ಕಾಂಗ್ರೆಸ್ 2ನೇ ಪಟ್ಟಿಯಲ್ಲಿರುವ ಸಚಿವರು ಯಾರು?
ಬೆಂಗಳೂರು, ಮಾ.12 : ಈಗಾಗಲೇ 14 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿರುವ ಕಾಂಗ್ರೆಸ್ ಪಕ್ಷ ತನ್ನ 2ನೇ ಪಟ್ಟಿಯನ್ನು ಬುಧವಾರ ಸಂಜೆ ಅಥವ ಗುರುವಾರ ಬಿಡುಗಡೆ ಮಾಡಲಿದೆ. ಎರಡನೇ ಪಟ್ಟಿಯಲ್ಲಿ ಕೆಲವು ಸಚಿವರ ಹೆಸರು ಇರಲಿದೆ ಎಂದು ಈಗಾಲಗೇ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹೇಳಿದ್ದಾರೆ.
ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ, ಸಕ್ಕರೆ ಸಚಿವ ಪ್ರಕಾಶ್ ಹುಕ್ಕೇರಿ, ಕೃಷಿ ಸಚಿವ ಕೃಷ್ಣ ಭೈರೇಗೌಡ ಮತ್ತು ಐಟಿ-ಬಿಟಿ ಖಾತೆ ಸಚಿವ ಎಸ್.ಆರ್.ಪಾಟೀಲ್ ಅವರ ಹೆಸರನ್ನು ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ಘೋಷಿಸುವ ಸಾಧ್ಯತೆ ಇದೆ. [ಬುಧವಾರ ಸಂಜೆ ಕಾಂಗ್ರೆಸ್ 2ನೇ ಪಟ್ಟಿ]
ಕೃಷ್ಣ ಭೈರೇಗೌಡ ಮತ್ತು ಆಂಜನೇಯ ಈಗಾಗಲೇ ತಾವು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಆದರೆ, ಪಕ್ಷದ ನಾಯಕರು ನಿಮ್ಮ ಸ್ಪರ್ಧೆ ಅನಿವಾರ್ಯ ಎಂದು ಅವರ ಮನೊವೊಲಿಸಿದ್ದಾರೆ. ಪ್ರಕಾಶ್ ಹುಕ್ಕೇರಿ ತಮ್ಮ ಪುತ್ರನಿಗೆ ಟಿಕೆಟ್ ನೀಡುವಂತೆ ಬೇಡಿಕೆ ಮುಂದಿಟ್ಟಿದ್ದಾರೆ. ಯಾವ ಸಚಿವರು ಸ್ಪರ್ಧಿಸಬಹುದು ಎಂಬ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. [ಕಾಂಗ್ರೆಸ್ ಮೊದಲ ಪಟ್ಟಿ]
ಚಿಕ್ಕೋಡಿಯಿಂದ ಹುಕ್ಕೇರಿ
ಸಕ್ಕರೆ ಖಾತೆ ಸಚಿವ ಪ್ರಕಾಶ್ ಹುಕ್ಕೇರಿ ಅವರಿಗೆ ಚಿಕ್ಕೋಡಿ ಕ್ಷೇತದ ಟಿಕೆಟ್ ನೀಡುವ ಸಾಧ್ಯತೆ ಇದೆ. ಆದರೆ, ಅವರು ತಮ್ಮ ಪುತ್ರನಿಗೆ ಟಿಕೆಟ್ ನೀಡಿ ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ಕಾಂಗ್ರೆಸ್ ನಾಯಕರು ತಾವು ಸ್ಪರ್ಧಿಸುವುದಾದದರೆ ಟಿಕೆಟ್ ನೀಡುತ್ತೇವೆ ಎಂದು ಸ್ಪಷ್ಟ ಸಂದೇಶ ಕಳಿಸಿದ್ದಾರೆ. ಆದ್ದರಿಂದ ಪ್ರಕಾಶ್ ಹುಕ್ಕೇರಿ ಹೆಸರು ಎರಡನೇ ಪಟ್ಟಿಯಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ.
ಆಂಜನೇಯಗೆ ಟಿಕೆಟ್ ಸಿಗುತ್ತಾ?
ವಿಧಾನಸೌಧದ ಗೋಡೆ ಕೆಡವಿ ವಿವಾದವೆಬ್ಬಿಸಿದ್ದ ಸಮಾಜ ಕಲ್ಯಾಣ ಸಚಿವ ಎಚ್ ಆಂಜನೇಯ ಅವರನ್ನು ಚಿತ್ರದುರ್ಗ ಕ್ಷೇತ್ರದಿಂದ ಕಣಕ್ಕಿಳಿಸಲು ಪಕ್ಷ ತೀರ್ಮಾನಿಸಿದೆ. ಆದರೆ, ಆಂಜನೇಯ ತಾವು ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ಕ್ಷೇತ್ರದಲ್ಲಿ ಅಭ್ಯರ್ಥಿ ಕೊರತೆ ಎದುರಿಸುತ್ತಿರುವ ಪಕ್ಷ ಎರಡನೇ ಪಟ್ಟಿಯಲ್ಲಿ ಅವರ ಹೆಸರು ಘೋಷಣೆ ಮಾಡುವ ಸಾಧ್ಯತೆ ಇದೆ.
ಬಾಗಲಕೋಟೆಯಿಂದ ಪಾಟೀಲ್
ಕಾಂಗ್ರೆಸ್ ಅಭ್ಯರ್ಥಿ ಬಾಗಲಕೋಟೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂಬ ಮಾತಿದೆ. ಆದರೆ, ಕ್ಷೇತ್ರದಲ್ಲಿ ಸೂಕ್ತ ಅಭ್ಯರ್ಥಿಗಾಗಿ ಪಕ್ಷ ಹುಡುಕಾಟ ನಡೆಸಿದೆ. ಐಟಿ-ಬಿಟಿ ಸಚಿವ ಎಸ್ಆರ್ ಪಾಟೀಲ್ ಅವರನ್ನು ಕ್ಷೇತ್ರದಲ್ಲಿ ಕಣಕ್ಕೆ ಇಳಿಸಲು ತೀರ್ಮಾನಿಸಲಾಗಿದೆ. ಬಹುತೇಕ ಕಾಂಗ್ರೆಸ್ 2ನೇ ಪಟ್ಟಿಯಲ್ಲಿ ಅವರ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ.
ಉತ್ತರದಲ್ಲಿ ಭೈರೇಗೌಡ
ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಹೆಚ್ಚು ಟಿಕೆಟ್ ಆಕಾಂಕ್ಷಿಗಳಿರುವ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳಿವೆ. ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆಗಾಗಿ ಆಂತರಿಕ ಚುನಾವಣೆ ನಡೆಸಬೇಕಾಗಿದೆ. ಕ್ಷೇತ್ರದಲ್ಲಿನ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಡಿವಿ ಸದಾನಂದ ಗೌಡ ಕಣಕ್ಕೆ ಇಳಿದಿದ್ದು, ಅವರಿಗೆ ಪ್ರಬಲ ಪೈಪೋಟಿ ನೀಡಬಲ್ಲ ಅಭ್ಯರ್ಥಿ ಕೃಷ್ಣಭೈರೇಗೌಡ ಎಂದು ವಿಶ್ಲೇಷಿಸಲಾಗುತ್ತಿದೆ. ಆದ್ದರಿಂದ ಆಂತರಿಕ ಚುನಾವಣೆ ನಡೆದರೂ ಭೈರೇಗೌಡರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ.