'ಗೃಹ ಸಚಿವ ಪರಮೇಶ್ವರ್ ಬಂಧನಕ್ಕೆ ಒಳಪಡುವ ಪರಿಸ್ಥಿತಿ'
ಬೆಂಗಳೂರು, ಮೇ 23: ರಾಜ್ಯದ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಅವರು ಬಂಧನಕ್ಕೆ ಒಳಪಡುವ ಪರಿಸ್ಥಿತಿ ಬಂದಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ತಿಳಿಸಿದ್ದಾರೆ. ರಾಜ್ಯದ ಉಪ ಮುಖ್ಯಮಂತ್ರಿಗಳೇ ಗೃಹ ಸಚಿವರು 23 ಲಕ್ಷ ಹಣ ವರ್ಗಾವಣೆ ಮಾಡಿರಬಹುದು ಎಂದು ಹೇಳಿರುವುದನ್ನು ನೋಡಿದರೆ ಗೃಹ ಸಚಿವರು ಭಾಗಿಯಾಗಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದು ಹೇಳಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ಮಾತನಾಡಿ, ಯಾವುದೇ ದೇಶ ವಿರೋಧಿ ಚಟುವಟಿಕೆ, ಕಳ್ಳಸಾಗಾಣಿಕೆ, ದೇಶದ ಆದಾಯಕ್ಕೆ ನಷ್ಟ ಉಂಟು ಮಾಡುವುದು ಇಂತಹ ಸಿಂಡಿಕೇಟ್ ಜೊತೆ ಸರ್ಕಾರದಲ್ಲಿರುವ ಮಂತ್ರಿಗಳು ಕೈಜೋಡಿಸಿದರೆ ಕ್ರಮ ವಹಿಸಲಾಗುತ್ತದೆ. ಈ ದಿಕ್ಕಿನಲ್ಲಿ ಇ.ಡಿ ತನಿಖೆ ನಡೆಯುತ್ತಿದ್ದು, ತನಿಖಾ ವರದಿ ಬರಲಿ. ಏಕೆಂದರೆ ಕಾಂಗ್ರೆಸ್ಸಿಗರ ಒಳ ಜಗಳಕ್ಕೆ ನಮ್ಮಿಂದ ಯಾವುದೇ ಸೊಪ್ಪು ಹಾಕುವ ಕೆಲಸ ಆಗುವುದಿಲ್ಲ. ನಮಗೆ ನ್ಯಾಯ ಸಿಗಬೇಕು; ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂಬುದು ನಮ್ಮ ಪಕ್ಷದ ಮತ್ತು ಜನರ ಸ್ಪಷ್ಟ ನಿಲುವು ಎಂದು ಅವರು ತಿಳಿಸಿದರು.

ಈ ನಿಟ್ಟಿನಲ್ಲಿ ಇಡಿ ಸಂಸ್ಥೆಯಿಂದ ಗೃಹ ಸಚಿವರ ಮೇಲೆ ತನಿಖೆ ನಡೆಯುತ್ತಿದ್ದು, ತನಿಖೆ ನಡೆದು ಎಲ್ಲ ಮಾಹಿತಿಗಳು, ಸತ್ಯಾಸತ್ಯತೆ ಆಚೆ ಬಂದ ಮೇಲೆ ನಿಜಕ್ಕೂ ಸ್ಪಷ್ಟವಾಗಿ ತಿಳಿಯುತ್ತದೆ ಎಂದರು. ತನಿಖಾ ವರದಿ ಬಂದ ನಂತರ ಗೃಹ ಸಚಿವರು ಹಣವನ್ನು ವರ್ಗಾವಣೆ ಆಗಿದೆಯೇ.. ಹಣ ಬಳಕೆ ಆಗಿದೆಯೇ. ಹಣ ಕೊಟ್ಟಿದಾರೆಯೇ..ಹಣ ತೆಗೆದುಕೊಂಡಿದ್ದಾರೆಯೇ.. ರನ್ಯಾ ರಾವ್ ಮತ್ತ ಗೃಹ ಸಚಿವರ ಸಂಬಂಧ ಏನು. ಇವರ ವ್ಯವಹಾರ ಎಷ್ಟು ವರ್ಷದಿಂದ ನಡೆಯುತ್ತಿದೆ; ಈ ವ್ಯವಹಾರದಲ್ಲಿ ನೂರಾರು ಜನರ ಜೊತೆ ಅವರ ಸಂಬಂಧ ಇದೆಯೇ, ಈ ರೀತಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರಯೇ ಎಂದು ಎಲ್ಲವೂ ಬೆಳಕಿಗೆ ಬರುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಸರಕಾರವು ಪಟ್ಟಿ ಮಾಡಿದಂತೆ 730 ಔಷಧಿಗಳು ವರ್ಷದ 365 ದಿನಗಳಲ್ಲಿಯೂ ಲಭ್ಯವಿರಬೇಕು ಎಂದು ತಿಳಿಸಿದೆ. ಆದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ನೋಡಿದರೆ 200 ಔಷಧಿಗಳು