ರಾಹುಲ್ ಅಂಗಣದಲ್ಲಿ ಜಾರಕಿಹೊಳಿ, ಸಿಎಂ ವಿರುದ್ದ ದೂರುಗಳ ಸರಮಾಲೆಯಂತೆ?
ಹಲವು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಮಾಜಿ ಸಚಿವ, ಬೆಳಗಾವಿ ಜಿಲ್ಲೆ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದಾರೆ.
ಸಹೋದರನ ಮೇಲಿನ ಸಿಟ್ಟು, ಮುಖ್ಯಮಂತ್ರಿಗಳ ಜೊತೆ ಮನಸ್ತಾಪ, ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಹೆಚ್ಚುತ್ತಿರುವ ಪ್ರಾಭ್ಯಲ್ಯ.. ಹೀಗೆ ಹಲವು ಸಮಸ್ಯೆಗಳನ್ನು ಮುಂದಿಟ್ಟುಕೊಂಡು, ಮಾಜಿ ಸಚಿವ, ಬೆಳಗಾವಿ ಜಿಲ್ಲೆ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದಾರೆ.
ತಿಂಗಳುಗಟ್ಟಲೆ ಕಾದರೂ ಸಿಗದ ಹೈಕಮಾಂಡ್ ಭೇಟಿ ಅವಕಾಶ ಹತ್ತೇ ಗಂಟೆಯಲ್ಲೇ ಸಿಕ್ಕಿದ್ದರಿಂದ, ಸತೀಶ್ ಜಾರಕಿಹೊಳಿ ಮಂಗಳವಾರ (ಮೇ 23) ರಾಹುಲ್ ಗಾಂಧಿಯವರನ್ನು ಭೇಟಿಯಾಗಿ, ಪ್ರಮುಖವಾಗಿ ಸಿದ್ದರಾಮಯ್ಯ ಮತ್ತು ತನ್ನ ಸಹೋದರ ರಮೇಶ್ ಜಾರಕಿಹೊಳಿ ವಿರುದ್ದ ಅಸಮಾಧಾನ ಹೊರಹಾಕಿ ಬಂದಿದ್ದಾರೆ ಎನ್ನುವ ಮಾಹಿತಿಯಿದೆ.
ಎಐಸಿಸಿ ರಾಜ್ಯ ಉಸ್ತುವಾರಿ ಕೆ ಸಿ ವೇಣುಗೋಪಾಲ್, ಸೋಮವಾರ ರಮೇಶ್ ಮತ್ತು ಸತೀಶ್ ಜಾರಕಿಹೊಳಿ ಸಹೋದರರನ್ನು ಕರೆಸಿ, ಇಬ್ಬರ ನಡುವಿನ ಮನಸ್ತಾಪವನ್ನು ದೂರಮಾಡುವ ಕೆಲಸ ಮಾಡಿದ್ದರು. ಆದರೆ, ಇದಾದ ಹತ್ತೇ ಗಂಟೆಯಲ್ಲಿ ಸತೀಶ್ ಜಾರಕಿಹೊಳಿ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ದೂರು ಸಲ್ಲಿಸಿರುವುದು ವೇಣುಗೋಪಾಲ್ ಮತ್ತು ಸಿದ್ದರಾಮಯ್ಯನವರಿಗೆ ತಲೆನೋವಾಗಿ ಪರಿಣಮಿಸಿದೆ.
ನಾನು ಕಾಂಗ್ರೆಸ್ಸಿನಿಂದ ದೂರ ಸರಿಯುತ್ತಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ಸತೀಶ್ ಜಾರಕಿಹೊಳಿ, ರಾಹುಲ್ ಗಾಂಧಿಯವರಿಗೆ ನೀಡಿದ್ದರೂ, ತನ್ನ ಕ್ಷೇತ್ರ ಯಮಕನಮರಡಿಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡದಿದ್ದರೆ. ಬೇರೆ ಪಕ್ಷದ ಟಿಕೆಟಿನಿಂದ ಜಾರಕಿಹೊಳಿ ಸ್ಪರ್ಧಿಸಲೂ ಬಹುದು ಎನ್ನುವ ಮಾತು ಕೇಳಿ ಬರುತ್ತಿದೆ.
ರಾಹುಲ್ ಗಾಂಧಿ ಭೇಟಿ ನಂತರ, ಇದೊಂದು ಸೌಹಾರ್ದಯುತ, ಪಕ್ಷ ಸಂಘಟನೆಗೆ ನಡೆದ ಭೇಟಿಯೆಂದು ಸತೀಶ್ ಜಾರಕಿಹೊಳಿ ಹೇಳಿದ್ದರೂ, ಮುಖ್ಯಮಂತ್ರಿಗಳ ವಿರುದ್ದ ದೂರಿನ ಸರಮಾಲೆಯನ್ನೇ ಜಾರಕಿಹೊಳಿ ನೀಡಿದ್ದಾರೆ ಎನ್ನಲಾಗುತ್ತಿದೆ. ಮುಂದೆ ಓದಿ..

