ಬೊಮ್ಮಾಯಿ ಸರಕಾರದ ಆದೇಶವನ್ನು ಉಲ್ಲಂಘಿಸಿದ ಕೇಂದ್ರದ 4 ಸಚಿವರು
ಒಂದು ವರ್ಷದಿಂದ ಸಿನಿಮಾ ಡಬ್ಬಾದಲ್ಲಿ ಕೂತಿದೆ, ಡೈಲಿ ಬೇಸಿಸ್ನಲ್ಲಿ ಬಡ್ಡಿ ಕಟ್ಟುತ್ತಾ ಇದ್ದೇವೆ, ಪೂರ್ಣ ಸಾಮರ್ಥ್ಯದಿಂದ ಚಿತ್ರಮಂದಿರ ತೆಗೆಯಲು ಅವಕಾಶ ಕೊಡಿ, ನಮಗೂ ಬದುಕಲು ಬಿಡಿ ಎಂದು ಚಿತ್ರರಂಗದವರು ಸರಕಾರಕ್ಕೆ ಮನವಿ ಮಾಡಿದರೆ, ಕೋವಿಡ್ ವಿಚಾರವನ್ನು ಮುಂದಿಡುತ್ತಾರೆ.
ಮುಂಬರುವ ಗಣೇಶ, ಮೊಹರಂ ಹಬ್ಬ ಸೇರಿದಂತೆ ಸರಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಗಣೇಶ ಹಬ್ಬಕ್ಕೆ ಪೆಂಡಾಲ್ ಹಾಕದಂತೆ ನಿರ್ಬಂಧ ಹೇರಲಾಗಿದೆ. ದೇವಸ್ಥಾನಗಳನ್ನು ವೀಕೆಂಡ್ ಮುಚ್ಚುವಂತೆ, ಜಾತ್ರೆ ನಡೆಸದಂತೆ, ಮೆರವಣಿಗೆ ಮಾಡದಂತೆ ಸೂಚಿಸಲಾಗಿದೆ.
ಜೂನ್ ಎಂಟರಂದು ಸರಕಾರ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಎಲ್ಲಾ ರೀತಿಯ ರಾಜಕೀಯ ಸಭೆ/ಸಮಾರಂಭಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ. ಆದರೆ, ತಾವುಗಳು ದೈವಾಂಶ ಸಂಭೂತರಂತೆ ವರ್ತಿಸುವ ರಾಜಕೀಯ ಪಕ್ಷಗಳು ಸರಕಾರದ ಈ ಆದೇಶಕ್ಕೆ ಕವಡೆಕಾಸಿನ ಕಿಮ್ಮತ್ತನ್ನು ನೀಡುತ್ತಿಲ್ಲ. ಇದಕ್ಕೆ ಯಾವ ಪಕ್ಷವೂ ಹೊರತಾಗಿಲ್ಲ.
ಕೋವಿಡ್ ನಿಯಂತ್ರಣಕ್ಕೆ ಸರಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುವುದು ಒಪ್ಪಿಕೊಳ್ಳುವ ವಿಚಾರವಾದರೂ, ರಾಜಕೀಯದರಿಗೆ ಒಂದು ಸಾರ್ವಜನಿಕರಿಗೆ ಇನ್ನೊಂದು ಕೊರೊನಾ ವೈರಸ್ ಕಾಣಿಸಿಕೊಳ್ಳುತ್ತದಾ ಎಂದು ಸಾಮಾಜಿಕ ತಾಣಗಳಲ್ಲಿ ಅಣಕವಾಡಲಾಗುತ್ತಿದೆ. ಬೇಲಿಯೇ ಎದ್ದು ಹೊಲ ಮೇಯ್ದಂಗೆ ಎನ್ನುವ ಮಾತಿನಂತೆ, ಸಚಿವರುಗಳು ತಮ್ಮದೇ ಸರಕಾರದ ಆದೇಶವನ್ನು ಉಲ್ಲಂಘಿಸಿದರೆ, ಅದೂ ಕೇಂದ್ರ ಸಚಿವರುಗಳು?