ಸಿಗುತ್ತಿಲ್ಲ. ಇದನ್ನು ಸದನದಲ್ಲಿ ಪ್ರಶ್ನಿಸಿದರೆ ಅವರ ಬಳಿ ಉತ್ತರವೇ ಇಲ್ಲ ಎಂದು ವ್ಯಂಗ್ಯವಾಡಿದರು. ಏಕೆಂದರೆ ಕಾಂಗ್ರೆಸ್ ಸರ್ಕಾರವು ಬಯಸಿದ ಕಮಿಷನ್ ಕೊಡುತ್ತಿಲ್ಲ. ಇದರಿಂದ 2 ವರ್ಷದ ಹಳೇ ಔಷಧಿ ರಿಂಗರ್ ಲ್ಯಾಕ್ಟೇಟ್ ಅನ್ನು ಬಳಕೆ ಮಾಡಿ ಗರ್ಭಿಣಿಯರು, ಬಾಣಂತಿಯರು ಸತ್ತಿದ್ದಾರೆ. ಈ ಸಾವುಗಳ ಮೇಲೆ ರಾಜಕೀಯ ಮಾಡಿರುವ ಮತ್ತು ಸಾವುಗಳಿಗೆ ಕಾರಣರಾಗಿರುವ ಕಾಂಗ್ರೆಸ್ಸಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಜನೌಷಧಿ ಕೇಂದ್ರಗಳಲ್ಲಿ ಜನರು ದುಡ್ಡು ಕೊಟ್ಟು ಕಡಿಮೆ ದರದಲ್ಲಿ ಔಷಧಿಗಳನ್ನು ಕೊಂಡುಕೊಳ್ಳುತ್ತಿದ್ದರು. ಅದಕ್ಕೂ ನೀವು ಮಣ್ಣು ಹಾಕಿದ್ದಾರೆ. ನೀವು ಔಷಧಿಗಳನ್ನು ಕೊಡುವುದಿಲ್ಲ. ನಿಮಗೆ 60 ಪರ್ಸೆಂಟ್ ಕಮಿಷನ್ ಕೊಡುತ್ತಿಲ್ಲವೆಂದು ಸರ್ಕಾರ ಔಷಧಿಗಳನ್ನು ಕೊಂಡುಕೊಳ್ಳುವುದಿಲ್ಲ. ಹೀಗಾಗಿ ಜನರಿಗೆ ಅತ್ಯಂತ ಅಗತ್ಯವಾದ ಔಷಧಿಗಳು ಸಿಗುತ್ತಿಲ್ಲ. ಆದರೆ 2 ವರ್ಷದ ಸಾಧನಾ ಸಮಾವೇಶ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಯಾವ ಸಾಧನೆಗೆ ನೀವು ಸಮರ್ಪಣೆ ಮಾಡುತ್ತಿದ್ದೀರಿ ಕಾಂಗ್ರೆಸ್ಸಿಗೆ ಅರ್ಪಣೆ ಮಾಡುವುದಕ್ಕೆ ಸಮಾವೇಶ ಮಾಡುತ್ತಿದ್ದಾರೆ. ರಾಜ್ಯದ ಜನರಿಗೆ ನಿಮ್ಮಿಂದ ಯಾವ ಸಮರ್ಪಣೆಯೂ ಇಲ್ಲ ಹಾಗೂ ನಿಮಗೆ ಬಡವರ ಬಗ್ಗೆ ಕಾಳಜಿಯೂ ಇಲ್ಲ ಎಂದು ಟೀಕಿಸಿದರು.
ಸರ್ಕಾರಿ ಆಸ್ಪತ್ರೆಗೆ 17,500 ಕೋಟಿ ಖರ್ಚು ಮಾಡಿದ್ದೇವೆ ಎಂದು ಹೇಳಿದ್ದೀರಿ. ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾಗಿ ಎಕ್ಸ್ರೇ ಯಂತ್ರಗಳು ಒಂದು ದಿನ ಕೆಲಸ ಮಾಡಿದರೆ ಇನ್ನೊಂದು ದಿನ ಕೆಲಸ ಮಾಡುವುದಿಲ್ಲ. ಸರಿಯಾದ ಔಷಧಿ ಮತ್ತು ಮಾತ್ರೆಗಳು ಇಲ್ಲ; ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಇಲ್ಲ. ಗರ್ಭಿಣಿ-ಬಾಣಂತಿಯ ಸಾವಿನ ಬಗ್ಗೆ ಸರಿಯಾದ ತನಿಖೆ ನಡೆಸಿ ಇವತ್ತಿಗೂ ಕ್ರಮ ತೆಗೆದುಕೊಂಡಿಲ್ಲ. ಸರ್ಕಾರ, ಆರೋಗ್ಯ ಸಚಿವರು ಜನೌಷಧಿಯನ್ನು ಗುರಿಯಾಗಿಸಿಕೊಂಡು ಈ ರೀತಿ ಮನ ಬಂದಂತೆ ಜನೌಷಧಿ ಕೇಂದ್ರಗಳನ್ನು ಮುಚ್ಚಿದ್ದಾರೆ. ನಿಮ್ಮ ಸರ್ಕಾರ ಒಳ್ಳೆ ಕೆಲಸ ಮಾಡುವುದಿಲ್ಲ. ಒಳ್ಳೆ ಕೆಲಸವಾಗುತ್ತಿರುವುದನ್ನು ತಡೆಯುವ ದುಷ್ಟಬುದ್ಧಿ ಕಾಂಗ್ರೆಸ್ ಸರ್ಕಾರದ್ದು ಎಂದು ದೂರಿದರು. ಜನೌಷಧಿ ಕೇಂದ್ರಗಳನ್ನು ಮುಚ್ಚಬೇಡಿ ಎಂದು ಸರ್ಕಾರಕ್ಕೆ ಅವರು ಮನವಿ ಮಾಡಿದರು.












Click it and Unblock the Notifications