್ ಹಾಗೂ ವಿನಯ್ ಕುಲಕರ್ಣಿ ಅವರ ಹೆಸರೂ ಇದೆ ಎಂಬುದನ್ನು ಎಸ್ಐಟಿ ತಂಡ ಪತ್ತೆ ಮಾಡಿದೆ.
ಹಿಂದೂ ಧರ್ಮ ರಕ್ಷಣೆಯ ಗುರಿ (?!) ಹೊಂದಿದ ಈ ಆರೋಪಿಗಳು, ಲಿಂಗಾಯತ ಪ್ರತ್ಯೇಕ ಧರ್ಮದ ಹೊರಾಟದ ಮೂಲಕ ಹಿಂದೂ ಧರ್ಮ ಒಡೆಯುವ ಪ್ರಯತ್ನ ಮಾಡಿದ್ದಾರೆ ಎಂದು ಗ್ರಹಿಸಿ ಅವರ ಹತ್ಯೆಗೆ ಯೋಜನೆ ರೂಪಿಸಿದ್ದರು ಎನ್ನಲಾಗಿದೆ.
ಗೌರಿ ಹಂತಕರ ಲಿಸ್ಟಲ್ಲಿ ಜಾಮದಾರ್, ನಿಜಗುಣಾನಂದ, ನಾಗಮೋಹನ್ ದಾಸ್
ಗೌರಿ ಹತ್ಯೆ ಆರೋಪಿಗಳ ಬಂಧನವಾಗುತ್ತಿದ್ದಂತೆ ಮೈಸೂರಿನ ಪ್ರೊಫೆಸರ್ ಮಹೇಶ್ ಚಂದ್ರ ಗುರು ಸೇರಿ ಹಲವು ವಿಚಾರವಾದಿಗಳಿಗೆ ಹಾಗೂ ಸ್ವಾಮೀಜಿಗಳಿಗೆ ಭದ್ರತೆ ಒದಗಿಸಲಾಗಿದೆ.
ಕರ್ನಾಟಕದ ಹಲವು ವಿಚಾರವಾದಿ, ಸ್ವಾಮೀಜಿ, ಸಚಿವರುಗಳ ಹಿಟ್ ಲಿಸ್ಟ್ ತಯಾರಿಸಿ ಅದನ್ನು ಮಹಾರಾಷ್ಟ್ರದ ಅಮೋಲ್ ಕಾಳೆ ಅವರಿಗೆ ರವಾನಿಸಲಾಗಿತ್ತು. ಹಿಟ್ ಲಿಸ್ಟ್ನಲ್ಲಿ ಮೊದಲ ಹೆಸರು ಗೌರಿ ಲಂಕೇಶ್ರದ್ದೇ ಆಗಿತ್ತು ಎಂದು ಎಸ್ಐಟಿ ತನಿಖೆಯಿಂದ ತಿಳಿದುಬಂದಿದೆ.