ಕಾಂಗ್ರೆಸ್ ನಿಂದ ಭರವಸೆಗಳ ಮಹಾಪೂರ; ನೇಕಾರರಿಗೆ 10 ಹೆಚ್.ಪಿ ವರೆಗೆ ವಿದ್ಯುತ್ ಉಚಿತ: ಸಿದ್ದರಾಮಯ್ಯ
ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ರೆಡಿಯಾಗಿದ್ದು, ದಿನೇ ದಿನೇ ಕಾಂಗ್ರೆಸ್ ಗ್ಯಾರಂಟಿ ಘೋಷಣೆಯನ್ನ ಮಾಡುವ ಮೂಲಕ ಜನರನ್ನ ಸೆಳೆಯುವ ಪ್ರಯತ್ನವನ್ನ ನಡೆಸುತ್ತಿದೆ.
ಬಾಗಲಕೋಟೆ,ಫೆಬ್ರವರಿ28: ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ರೆಡಿಯಾಗಿದೆ. ಹೀಗಾಗಿ ದಿನೇ ದಿನೇ ಕಾಂಗ್ರೆಸ್ ಗ್ಯಾರಂಟಿ ಘೋಷಣೆಯನ್ನ ಮಾಡುವ ಮೂಲಕ ಜನರನ್ನ ಸೆಳೆಯುವ ಪ್ರಯತ್ನವನ್ನ ನಡೆಸುತ್ತಿದೆ.
ಈ ನಡುವೆ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯನ್ನ ನಡೆಸುತ್ತಿದ್ದು, ಸೋಮವಾರ ಬಾಗಲಕೋಟೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನವರು ನಾವು ಅಧಿಕಾರಕ್ಕೆ ಬಂದರೆ ನೇಕಾರರಿಗೆ 10 ಹೆಚ್.ಪಿ ವರೆಗೆ ಉಚಿತವಾಗಿ ವಿದ್ಯುತ್ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಈ ಕ್ಷೇತ್ರದಲ್ಲಿ ನೇಕಾರರು ಬಹಳಷ್ಟು ಮಂದಿ ಇದ್ದಾರೆ, ನೇಕಾರರು ಬಳಕೆ ಮಾಡುವ ವಿದ್ಯುತ್ ಬೆಲೆ ಯುನಿಟ್ ಗೆ 4.50 ರೂ. ಇತ್ತು ಅದನ್ನು ನಾನು ಹಣಕಾಸು ಸಚಿವನಾಗಿರುವಾಗ 1.25 ರೂ. ಗೆ ಕಡಿಮೆ ಮಾಡಿಕೊಟ್ಟಿದ್ದೆ. ಮುಂದೆ ನಾವು ಅಧಿಕಾರಕ್ಕೆ ಬಂದರೆ ನೇಕಾರರಿಗೆ 10 ಹೆಚ್.ಪಿ ವರೆಗೆ ಉಚಿತವಾಗಿ ವಿದ್ಯುತ್ ನೀಡುತ್ತೇವೆ. ನಾನು ಮುಖ್ಯಮಂತ್ರಿಯಾಗಿರುವಾಗ ಎರಡು ಬಾರಿ ನೇಕಾರರ ಸಾಲ ಮನ್ನಾ ಮಾಡಿದ್ದೆ, ಮನೆ ಕಟ್ಟಿಸಿಕೊಟ್ಟಿದ್ದೆ. ಮುಂದೆ ಕೂಡ ನಾವು ಅಧಿಕಾರಕ್ಕೆ ಬಂದ ಕೂಡಲೇ ನೇಕಾರ ಸಮುದಾಯದ ಕೂಲಿಕಾರರಿಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ಕೊಡುತ್ತೇವೆ.
ಸಿದ್ದು ಸವದಿ ಇಲ್ಲಿ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಪತ್ರಿಕೆಗಳಲ್ಲಿ ಬಂದಿದೆ, ಸಿದ್ದು ಸವದಿ ಮಾತ್ರವಲ್ಲ, ಇಡೀ ಸರ್ಕಾರವೇ 40% ಕಮಿಷನ್ ಹೊಡೆದು ಕೋಟ್ಯಂತರ ರೂಪಾಯಿ ಬೇನಾಮಿ ಆಸ್ತಿ ಮಾಡಿಕೊಂಡಿದ್ದಾರೆ. ಅವರ ಸುಳ್ಳು ಭರವಸೆಗಳು, ಬಣ್ಣದ ಮಾತುಗಳನ್ನು ನಂಬಿ ಮತ್ತೆ ಮತ ಹಾಕಿ ಮೋಸ ಹೋಗಬೇಡಿ ಎಂದು ಜನರಿಗೆ ಹೇಳಿದ್ದಾರೆ.
ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ 16 ಜನ ನಮ್ಮ ಪಕ್ಷದ ಟಿಕೇಟ್ ಆಕಾಂಕ್ಷಿಗಳು ಇದ್ದಾರೆ, ಅವರೆಲ್ಲರಲ್ಲಿ ನನ್ನದೊಂದು ಮನವಿ, ಇಂದು ಇಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲು ಯಾವ ರೀತಿ ಒಗ್ಗಟ್ಟಾಗಿ ಕೆಲಸ ಮಾಡಿದ್ದೀರಿ, ನಾವು ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯುವುದು ನಮ್ಮ ನಿಮ್ಮಲ್ಲರ ಕೆಲಸ ಮಾಡಬೇಕು. ಚುನಾವಣೆಯಲ್ಲಿ ಕೂಡ ಇದೇ ಒಗ್ಗಟ್ಟನ್ನು ತೋರಿ ಟಿಕೇಟ್ ಸಿಕ್ಕ ನಮ್ಮ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.

ನಾವು ಅಧಿಕಾರದಲ್ಲಿದ್ದಾಗ 7 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದೆವು, ಈ ಬಿಜೆಪಿ ಸರ್ಕಾರ ಅದನ್ನು 5 ಕೆ.ಜಿ ಗೆ ಇಳಿಸಿದ್ದಾರೆ. ಮತ್ತೆ ನಾವು ಅಧಿಕಾರಕ್ಕೆ ಬಂದ ಕೂಡಲೇ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ. ಇದನ್ನು ಮೊನ್ನೆ ನಮ್ಮ ಮೂರನೇ ಗ್ಯಾರೆಂಟಿಯಾಗಿ ಘೋಷಣೆ ಮಾಡಿದ್ದೇವೆ.
2013ರಲ್ಲಿ ಬಸವ ಜಯಂತಿಯ ದಿನ ಅಧಿಕಾರ ಸ್ವೀಕಾರ ಮಾಡಿ ನೇರವಾಗಿ ಕ್ಯಾಬಿನೆಟ್ ಹಾಲಿಗೆ ಹೋಗಿ ಅನ್ನಭಾಗ್ಯ, ಕೃಷಿಭಾಗ್ಯ, ಸಾಲ ಮನ್ನಾ ಮುಂತಾದ 5 ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಬಸವ ಜಯಂತಿ ದಿನ ಪ್ರಮಾಣ ವಚನ ಸ್ವೀಕಾರ ಮಾಡುವ ಜೊತೆಗೆ ಬಸವಾದಿ ಶರಣರಂತೆ ನುಡಿದಂತೆ ನಡೆಯಬೇಕು ಎಂಬ ಪ್ರಮಾಣವನ್ನು ಸ್ವೀಕಾರ ಮಾಡಿದ್ದೆ.
ಇಂದು ರಾಜ್ಯದ ಜನ ಬೆಲೆಯೇರಿಕೆಯಿಂದ ತತ್ತರಿಸಿ ಹೋಗಿದ್ದಾರೆ, ಅವರ ನೆರವಿಗೆ ಧಾವಿಸಬೇಕು ಎಂಬ ಕಾರಣಕ್ಕೆ ನಾವು ಅಧಿಕಾರಕ್ಕೆ ಬಂದ ಕೂಡಲೇ ರಾಜ್ಯದ ಪ್ರತೀ ಮನೆಗೆ 200 ಯುನಿಟ್ ಉಚಿತವಾಗಿ ನೀಡಲಿದ್ದೇವೆ, ಇದರ ಜೊತೆಗೆ ಪ್ರತೀ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂ. ನಂತೆ ವರ್ಷಕ್ಕೆ 24,000 ರೂ. ನೀಡುತ್ತೇವೆ.
ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಸಾಲ ಪಡೆದು ಪ್ರಾಮಾಣಿಕವಾಗಿ ಮರುಪಾವತಿ ಮಾಡುತ್ತಿರುವ ಮಹಿಳೆಯರ ಬಾಕಿ ಉಳಿದಿರುವ ಒಟ್ಟು ಸಾಲ 2,227 ಕೋಟಿ ರೂಪಾಯಿಯನ್ನು ಕೂಡ ನಾವು ಅಧಿಕಾರಕ್ಕೆ ಬಂದ ಕೂಡಲೇ ಮನ್ನಾ ಮಾಡುವ ಯೋಚನೆ ಮಾಡಿದ್ದೇವೆ. ನಾವು ನುಡಿದಂತೆ ನಡೆಯುವವರು, ಮುಂದೆಯೂ ನಾವು ಅಧಿಕಾರಕ್ಕೆ ಬಂದ ಮೇಲೆ ಕೊಟ್ಟ ಮಾತಿನಂತೆ ಖಂಡಿತಾ ನಡೆದುಕೊಳ್ಳುತ್ತೇವೆ. ನಿಮಗೆ ನಮ್ಮ ಮಾತಿನ ಮೇಲೆ ನಂಬಿಕೆ ಇದೆಯಲ್ವಾ? ಎಂದು ಪ್ರಶ್ನಿಸಿದರು.












Click it and Unblock the Notifications