ಲಕ್ಷ್ಮೀ ಹೆಬ್ಬಾಳ್ಕರ್ ಸರ್ವಾಧಿಕಾರಿ ಧೋರಣೆ
ಇತ್ತೀಚಿನ ಕೆಲವು ತಿಂಗಳಿನಿಂದ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸರ್ವಾಧಿಕಾರಿ ಧೋರಣೆ, ಪಕ್ಷಕ್ಕೆ ಮುಳುವಾಗುತ್ತಿದ್ದು ಕೂಡಲೇ ಹೈಕಮಾಂಡ್ ಮಧ್ಯ ಪ್ರವೇಶಿಸಬೇಕೆಂದು ಸತೀಶ್ ಜಾರಕಿಹೊಳಿ ಮನವಿ ಮಾಡಿದ್ದಾರೆ.

ನನ್ನ ಸಹೋದರನಿಗೆ ಟಿಕೆಟ್ ನೀಡಲು ಪ್ರಯತ್ನ
ನನ್ನ ಕ್ಷೇತ್ರ ಯಮಕನಮರಡಿಯಲ್ಲಿ ನನ್ನ ಸಹೋದರ ಲಖನ್ ಜಾರಕಿಹೊಳಿಗೆ ಟಿಕೆಟ್ ನೀಡಲು ರಮೇಶ್ ಜಾರಕಿಹೊಳಿ ಮುಖ್ಯಮಂತ್ರಿಗಳ ಮುಖಾಂತರ ಪ್ರಯತ್ನಿಸುತ್ತಿದ್ದಾರೆ ಎನ್ನುವುದೂ ಸತೀಶ್ ಜಾರಕಿಹೊಳಿ ಅವರ ಮತ್ತೊಂದು ದೂರು.

ಸಿಎಂ ಕಡೆಗಣಿಸುತ್ತಿದ್ದಾರೆ
ಮೂಲ ಕಾಂಗ್ರೆಸ್ಸಿಗರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕಡೆಗಣಿಸುತ್ತಿದ್ದಾರೆ. ನನ್ನ ಬೆಂಬಲದಿಂದಲೇ ಸಿದ್ದರಾಮಯ್ಯ ಸಿಎಂ ಆದರು ಎನ್ನುವುದನ್ನು ಮರೆತು, ಸಹೋದರನ ಜೊತೆ ಸೇರಿ ನನ್ನ ವಿರುದ್ದ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಸತೀಶ್ ಜಾರಕಿಹೊಳಿ, ರಾಹುಲ್ ಭೇಟಿಯ ವೇಳೆ ದೂರಿದ್ದಾರೆ ಎನ್ನುವ ಮಾಹಿತಿಯಿದೆ.

ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ಸಹೋದರನ ರಾಹುಲ್ ಭೇಟಿಯ ನಂತರ ರಮೇಶ್ ಜಾರಕಿಹೊಳಿ ಕೂಡಾ ರಾಹುಲ್ ಭೇಟಿಯಾಗುತ್ತಿದ್ದಾರೆ. ಇಂದು ಅಥವಾ ನಾಳೆ (ಮೇ 25) ಹೈಕಮಾಂಡ್ ಭೇಟಿಯಾಗುವ ಅವಕಾಶ ರಮೇಶ್ ಜಾರಕಿಹೊಳಿಗೆ ಸಿಕ್ಕಿದೆ. ಇವರು ಸಿಎಂ ಪರವಾಗಿ ಬ್ಯಾಟ್ ಮಾಡುವ ಸಾಧ್ಯತೆಯೇ ಹೆಚ್ಚು.

ಎಸ್ ಆರ್ ಪಾಟೀಲ್, ಕೆಪಿಸಿಸಿ ಅಧ್ಯಕ್ಷ ಸಾಧ್ಯತೆ
ಮುಖ್ಯಮಂತ್ರಿ ಬಯಸಿದವರೇ ಕೆಪಿಸಿಸಿ ಅಧ್ಯಕ್ಷರಾಗಲಿದ್ದಾರೆ ಎಂದಿರುವ ಸತೀಶ್ ಜಾರಕಿಹೊಳಿ, ಲಿಂಗಾಯಿತ ಸಮುದಾಯದ ಎಸ್ ಆರ್ ಪಾಟೀಲ್ ಅಧ್ಯಕ್ಷರಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಜಾರಕಿಹೊಳಿ ಹೇಳಿದ್ದಾರೆ.












Click it and Unblock the Notifications