ಯಡಿಯೂರಪ್ಪನವರನ್ನು ಟ್ರ್ಯಾಪ್ ಮಾಡಲು ನಾಲ್ವರನ್ನು 'ಛೂ' ಬಿಟ್ಟವರಾರು?
ಬೆಂಗಳೂರು, ಜುಲೈ 4: ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ ನಂತರ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರನ್ನು ಟ್ರ್ಯಾಪ್ ಮಾಡಲು ಪ್ರಯತ್ನಿಸಲಾಗಿತ್ತೇ?
ಈ ರೀತಿಯ ವಿಫಲ ಪ್ರಯತ್ನವೊಂದು ನಡೆದಿತ್ತು ಎಂದು ಬಿಜೆಪಿ ವಲಯದಿಂದ ಕೇಳಿ ಬರಲಾರಂಭಿಸಿದೆ. ಇಬ್ಬರು ಶಾಸಕರು ರಾಜೀನಾಮೆ ಹಿಂದೆ ಬಿಜೆಪಿ ಕೇಂದ್ರ ನಾಯಕರ ಕೈವಾಡವಿದೆ ಎಂದು ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಆರೋಪಿಸಿದ್ದರು.
ಆನಂದ್ ಸಿಂಗ್ ರಾಜೀನಾಮೆ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆಯೇ, ಶಾಸಕರು ಎಂದು ತಮ್ಮನ್ನು ಪರಿಚಯಿಸಿಕೊಂಡ ನಾಲ್ವರು ಯಡಿಯೂರಪ್ಪನವರಿಗೆ ದೂರವಾಣಿ ಕರೆ ಮಾಡಿದ್ದರು ಎಂದು ಹೇಳಲಾಗುತ್ತಿದೆ.

'ಸರ್, ಅಭಿನಂದನೆಗಳು ನಿಮಗೆ.. ಪ್ರಮಾಣವಚನಕ್ಕೆ ಯಾವ ದಿನ ನಿಗದಿ ಮಾಡಿದ್ದೀರಿ, ನಾವು ಕೂಡಾ ನಿಮ್ಮ ಜೊತೆಗೆ ಬರುತ್ತೇವೆ' ಎಂದು ಫೋನ್ ನಲ್ಲಿ ಕರೆ ಮಾಡಿದವರು ಮಾತು ಶುರು ಹಚ್ಚಿಕೊಂಡಿದ್ದಾರೆ.
ಆದರೆ, ಇದರಲ್ಲೇನೋ ಕುತಂತ್ರವಿದೆ ಎಂದು ಅರಿತ ಯಡಿಯೂರಪ್ಪ, ಫೋನ್ ಮಾಡಿದವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡು, ದೂರವಾಣಿ ಕರೆಯನ್ನು ಕಟ್ ಮಾಡಿದರು ಎನ್ನುವ ಸುದ್ದಿ ಈಗ ಹರಿದಾಡಲಾರಂಭಿಸಿದೆ.
ಈ ಘಟನೆಯ ಸತ್ಯಾಸತ್ಯತೆಯ ಬಗ್ಗೆ ಬಿಜೆಪಿಯಿಂದ ಅಧಿಕೃತ ಹೇಳಿಕೆ ಇನ್ನೂ ಹೊರಬಂದಿಲ್ಲ. ಆನಂದ್ ಸಿಂಗ್ ರಾಜೀನಾಮೆ ನೀಡಿದ ಕೂಡಲೇ, ಯಡಿಯೂರಪ್ಪ ಪತ್ರಿಕಾಗೋಷ್ಠಿಯನ್ನು ಕರೆದಿದ್ದರು.
ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರ ರಾಜೀನಾಮೆ ಕುರಿತು ತಮಗೆ ಯಾವ ಮಾಹಿತಿಯೂ ಇಲ್ಲ. ಹೊಸದಾಗಿ ಮಧ್ಯಂತರ ಚುನಾವಣೆಗೆ ಹೋಗುವ ಪ್ರಶ್ನೆ ಇಲ್ಲ. ನಾವೇನು ಸನ್ಯಾಸಿಗಳೇ? ಪಕ್ಷಕ್ಕೆ ಬಂದ ಮುಖಂಡರೊಂದಿಗೆ ಸೇರಿ ಸರ್ಕಾರ ರಚಿಸಿ ಒಳ್ಳೆಯ ಆಡಳಿತ ನೀಡುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದರು.












Click it and Unblock the Notifications