ಸರ್ಕಾರಿ ನೌಕರರಿಗೆ ಕರ್ನಾಟಕ ಸರ್ಕಾರದಿಂದ ಬಂಪರ್ ಕೊಡುಗೆ
Recommended Video
ಬೆಂಗಳೂರು, ಮೇ 28 : ಕರ್ನಾಟಕ ಸರ್ಕಾರ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ ನೀಡಿದೆ. ಸರ್ಕಾರಿ ಕಚೇರಿಗಳಿಗೆ 4ನೇ ಶನಿವಾರ ರಜೆ ಘೋಷಣೆ ಮಾಡಿದೆ. ಆದರೆ, ಕೆಲವು ಜಯಂತಿಗಳಿಗೆ ನೀಡುತ್ತಿದ್ದ ರಜೆಯನ್ನು ರದ್ದುಗೊಳಿಸಿದೆ.
6ನೇ ವೇತನ ಆಯೋಗ ತನ್ನ 2ನೇ ವರದಿಯಲ್ಲಿ ನಾಲ್ಕನೇ ಶನಿವಾರ ರಜೆ ನೀಡುವ ಕುರಿತು ಶಿಫಾರಸು ಮಾಡಿತ್ತು. ಸರ್ಕಾರ ಈ ಶಿಫಾರಸಿಗೆ ಒಪ್ಪಿಗೆ ನೀಡಿದೆ. ಇದರಿಂದಾಗಿ 2ನೇ ಶನಿವಾರದ ಜೊತೆಗೆ 4ನೇ ಶನಿವಾರವೂ ರಾಜ್ಯ ಸರ್ಕಾರಿ ನೌಕರರಿಗೆ ರಜೆ ಸಿಗಲಿದೆ.
ಮಂಗಳವಾರ ಸಿಬ್ಭಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಕುರಿತು ಆದೇಶ ಹೊರಡಿಸಿದೆ. ಪ್ರತಿ ತಿಂಗಳ 4ನೇ ಶನಿವಾರದ ರಜೆಯು ನೌಕರರ ತೃಪ್ತಿಯ ಮಟ್ಟವನ್ನು ಹೆಚ್ಚಿಸಲಿದ್ದು, ಅವರ ಕಾರ್ಯಕ್ಷಮತೆಯಲ್ಲಿ ಸಕಾರಾತ್ಮಕ ಪರಿಣಾಮ ಆಗುವ ಸಾಧ್ಯತೆ ಇದೆ ಎಂದು ಆದೇಶ ಹೇಳಿದೆ.
ಪ್ರತಿ ವರ್ಷದ ಕರ್ತವ್ಯದ ದಿನಗಳ ಸಂಖ್ಯೆಯಲ್ಲಿ ಯಾವುದೇ ಗಣನೀಯ ಇಳಿಕೆ ಇಲ್ಲದೆ ಸರ್ಕಾರಿ ನೌಕರರಿಗೆ ಒಂದು ತಿಂಗಳಿನಲ್ಲಿ ಎರಡು ದಿನಗಳ ಎರಡು ವಾರಾಂತ್ಯಗಳು ದೊರೆಯಲಿದ್ದು, ತಮ್ಮ ಖಾಸಗಿ/ಕೌಟುಂಬಿಕ ಕರ್ತವ್ಯಗಳ ನಿರ್ವಹಣೆಗೆ ಅವಕಾಶ ಸಿಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ರಜೆಗಳಲ್ಲಿ ಬದಲಾವಣೆ
4ನೇ ಶನಿವಾರವೂ ರಾಜ್ಯ ಸರ್ಕಾರಿ ನೌಕರರಿಗೆ ರಜೆ ದೊರೆಯುವಂತೆ ಕರ್ನಾಟಕ ಸರ್ಕಾರ ಆದೇಶ ಮಾಡಿದೆ. ಆದರೆ, ಪ್ರಸ್ತುತ ಇರುವ ಸಾಂಧರ್ಬಿಕ ರಜೆಯನ್ನು 15 ದಿನಗಳಿಂದ 12 ದಿನಗಳಿಗೆ ಇಳಿಕೆ ಮಾಡಲು ಅನುಮೋದನೆ ಸಿಕ್ಕಿದೆ.

ಜಯಂತಿಗಳ ರಜೆಗಳು ಕಡಿತ
ಪ್ರಸ್ತುತ ಇರುವ ಮಹಾವೀರ ಜಯಂತಿ, ಬಸವ ಜಯಂತಿ, ವಾಲ್ಮೀಕಿ ಜಯಂತಿ, ಕನಕದಾಸ ಜಯಂತಿ, ಕಾರ್ಮಿಕ ದಿನಾಚರಣೆಗೆ ಇರುವ ಸಾರ್ವತ್ರಿಕ ರಜೆಗಳನ್ನು ರದ್ದುಪಡಿಸಿ ಅವುಗಳನ್ನು ಕೆಲಸದ ದಿನಗಳಾಗಿ ಪರಿವರ್ತಿಸಲು ಆದೇಶ ನೀಡಲಾಗಿದೆ.

ಕೆಲಸದ ದಿನಗಳ ಪಟ್ಟಿ
ಗುಡ್ ಫ್ರೈಡೇ, ಮಹಾಲಯ ಅಮಾವಾಸ್ಯೆ ಮತ್ತು ಈದ್ ಮಿಲಾದ್ ಹಬ್ಬದ ದಿನದಂದು ಇರುವ ರಜೆಯನ್ನು ರದ್ದುಪಡಿಸಿ ಅವುಗಳನ್ನು ಕೆಲಸದ ದಿನಗಳನ್ನಾಗಿ ಪರಿವರ್ತಿಸಲು ಒಪ್ಪಿಗೆ ಸಿಕ್ಕಿದೆ.

ದೀಪಾವಳಿ ರಜೆ ಪಟ್ಟಿ
ದೀಪಾವಳಿ ಹಬ್ಬದ ನಿಮಿತ್ತ ನೀಡುವ 2 ರಜೆಗಳನ್ನು 1 ಮತ್ತು 3ನೇ ದಿನ ನೀಡುವ ಬದಲು 1 ಮತ್ತು 2ನೇ ದಿನ ನೀಡಲು ಒಪ್ಪಿಗೆ ನೀಡಲಾಗಿದೆ.
ಜಯಂತಿಗಳು ಮತ್ತು ಧಾರ್ಮಿಕ ಹಬ್ಬಗಳನ್ನು ನಿರ್ಬಂಧಿತ ರಜೆಯೆಂದು ಘೋಷಿಸುವುದು ಮತ್ತು ಈ ಮಹಾನುಭವರ ಜಯಂತಿಗಳನ್ನು ಆಚರಿಸುವುದನ್ನು ಯತಾವತ್ತಾಗಿ ಮುಂದುವರೆಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.












Click it and Unblock the Notifications