ಕೋವಿಡ್ ನಿಯಮದ ಸ್ಪಷ್ಟ ಉಲ್ಲಂಘನೆಯನ್ನು ಮಾಡಿದ ಕೇಂದ್ರದ ನಾಲ್ವರು ಸಚಿವರು
ಕೇಂದ್ರ ಸರಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳ ಬಗ್ಗೆ ಜನರಿಗೆ ತಿಳಿಸುವ ಉದ್ದೇಶವನ್ನು ಇಟ್ಟುಕೊಂಡಿರುವ ಜನಾಶೀರ್ವಾದ ಯಾತ್ರೆಯನ್ನು ನಾಲ್ವರು, ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಆರಂಭಿಸಿದ್ದಾರೆ. ಸೋಮವಾರ (ಆಗಸ್ಟ್ 16) ಮೂರು ನಗರಗಳಲ್ಲಿ, ಮಂಗಳವಾರ (ಆಗಸ್ಟ್ 17) ಇನ್ನೊಂದು ನಗರದಲ್ಲಿ ಈ ಯಾತ್ರೆ ಚಾಲನೆಯನ್ನು ಪಡೆದುಕೊಂಡಿದೆ. ಅಧಿಕಾರ ನೀಡಿದ ಜನರ ಋಣ ತೀರಿಸಲು ಅವರ ಮನೆ ಮನೆಗೆ ಹೋಗುತ್ತಿದ್ದೇವೆ ಎನ್ನುವ ಸೆಂಟಿಮೆಂಟ್ ಮಾತುಗಳನ್ನು ನಾಲ್ವರು ಕೇಂದ್ರ ಸಚಿವರು ಆಡಿದ್ದಾರೆ. ಕೋವಿಡ್ ಮಾರ್ಗಸೂಚಿಯ ಪ್ರಕಾರ, ರಾಜಕೀಯ ಸಭೆ ನಡೆಸುವಂತಿಲ್ಲ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತದ ಸಂಸದೆ ಶೋಭಾ ಕರಂದ್ಲಾಜೆ
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವರು ಮತ್ತು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತದ ಸಂಸದರೂ ಆಗಿರುವ ಶೋಭಾ ಕರಂದ್ಲಾಜೆಯವರು ಮಂಡ್ಯದಲ್ಲಿ ಈ ಯಾತ್ರೆಗೆ ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಚಾಲನೆಯನ್ನು ನೀಡಿದ್ದರು. ಇದಾದ ಮೇಲೆ, ಬ್ಯಾಕ್ ಟು ಬ್ಯಾಕ್ ಸಭೆಗಳು. ಅಲ್ಲಿಂದ ಸುತ್ತೂರು ಮಠಕ್ಕೆ ಹೋಗಿದ್ದಾರೆ, ಕಾರ್ಯಕರ್ತರ ಜೊತೆಗೆ ಊಟವನ್ನು ಮಾಡಿದ್ದಾರೆ. ಎಲ್ಲೂ ಕೋವಿಡ್ ನಿಯಮಗಳನ್ನು ಪಾಲಿಸಿಲ್ಲ, ಸಾಮಾಜಿಕ ಅಂತರ ಲೆಕ್ಕಕ್ಕಿಲ್ಲ.

ಭಗವಂತ ಖೂಬಾ, ಹತ್ತು ಕಿಲೋಮೀಟರ್ ಮೆರವಣಿಗೆಯಲ್ಲಿ ಕರೆತರಲಾಯಿತು
ಇನ್ನೊಂದು ಕಡೆ ಹುಬ್ಬಳ್ಳಿಯ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಜನಾಶೀರ್ವಾದ ಯಾತ್ರೆಗೆ ಚಾಲನೆ ನೀಡಿದ್ದಾರೆ. ಇದಾದ ನಂತರ ಶಿವಮೊಗ್ಗದಲ್ಲಿ ಕಾರ್ಯಕ್ರಮ ನಡೆದಿದೆ. ಇನ್ನೊಂದು ಕಡೆ, ಭಗವಂತ ಖೂಬಾ ಅವರು, ಬೀದರ್ನಲ್ಲಿ ಚಿದಂಬರಾಶ್ರಮಕ್ಕೆ ತೆರಳಿ ಈ ಯಾತ್ರೆಯನ್ನು ಆರಂಭಿಸಿದರು. ಇವರನ್ನು ಹತ್ತು ಕಿಲೋಮೀಟರ್ ಮೆರವಣಿಗೆಯಲ್ಲಿ ಕರೆತರಲಾಯಿತು. ಇಲ್ಲಂತೂ, ಸರಕಾರದ ಕೋವಿಡ್ ಮಾರ್ಗಸೂಚಿ ನಗೆಪಾಟಲಿಗೆ ಗುರಿಯಾಗಿದೆ.

ಬೊಮ್ಮಾಯಿ ಸರಕಾರದ ಆದೇಶವನ್ನು ಉಲ್ಲಂಘಿಸಿದ ಕೇಂದ್ರದ 4 ಸಚಿವರು
ಇನ್ನೊಂದು ಕಡೆ, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆ ಸಚಿವರಾದ ಎ. ನಾರಾಯಣಸ್ವಾಮಿಯವರು ಈ ಯಾತ್ರೆಯನ್ನು ಆರಂಭಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಮತ್ತೆ ಇತರ ಕಾರ್ಯಕ್ರಮಗಳಲ್ಲಿ ಎಲ್ಲೂ ಸರಕಾರದ ಕೋವಿಡ್ ನಿಯಮ ಪಾಲನೆಯಾಗಿಲ್ಲ. ಒಟ್ಟಿಗೆ, ಸಾರ್ವಜನಿಕರಿಗೆ ಕೋವಿಡ್ ಮಹಾಮಾರಿ ಮುಗಿಯುವರೆಗೆ ಮಾರ್ಗಸೂಚಿ ಪಾಲನೆ ಮಾಡಿ ಎಂದು ಹೇಳುವ ಜವಾಬ್ದಾರಿ ಸ್ಥಾನದಲ್ಲಿರುವವರೇ ಜವಾಬ್ದಾರಿಯನ್ನು ಮರೆತಿದ್ದಾರೆ. ಆ ಮೂಲಕ, ತಮ್ಮದೇ ರಾಜ್ಯ ಬಿಜೆಪಿ ಸರಕಾರದ ಆದೇಶವನ್ನು ಕೇಂದ್ರ ಸಚಿವರುಗಳು/ಮುಖಂಡರು/ಕಾರ್ಯಕರ್ತರು ಉಲ್ಲಂಘಿಸಿದ್ದಾರೆ












Click it and Unblock the Notifications