ಬಿಜೆಪಿಗೆ ಸಮೀಕ್ಷೆಯಲ್ಲಿ ಸೋಲು; ಇದಕ್ಕಾಗಿ ಟಿಪ್ಪು, ರಾಣಿ ಅಬ್ಬಕ್ಕ ವಿಚಾರ ಪ್ರಸ್ತಾಪ: ಪ್ರಿಯಾಂಕ್ ಖರ್ಗೆ
ನೀವು ಅಮಿತ್ ಶಾ, ನಾಡ್ಡಾ ಅವರನ್ನು ಎಷ್ಟು ಸಾರಿ ಕರಿಸಿದರು, ಬಿಜೆಪಿ ಸೋಲಿಸಲು ಜನ ತೀರ್ಮಾನ ಮಾಡಿದ್ದಾರೆ. ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಬೆಂಗಳೂರು,ಫೆಬ್ರವರಿ20: ಬಿಜೆಪಿ ಅವರ ಸಮೀಕ್ಷೆಯಲ್ಲಿ ಅವರಿಗೆ ಸೋಲು ಖಚಿತವಾಗಿದ್ದು ಇದಕ್ಕಾಗಿ ಇವರು ಈಗ ಟಿಪ್ಪು, ರಾಣಿ ಅಬ್ಬಕ್ಕ ವಿಚಾರ ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅಮಿತ್ ಶಾ ಅವರಿಗೆ ರಾಣಿ ಅಬ್ಬಕ್ಕ ಯಾರು ಅವರ ಇತಿಹಾಸವೇನು ಎಂದು ಗೊತ್ತೇ ಇಲ್ಲ. ಬೇಕಾದರೆ ಅವರನ್ನು ಕರೆಸಿ ಅವರ ಇತಿಹಾಸ ಏನು ಎಂದು ಹೇಳಲಿ ಎಂದು ಸವಾಲು ಹಾಕುತ್ತೇನೆ ಎಂದರು.
ಬಿಜೆಪಿ ಸರ್ಕಾರ ಚಿಲುಮೆ ಸಂಸ್ಥೆ ಮೂಲಕ ಮತದಾರರ ಪಟ್ಟಿ ಅಕ್ರಮ ಮಾಡಿದ ನಂತರ ಈಗ ರಾಜ್ಯದ ಬೇರೆ ಕ್ಷೇತ್ರಗಳಲ್ಲಿ ಬೇರೆ ರೀತಿಯ ಅಕ್ರಮಕ್ಕೆ ಮುಂದಾಗಿದ್ದು, ಈ ಕುರಿತು ಇಂದು ರಾಜ್ಯ ಮುಖ್ಯಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದೇವೆ. ರಾಜ್ಯದ 46ನೆ ವಿಧಾನ ಸಭಾ ಕ್ಷೇತ್ರವಾಗಿರುವ ಆಳಂದದಲ್ಲಿ ಆನ್ ಲೈನ್ ಮೂಲಕ 6670 ಮತದಾರರ ಹೆಸರನ್ನು ಅವರಿಗೆ ಗೊತ್ತಿಲ್ಲದೇ ಮತದಾರರ ಪಟ್ಟಿಯಿಂದ ಹೆಸರು ರದ್ದು ಮಾಡುವಂತೆ ಅರ್ಜಿ ಹಾಕಲಾಗಿದೆ.

ಮತದಾರರ ಗಮನಕ್ಕೆ ಬಾರದೆ ಹೆಸರು ಕೈ ಬಿಡುವಂತೆ ಮತ್ತೊಬ್ಬರು ಅರ್ಜಿ ಹಾಕಿದ್ದಾರೆ. ಈ ವಿಚಾರವಾಗಿ ನಮ್ಮ ಬೂತ್ ಏಜೆಂಟ್ ಗಳು ಪರಿಶೀಲನೆ ಮಾಡಿದಾಗ, ಅರ್ಜಿಯಲ್ಲಿ ತಾನು ಸ್ಥಳಿಯನಲ್ಲ ನನ್ನ ನಿವಾಸ ಬೇರೆ ರಾಜ್ಯಗಳಲ್ಲಿ ಇದೆ ಎಂದು ಹೇಳಿರುವುದು ಸ್ಪಷ್ಟವಾಗಿದೆ. ಆಮೂಲಕ ಬಹಳ ವ್ಯವಸ್ಥಿತವಾಗಿ ಅಕ್ರಮವಾಗಿ ಮತದಾರರ ಹೆಸರು ಕೈ ಬಿಡಲು ಷಡ್ಯಂತ್ರ ರೂಪಿಸಲಾಗಿದೆ.
ಈ ಬಗ್ಗೆ ತಹಶೀಲ್ದಾರ್ ಹಾಗೂ ಡಿಸಿಗಳಿಗೂ ದೂರುಗಳು ದಾಖಲಾಗಿವೆ. ಕಾನೂನಿನ ಪ್ರಕಾರ ಒಂದು ಮೊಬೈಲ್ ಸಂಖ್ಯೆಯಿಂದ ಗರಿಷ್ಠ ಐದು ಮಂದಿಯ ಹೆಸರು ಕೈಬಿಡಲು ಅರ್ಜಿ ಹಾಕಬಹುದು. ಆದರೆ ಆಳಂದದಲ್ಲಿ ಒಂದು ಬೂತ್ ನಲ್ಲಿ ಒಂದು ಮೊಬೈಲ್ ಸಂಖ್ಯೆಯಲ್ಲಿ 70 ಮತದಾರರ ಹೆಸರು ರದ್ದು ಮಾಡಲು ಅರ್ಜಿ ಹಾಕಲಾಗಿದೆ. ಒಬ್ಬೊಬ್ಬರು 50-70 ಮತದಾರರ ಹೆಸರು ರದ್ದು ಮಾಡಲು ಅರ್ಜಿ ಹಾಕಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

