ಕರ್ನಾಟಕದಲ್ಲಿ ಫಾಕ್ಸ್ಕಾನ್ ಹೂಡಿಕೆ; ಇಕ್ಕಟ್ಟಿಗೆ ಸಿಲುಕಿದ ಸಿಎಂ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫಾಕ್ಸ್ ಕಾನ್ ಕಂಪನಿಗೆ ಸರ್ಕಾರದಿಂದ ಎಲ್ಲಾ ಅಗತ್ಯ ರೀತಿಯ ನೆರವನ್ನು ನೀಡಲಾಗುವುದು ಎಂದು ಟ್ವೀಟ್ ಮಾಡಿದ್ದರು. ಈಗ ಅವರು ಇಕ್ಕಟ್ಟಿಗೆ ಸಿಲುಕಿದ್ದಾರೆ.
ಬೆಂಗಳೂರು, ಮಾರ್ಚ್ 05; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಡಿರುವ ಟ್ವೀಟ್ ಒಂದು ಸುದ್ದಿಗೆ ಕಾರಣವಾಗಿದೆ. ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಇದೇ ಟ್ವೀಟ್ ಮುಂದಿಟ್ಟುಕೊಂಡು ಕರ್ನಾಟಕದ ಬಿಜೆಪಿ ಸರ್ಕಾರದ ಮೇಲೆ ಟೀಕೆ ಮಾಡಿವೆ. ಈ ಸರ್ಕಾರದ್ದು ಬರೀ ಬಾಯಿ ಮಾತಿನ ಪ್ರಚಾರ ಮಾತ್ರ, ಕೆಲಸ ಆಗಿಲ್ಲ ಎಂದು ಆರೋಪಿಸಿವೆ.
ಮಾರ್ಚ್ 4ರಂದು ಬಸವರಾಜ ಬೊಮ್ಮಾಯಿ ಕರ್ನಾಟಕದ ಮುಖ್ಯಮಂತ್ರಿಗಳ ಅಧಿಕೃತ ಖಾತೆಯಿಂದ, 'ಆಪಲ್ ಐಫೋನ್ ಸೇರಿದಂತೆ ಹಲವು ಇಲೆಕ್ಟ್ರಾನಿಕ್ಸ್ ಸಾಧನಗಳ ತಯಾರಿಕಾ ಕಂಪೆನಿಯಾದ ಫಾಕ್ಸ್ ಕಾನ್ ಕಂಪನಿಯು ರಾಜ್ಯದಲ್ಲಿ ಶೀಘ್ರದಲ್ಲಿಯೇ ಆರಂಭವಾಗಲಿದ್ದು, ಇದರಿಂದ ಒಂದು ಲಕ್ಷ ಉದ್ಯೋಗ ಸೃಜನೆಯಾಗುವ ನೀರಿಕ್ಷೆಯಿದೆ. ಫಾಕ್ಸ್ ಕಾನ್ ಕಂಪನಿಗೆ ಸರ್ಕಾರದಿಂದ ಎಲ್ಲಾ ಅಗತ್ಯ ರೀತಿಯ ನೆರವನ್ನು ನೀಡಲಾಗುವುದು' ಎಂದು ಟ್ವೀಟ್ ಮಾಡಿದ್ದರು.

ಈ ಟ್ವೀಟ್ ಬಳಿಕ ಕರ್ನಾಟಕದಲ್ಲಿ ಕಂಪನಿ ಹೂಡಿಕೆ ಮಾಡಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆಪಲ್ನ ಐಫೋನ್ ಸೇರಿದಂತೆ ಹಲವು ಎಲೆಕ್ಟ್ರಾನಿಕ್ ಸಾಧನಗಳನ್ನು ತಯಾರು ಮಾಡುವ ಕಂಪನಿಯಾಗಿದೆ ಫಾಕ್ಸ್ಕಾನ್. ಆದರೆ ಈಗ ಕಂಪನಿಯೇ ಭಾರತದಲ್ಲಿ ಹೂಡಿಕೆ ಮಾಡುವ ಯಾವುದೇ ಒಪ್ಪಂದ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದು ಕರ್ನಾಟಕದಲ್ಲಿ ಕಾಂಗ್ರೆಸ್, ಜೆಡಿಎಸ್ ಕೈಗೆ ಸರ್ಕಾರದ ವಿರುದ್ಧದ ಹೋರಾಟಕ್ಕೆ ಹೊಸ ಅಸ್ತ್ರ ಕೊಟ್ಟಂತೆ ಆಗಿದೆ.
ಕಂಪನಿ ನೀಡಿರುವ ಸ್ಪಷ್ಟನೆ ಏನು?; ಫಾಕ್ಸ್ಕಾನ್ ಅಧ್ಯಕ್ಷ ಯುಂಗ್ ಲಿಯು ಭಾರತಕ್ಕೆ ಭೇಟಿ ನೀಡಿರುವುದು ನಿಜ. ಆದರೆ ದೇಶದಲ್ಲಿ ಹೊಸದಾಗಿ ಹೂಡಿಕೆ ಮಾಡುವ ಸಂಬಂಧ ಯಾವುದೇ ಅಂತಿಮ ಒಪ್ಪಂದವನ್ನು ಮಾಡಿಕೊಳ್ಳಲಾಗಿಲ್ಲ ಎಂದು ಫಾಕ್ಸ್ಕಾನ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ. ಇದರಿಂದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಡಿದ್ದ ಫಾಕ್ಸ್ ಕಾನ್ ಕಂಪನಿಯು ರಾಜ್ಯದಲ್ಲಿ ಶೀಘ್ರದಲ್ಲಿಯೇ ಆರಂಭವಾಗಲಿದ್ದು, ಇದರಿಂದ ಒಂದು ಲಕ್ಷ ಉದ್ಯೋಗ ಸೃಜನೆಯಾಗುವ ನಿರೀಕ್ಷೆ ಇದೆ ಎಂಬ ಟ್ವೀಟ್ ಬಗ್ಗೆ ಚರ್ಚೆಗಳು ಆರಂಭವಾಗಿವೆ.
