ಪರಮೇಶ್ವರ ಮುಖ್ಯಮಂತ್ರಿ ಹೇಳಿಕೆ : ಯಾರು, ಏನು ಹೇಳಿದರು?
Recommended Video

ಬೆಂಗಳೂರು, ನವೆಂಬರ್ 18 : 'ಮುಖ್ಯಮಂತ್ರಿ ಸ್ಥಾನ ಕೊಟ್ಟರೆ ನಿಭಾಯಿಸಲು ಸಿದ್ಧ' ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ನೀಡಿರುವ ಹೇಳಿಕೆ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಹಲವಾರು ನಾಯಕರು ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಉಪ ಮುಖ್ಯಮಂತ್ರಿಗಳ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, 'ಪರಮೇಶ್ವರ ಹೇಳಿಕೆಯನ್ನು ಬೇರೆ ರೀತಿಯಲ್ಲಿ ವ್ಯಾಖ್ಯಾನ ಮಾಡೋದು ಬೇಡ' ಎಂದು ಹೇಳಿದ್ದಾರೆ.
'ರಾಜ್ಯದಲ್ಲಿ ಎಷ್ಟೋ ಜನ ಮುಖ್ಯಮಂತ್ರಿಗಳಾಗಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹತೆ ಇರುವ ನಾಯಕರಲ್ಲಿ ಪರಮೇಶ್ವರ ಅವರು ಕೂಡಾ ಒಬ್ಬರು' ಎಂದು ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಮತ್ತು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ವಿವಿಧ ನಾಯಕರು ಪರಮೇಶ್ವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಯಾರು, ಏನು ಹೇಳಿದರು? ಚಿತ್ರಗಳಲ್ಲಿ ನೋಡಿ....

ಅದರಲ್ಲಿ ತಪ್ಪೇನಿದೆ?
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಮೇಶ್ವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, 'ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಆಗೋ ಅರ್ಹತೆ ಬಹಳ ಜನರಿಗೆ ಇದೆ. ಪರಮೇಶ್ವರ ಕೂಡಾ ಅವರಲ್ಲಿ ಒಬ್ಬರು. ಅವರು ಹೇಳಿರುವುದರಲ್ಲಿ ತಪ್ಪೇನಿದೆ?. ಸಿಎಂ ಬದಲಾವಣೆ ವಿಚಾರ ಇಲ್ಲ. ಏಕೆಂದರೆ ಆ ಸೀಟು ಖಾಲಿ ಇಲ್ಲ' ಎಂದು ಹೇಳಿದರು.

ಎಚ್.ಡಿ.ಕುಮಾರಸ್ವಾಮಿ ಹೇಳಿದ್ದೇನು?
'ಡಿಸಿಎಂ ಪರಮೇಶ್ವರ ಅವರು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ಸಿಎಂ ಸ್ಥಾನ ಯಾರಿಗೂ ಖಾಯಂ ಅಲ್ಲ. ಪರಮೇಶ್ವರ ಹೇಳಿಕೆಯನ್ನು ಬೇರೆ ರೀತಿಯಲ್ಲಿ ವ್ಯಾಖ್ಯಾನ ಮಾಡೋದು ಬೇಡ. ರಾಜ್ಯದಲ್ಲಿ ಎಷ್ಟೋ ಜನ ಮುಖ್ಯಮಂತ್ರಿಗಳಾಗಿದ್ದಾರೆ. ಸಿಎಂ ಸ್ಥಾನಕ್ಕೆ ಅರ್ಹತೆ ಇರುವವರಲ್ಲಿ ಪರಮೇಶ್ವರ ಅವರು ಕೂಡಾ ಒಬ್ಬರು' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ನನಗೆ ಮುಖ್ಯಮಂತ್ರಿ ಆಗುವ ಅರ್ಜೆಂಟ್ ಇಲ್ಲ
'ನನಗೆ ಮುಖ್ಯಮಂತ್ರಿ ಆಗುವ ಅರ್ಜೆಂಟ್ ಇಲ್ಲ. ಆಸೆ ಎಲ್ಲರಿಗೂ ಇರತ್ತೆ ಅದು ತಪ್ಪಲ್ಲ. ಐದು ವರ್ಷಗಳ ಕಾಲ ಜೆಡಿಎಸ್ಗೆ ಮುಖ್ಯಮಂತ್ರಿ ಹುದ್ದೆಯನ್ನು ಬರೆದುಕೊಟ್ಟಿದ್ದೇವೆ. ಆ ಮಾತಿನಿಂದ ಹಿಂದೆ ಸರಿಯುವ ಮಾತೇ ಇಲ್ಲ. ನನಗಂತೂ ಈ ಹುದ್ದೆ ವಿಚಾರದಲ್ಲಿಅರ್ಜೆಂಟ್ ಇಲ್ಲ' ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

'ಏನು ಬೇಕಾದರೂ ಆಗಬಹುದು'
'ರಾಜಕೀಯದಲ್ಲಿ ಏನು ಬೇಕಾದರೂ ಬದಲಾವಣೆ ಆಗಬಹುದು. ಸದ್ಯ, ಪರಮೇಶ್ವರ ಡಿಸಿಎಂ ಆಗಿದ್ದಾರೆ. ಅವರ ಅರ್ಹತೆ ಬಗ್ಗೆ ಪ್ರಶ್ನೆ ಮಾಡುವಂತಿಲ್ಲ. ಅವರು ಸಿಎಂ ಸ್ಥಾನಕ್ಕೆ ಸಮರ್ಥರಿದ್ದಾರೆ. ಎರಡೂ ಪಕ್ಷಗಳ ನಿರ್ಧಾರದಂತೆ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾರೆ. ಇದು ಪಕ್ಷದ ಹೈಕಮಾಂಡ್ ತೀರ್ಮಾನವೂ ಆಗಿದೆ' ಎಂದು ಕೃಷಿ ಸಚಿವ ಶಿವಶಂಕರ್ ರೆಡ್ಡಿ ಹೇಳಿದ್ದಾರೆ.












Click it and Unblock the Notifications