ಬಿಜೆಪಿಯಲ್ಲಿಯೆ ನನ್ನ ವಿರುದ್ಧ ರಾಜಕೀಯ ತಂತ್ರ: ಎಂಟಿಬಿ ನಾಗರಾಜ್ ಸ್ಪೋಟಕ ಹೇಳಿಕೆ
ಬೆಂಗಳೂರು, ಜೂ. 03: ಹಿಂದಿನ ಮೈತ್ರಿ ಸರ್ಕಾರದಲ್ಲಿ ಮಂತ್ರಿಯಾಗಿದ್ದರೂ ರಾಜೀನಾಮೆ ಕೊಟ್ಟು ತಮ್ಮ ರಾಜಕೀಯ ಭವಿಷ್ಯವನ್ನು ಅತಂತ್ರ ಮಾಡಿಕೊಂಡವರು ಎಂಟಿಬಿ ನಾಗರಾಜ್. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪಕ್ಕಾ ಅನುಯಾಯಿ ಆಗಿದ್ದರೂ ಅದ್ಯಾಕೊ ಮಂತ್ರಿಸ್ಥಾನ ಹಾಗೂ ಶಾಸಕಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾದ ಆರೋಪ ಎದುರಿಸುತ್ತಿದ್ದಾರೆ.
ಇದೀಗ ಪರಿಷತ್ ಚುನಾವಣೆ ಬಂದಿದೆ. ಎಂಟಿಬಿ ನಾಗರಾಜ್ ಅವರು ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಜೊತೆಗೆ ಮಾಜಿ ಸಚಿವ ಎಚ್. ವಿಶ್ವನಾಥ್ ಅವರೂ ಪರಿಷತ್ ಚುನಾವಣೆಗೆ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅವರಿಗೆ ಟಿಕೆಟ್ ಕೊಡುವ ಯಾವುದೇ ಭರವಸೆ ಬಿಜೆಪಿಯಿಂದ ಸಿಕ್ಕಿಲ್ಲ. ಇದೇ ಸಂದರ್ಭದಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಸ್ಪೋಟಕ ಹೇಳಿಕೆ ಕೊಟ್ಟಿದ್ದಾರೆ.

ಬಿಜೆಪಿಯಲ್ಲಿ ನನ್ನ ವಿರುದ್ಧ ತಂತ್ರ
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಚಿವ, ಬಿಜೆಪಿ ನಾಯಕ ಎಂಟಿಬಿ ನಾಗರಾಜ್ ಸ್ಪೋಟಕ ಹೇಳಿಕೆ ಕೊಟ್ಟಿದ್ದಾರೆ. ಎಂಟಿಬಿ ನಾಗಾರಾಜ್ ಮತ್ತೆ ರಾಜಕೀಯವಾಗಿ ಬೆಳೆಯಬಹುದು ಎಂದು ಬಿಜೆಪಿಯಲ್ಲಿ ನನ್ನ ವಿರುದ್ಧ ತಂತ್ರ ಮಾಡಿರಬಹುದು ಎಂದು ಹೇಳುವ ಮೂಲಕ ತಮ್ಮ ಸೋಲಿಗೆ ನೇರವಾಗಿ ಬಿಜೆಪಿ ನಾಯಕರೇ ಕಾರಣ ಎಂಬ ಹೇಳಿಕೆ ಕೊಟ್ಟಿದ್ದಾರೆ.
ಹೇಳುವುದಕ್ಕೆ ಆಗುವುದಿಲ್ಲ. ಎಂ.ಟಿ.ಬಿ. ನಾಗರಾಜ್ ಮಂತ್ರಿಯಾದರೆ ರಾಜಕೀಯ ಶಕ್ತಿಯಾಗಿ ಬೆಳೆಯಬಹುದು ಅಂತ ಶಾಸಕ ಶರತ್ ಬಚ್ಚೇಗೌಡ ಅವರಿಗೆ ಬೆಂಬಲ ಕೊಟ್ಟಿರಬಹುದು ಎಂದಿದ್ದಾರೆ.

ನಂಬಿ ರಾಜೀನಾಮೆ ಕೊಟ್ಟಿದ್ದೇನೆ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಾತಿನ ಮೇಲೆ ನಂಬಿಕೆ ಇಟ್ಟು ರಾಜೀನಾಮೆ ಕೊಟ್ಟು ಬಂದಿದ್ದೇನೆ. ನೀವು ಚುನಾವಣೆಯಲ್ಲಿ ಸೋತಿದ್ದರೂ ನಾವು ಕೈ ಬಿಡಲ್ಲ ಅಂತ ಯಡಿಯೂರಪ್ಪ ಅವರು ಸಾಕಷ್ಟು ಬಾರಿ ಹೇಳಿದ್ದಾರೆ. ಈಗ ವಿಧಾನ ಪರಿಷತ್ ಚುನಾವಣೆ ಬಂದಿದೆ. ಯಡಿಯೂರಪ್ಪ ಅವರು ಕೊಟ್ಟ ಮಾತು ತಪ್ಪಲ್ಲ ಎಂಬ ವಿಶ್ವಾಸ ಇದೆ. ಅವರು ಏನೇ ಮಾಡಲಿ ನನ್ನ ಸಹಮತ ಇದೆ ಎಂದು ಎಂಟಿಬಿ ಹೇಳಿದ್ದಾರೆ.

ನಿಗಮ ಮಂಡಳಿ ಹೇಳಿಲ್ಲ-ಕೇಳಿಲ್ಲ
ಮುಖ್ಯಮಂತ್ರಿ ಯಡಿಯೂರಪ್ಪ ಅವರು ನನಗೆ ಬಿಡಿಎ ಅಧ್ಯಕ್ಷರನ್ನಾಗಿ ಮಾಡುವುದಾಗಿ ಹೇಳಿಲ್ಲ. ನಾನು ನಿರಾಕರಣೆಯನ್ನೂ ಮಾಡಿಲ್ಲ. ಎಲ್ಲವೂ ಉಹಾಪೋಹ ಮಾತ್ರ. ಕೊಡಲ್ಲ ಅಂತ ಅಂದಾಗ ಕೇಳ್ತೀನಿ, ಈಗ ಪ್ರಶ್ನೆ ಇಲ್ಲ. ಕಳೆದ ಒಂದು ವಾರದ ಹಿಂದೆ ಸಿಎಂ ಭೇಟಿಯಾಗಿ ಬಂದಿದ್ದೇನೆ ಎಂದು ಸಿಎಂ ಭೇಟಿಯ ಬಗ್ಗೆ ಮಾತನಾಡಿದ್ದಾರೆ. ಯಾವುದೆ ನಿಗಮ ಮಂಡಳಿ ಯಡಿಯೂರಪ್ಪ ಅವರು ಹೇಳಿಲ್ಲ, ನಾನು ಕೇಳಿಲ್ಲ ಎಂದಿದ್ದಾರೆ.

ಆರ್ಎಸ್ಎಸ್ ಪ್ರಮುಖರಿಗೂ ಗೊತ್ತಿದೆ
ಉಪ ಚುನಾವಣೆಗೂ ಮುನ್ನ ಎಂ.ಟಿ.ಬಿ ನಾಗರಾಜ್ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಿ ಎಂದು ಸಂಸದ ಬಚ್ಚೇಗೌಡರೇ ಹೇಳಿದ್ದರು. ನಂತರ ಬಂಡಾಯ ಎದ್ದು ನನ್ನ ಸೋಲಿಗೆ ಕಾರಣ ಆದರು. ಮಾಜಿ ಸಿಎಂ ಸಿದ್ದರಾಮಯ್ಯ ಅವರು ನನ್ನನ್ನು ಸೋಲಿಸಬೇಕು ಎಂದು ಶಾಸಕ ಭೈರತಿ ಸುರೇಶ್ ಅವರನ್ನ ಎತ್ತಿ ಕಟ್ಟಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಕುಮಾರಸ್ವಾಮಿ ನನ್ನನ್ನು ಸೋಲಿಸಲೇ ಬೇಕು ಅಂತ ನಿರ್ಧಾರ ಮಾಡಿದ್ದರು.
ಬಿಜೆಪಿ ಸರ್ಕಾರ ಬರೋಕೆ ನಾನು ಕಾರಣ ಅಂತ ಡಿಕೆಶಿ, ಕುಮಾರಸ್ವಾಮಿ ದ್ವೇಷದ ರಾಜಕಾರಣ ಮಾಡಿ ಸೋಲಿಸಿದರು. ಇದು ಯಡಿಯೂರಪ್ಪನವರಿಗೆ ಗೊತ್ತಿದೆ. ಶರತ್ ಬಚ್ಚೇಗೌಡ ಇಲ್ದಿದ್ರೆ ನಾನು ಗೆಲ್ತಿದ್ದೆ. ಇದು ನಮ್ ತಪ್ಪಾ? ಅವರ ತಪ್ಪಾ? ಚುನಾವಣೆ ಸಂದರ್ಭ ಸಂಸದ ಬಚ್ಚೇಗೌಡರು ಫೋನ್ ಸ್ವಿಚ್ ಆಫ್ ಮಾಡಿಕೊಂಡರು. ಇದು ಬಿಜೆಪಿ ರಾಜ್ಯ ಅದ್ಯಕ್ಷ ನಳೀನ್ ಕುಮಾರ್ ಕಟೀಲ್, ಆರ್ಎಸ್ಎಸ್ ಪ್ರಮುಖರಿಗೂ ಗೊತ್ತಿದೆ ಎಂದು ಎಂಟಿಬಿ ನಾಗರಾಜ್ ಹೇಳಿದ್ದಾರೆ.












Click it and Unblock the Notifications