LIER - LIER, Thy name is @BSBommai !
— Randeep Singh Surjewala (@rssurjewala) March 5, 2023
CM Bommai’s claim of Foxconn signing agreement with Bommai Govt, making Apple iPhones & creating 1,00,000 jobs are AN EXERCISE IN “FAKERY” !
Probably cancelled because they didn’t give 40% Commission.
CM Bommai should publicly apologize! pic.twitter.com/gWiwL4qt9B
ಫಾಕ್ಸ್ ಕಾನ್ ವಿಚಾರದಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ವಾಗ್ದಾಳಿ ನಡೆಸಿದೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬೊಮ್ಮಾಯಿ ಸುಳ್ಳುಗಾರ, ಫಾಕ್ಸ್ ಕಾನ್ ಘಟಕದಿಂದ 1 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದರು. ಬಹುಶಃ ಶೇ 40ರಷ್ಟು ಕಮೀಷನ್ ಕೇಳಿದ ಕಾರಣಕ್ಕೆ ಘಟಕ ರದ್ದಾಗಿರಬಹುದು ಎಂದು ಟೀಕಿಸಿದ್ದಾರೆ. ಮುಖ್ಯಮಂತ್ರಿಗಳು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಫಾಕ್ಸ್ ಕಾನ್ ಕಂಪನಿ ಕರ್ನಾಟಕದಲ್ಲಿ 5,740 ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ವರದಿಯಾಗಿತ್ತು. ಭಾರತಕ್ಕೆ ಯುಂಗ್ ಲಿಯು ಫೆಬ್ರವರಿ 27 ರಿಂದ ಮಾರ್ಚ್ 4ರ ತನಕ ಭಾರತದಲ್ಲಿದ್ದರು. ಆದರೆ ಈ ವೇಳೆ ಯಾವುದೇ ಹೂಡಿಕೆ ಒಪ್ಪಂದಗಳು ಅಂತಿಮಗೊಂಡಿಲ್ಲ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ. ತೆಲಂಗಾಣದಲ್ಲಿ ಸಹ ಫಾಕ್ಸ್ ಕಾನ್ ಘಟಕ ಸ್ಥಾಪನೆ ಮಾಡಲಿದೆ ಎಂದು ತೆಲಂಗಾಣ ಮುಖ್ಯಮಂತ್ರಿಗಳ ಕಚೇರಿ ಶುಕ್ರವಾರ ಟ್ವೀಟ್ ಮಾಡಿತ್ತು.
ತನ್ನ ಸ್ಪಷ್ಟನೆಯಲ್ಲಿ ಫಾಕ್ಸ್ ಕಾನ್ ಕಂಪನಿ ಸಮಾಲೋಚನೆ ಮತ್ತು ಆಂತರಿಕ ಪರಿಶೀಲನೆ ನಡೆಯುತ್ತಿದೆ. ಭಾರತದಲ್ಲಿ ಹೂಡಿಕೆ ಮಾಡುವ ಕುರಿತು ಮಾಧ್ಯಮಗಳಲ್ಲಿ ಬಂದಿರುವ ಮಾಹಿತಿಯನ್ನು ಫಾಕ್ಸ್ ಕಾನ್ ಬಿಡುಗಡೆ ಮಾಡಿಲ್ಲ ಎಂದು ತಿಳಿಸಲಾಗಿದೆ. ತಮಿಳುನಾಡಿನಲ್ಲಿ ಇರುವ ಘಟಕದಲ್ಲಿ ಫಾಕ್ಸ್ ಕಾನ್ ಕಂಪನಿಯು 2019ರಿಂದ ಐಫೋನ್ಗಳನ್ನು ತಯಾರಿಸುತ್ತಿದೆ. ವಿಸ್ಟ್ರಾನ್ ಮತ್ತು ಪೆಗಟ್ರಾನ್ ಕಂಪನಿಗಳು ಭಾರತದಲ್ಲಿ ಆಪಲ್ ಕಂಪನಿಯ ಸ್ಮಾರ್ಟ್ ಸಾಧನಗಳ ತಯಾರಿಕೆ ಮತ್ತು ಜೋಡಣೆ ಮಾಡುತ್ತಿದೆ.
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಹ ಈ ಕುರಿತು ಟ್ವೀಟ್ ಮಾಡಿದ್ದಾರೆ. ರಾಜ್ಯ ಬಿಜೆಪಿ ಸರಕಾರದ್ದು ಪ್ರಚಾರ ಜಾಸ್ತಿ, ಫಲಿತಾಂಶ ನಾಸ್ತಿ ಎನ್ನುವ ನೀತಿ. ಇದೇ ಅದರ ಘೋಷವಾಕ್ಯ, ಧ್ಯೇಯವಾಕ್ಯ. ಜಾಹೀರಾತುಗಳಲ್ಲಿಯೇ ಜಳಕ ಮಾಡುತ್ತಿರುವ ಈ ಸರಕಾರಕ್ಕೆ ಜನರ ಕ್ಷೇಮ, ಅಭಿವೃದ್ಧಿಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ, ಉದ್ಯೋಗ ಸೃಷ್ಟಿ ಬಗ್ಗೆ ಎಳ್ಳಷ್ಟೂ ದೂರದೃಷ್ಟಿ ಇಲ್ಲ ಎಂದು ಆರೋಪಿಸಿದ್ದಾರೆ.












Click it and Unblock the Notifications