ಚಿಲುಮೆ ಸಂಸ್ಥೆ ಮೂಲಕದ ಅಕ್ರಮ ಬಯಲಿಗೆ ಬಂದ ನಂತರ ಬಿಜೆಪಿ ತಂತ್ರಜ್ಞಾನ ಬಳಸಿ ಈ ಷಡ್ಯಂತ್ರ ಮಾಡುತ್ತಿದೆ? ಅಮಿತ್ ಶಾ ಹಾಗೂ ನಡ್ಡಾ ಅವರು ಸರ್ಕಾರದ ಕೆಲಸ ಪರಿಶೀಲನೆಗಿಂತ ಮತದಾರರ ಹೆಸರು ಕೈಬಿಡುವ ಕೆಲಸ ಪರಿಶೀಲನೆ ಮಾಡಲು ಬರುತ್ತಿದ್ದಾರೆಯೇ? ಬಿಜೆಪಿಯ ಈ ಷಡ್ಯಂತ್ರದ ವಿರುದ್ಧ ನಾವು ದೂರಿನ ಜತೆ ದಾಖಲೆಗಳನ್ನು ನೀಡಿದ್ದೇವೆ. ಈ ವಿಚಾರ ಸಂಪೂರ್ಣವಾಗಿ ಪರಿಶೀಲನೆ ಆಗುವವರೆಗೂ ಯತಾಸ್ಥಿತಿ ಇರಬೇಕು. 224 ಕ್ಷೇತ್ರಗಳಲ್ಲಿ ಈ ರೀತಿ ಅಕ್ರಮವಾಗಿ ಮತದಾರರ ಹೆಸರನ್ನು ಕೈಬಿಡುವ ಷಡ್ಯಂತ್ರ ನಡೆದಿಲ್ಲ ಎಂಬ ಖಚಿತತೆಯನ್ನು ಆಯೋಗ ನೀಡಬೇಕು. ಅಲ್ಲದೆ ಬಿಜೆಪಿ ಈ ಬಗ್ಗೆ ಉತ್ತರ ನೀಡಬೇಕು.
ಮತದಾರರ ಪಟ್ಟಿ ಅಂತಿಮ ಪರಿಷ್ಕರಣೆ ನಂತರ ಈ ರೀತಿ ಆಗಿದೆ. ಶಿವಾಜಿ ನಗರದಲ್ಲಿ ಮತದಾರರ ಹೆಸರು ಕೈಬಿಟ್ಟಿರುವ ಬಗ್ಗೆ ಮಾಹಿತಿ ಇದ್ದು, ರಿಜ್ವಾನ್ ಅರ್ಷದ್ ಅವರು ದೂರು ನೀಡಿದ್ದಾರೆ. ಆದರೆ ಇಲ್ಲಿ ಬೇರೆ ಮಾದರಿಯಲ್ಲಿ ಅಕ್ರಮ ಮಾಡಲಾಗಿದೆ. ಇಷ್ಟು ವ್ಯವಸ್ಥಿತವಾಗಿ ಮಾಡುತ್ತಿರುವವರು ಯಾರು? ಎಂಬುದು ಬೆಳಕಿಗೆ ಬರಬೇಕು.
ಇವರು ಡಿಜಿಟಲ್ ಇಂಡಿಯಾವನ್ನು ಬೇರೆ ಹಂತಕ್ಕೆ ಹೋಗುತ್ತಿದ್ದಾರೆ. ಅವರ ಮುಖ್ಯಮಂತ್ರಿಯೊಬ್ಬರು ಮೊದಲು ಚೆಕ್ ನಿಂದ್ ಲಂಚ ಪಡೆದು ನಂತರ ಆರ್ಟಿ ಜಿಎಸ್ ಮೂಲಕ ಲಂಚ ಪಡೆದರು, ಈ ಮುಖ್ಯಮಂತ್ರಿ ಬಿಟ್ ಕಾಯಿನ್ ಮೂಲಕ ಅಕ್ರಮ ಮಾಡಿದರು. ಈಗ ಚುನಾವಣಾ ಪ್ರಕ್ರಿಯೆಯಲ್ಲಿ ಡಿಜಿಟಲ್ ಮೂಲಕ ಅಕ್ರಮ ಮಾಡಲು ಮುಂದಾಗಿದ್ದಾರೆ.
ಇನ್ನು ಮತದಾರರ ಹೆಸರನ್ನು ಕೈಬಿಡುವಂತೆ ಅರ್ಜಿ ಹಾಕಿರುವವರಲ್ಲಿ ಬಹುತೇಕರು ಯುಪಿ ಬಿಹಾರದವರಾಗಿದ್ದಾರೆ. ಬಿಜೆಪಿ ಹೇಳುವ ಯುಪಿ ಮಾದರಿ ಇದೇನಾ? ಬಿಜೆಪಿಯವರು ಎಷ್ಟೇ ತಿಪ್ಪರಲಾಗ ಹಾಕಿದರೂ ನೀವು ಮತ್ತೆ ಅಧಿಕಾರಕ್ಕೆ ಬರಲ್ಲ. ನೀವು ಅಮಿತ್ ಶಾ, ನಾಡ್ಡಾ ಅವರನ್ನು ಎಷ್ಟು ಸಾರಿ ಕರಿಸಿದರು, ಬಿಜೆಪಿ ಸೋಲಿಸಲು ಜನ ತೀರ್ಮಾನ ಮಾಡಿದ್ದಾರೆ.












Click it and Unblock the Notifications