ಮಾಜಿ ಸಚಿವ ಎಂ.ಎಂ.ನಾಣಯ್ಯ ವಿಧಿವಶ
ಕೊಡಗು, ಫೆಬ್ರವರಿ 07 : ಹಿರಿಯ ಕಾಂಗ್ರೆಸ್ ಮುಖಂಡ, ಸಜ್ಜನ ರಾಜಕಾರಣಿ ಹಾಗೂ ಮಾಜಿ ಸಚಿವರಾಗಿದ್ದ ಮುಂಡಂಡ ಎಂ. ನಾಣಯ್ಯ ಅವರು ಮಡಿಕೇರಿಯ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಮಧ್ಯಾಹ್ನ ವಿಧಿವಶರಾಗಿದ್ದಾರೆ. ಕೊಡಗಿನ ನಾಪೋಕ್ಲುವಿನ ಬೇತು ಗ್ರಾಮದಲ್ಲಿ ಸೋಮವಾರ ಸಂಜೆ ಅಂತ್ಯಕ್ರಿಯೆ ನಡೆಯಲಿದೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮುಂಡಂಡ ಎಂ. ನಾಣಯ್ಯ (76) ಅವರನ್ನು ಕೆಲವು ದಿನಗಳ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆದು ಅವರು ಮಡಿಕೇರಿಗೆ ವಾಪಸ್ ಆಗಿದ್ದರು. ಕಳೆದವಾರ ಪುನಃ ಅಸ್ವಸ್ಥಗೊಂಡಿದ್ದರಿಂದ ಮಡಿಕೇರಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಅವರು ಮೃತಪಟ್ಟಿದ್ದಾರೆ.
ಕೊಡಗಿನ ರಾಜಕೀಯ ಇತಿಹಾಸದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದ ನಾಣಯ್ಯ ಅವರ ಅಗಲಿಕೆಯಿಂದಾಗಿ ಕಾಂಗ್ರೆಸ್ ಪಕ್ಷ ಹಾಗೂ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವುಂಟಾಗಿದೆ. ಕೊಡಗಿನ ನಾಪೋಕ್ಲುವಿನ ಬೇತು ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ 1.30ಕ್ಕೆ ನಾಣಯ್ಯನವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮುಂಡಂಡ ಎಂ. ನಾಣಯ್ಯ ಅವರು 1969ರಲ್ಲಿ ಪ್ರಥಮ ಬಾರಿಗೆ ನಾಪೋಕ್ಲು ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶಿಸಿದರು. ನಂತರ ಸಚಿವರಾಗಿ, ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದ ಅವರು, ಕೆಲವು ಕಾಲ ರಾಜಕೀಯದಿಂದ ದೂರವುಳಿದಿದ್ದರು.

ಸಜ್ಜನ ರಾಜಕಾರಣಿ ನಾಣಯ್ಯ ಇನ್ನಿಲ್ಲ
ಹಿರಿಯ ಕಾಂಗ್ರೆಸ್ ಮುಖಂಡ, ಸಜ್ಜನ ರಾಜಕಾರಣಿ ಹಾಗೂ ಮಾಜಿ ಸಚಿವರಾಗಿದ್ದ ಮುಂಡಂಡ ಎಂ. ನಾಣಯ್ಯ ಅವರು ಮಡಿಕೇರಿಯ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಮಧ್ಯಾಹ್ನ ವಿಧಿವಶರಾಗಿದ್ದಾರೆ. ಕೊಡಗಿನ ನಾಪೋಕ್ಲುವಿನ ಬೇತು ಗ್ರಾಮದಲ್ಲಿ ಸೋಮವಾರ ಸಂಜೆ ಅಂತ್ಯಕ್ರಿಯೆ ನಡೆಯಲಿದೆ.

ಪಂಚಾಯಿತಿ ಮೂಲಕ ರಾಜಕೀಯ ಪ್ರವೇಶ
ಮುಂಡಂಡ ಎಂ. ನಾಣಯ್ಯ ಅವರು 1969ರಲ್ಲಿ ಪ್ರಥಮ ಬಾರಿಗೆ ನಾಪೋಕ್ಲು ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶಿಸಿದರು. 1978ರಲ್ಲಿ ಮಡಿಕೇರಿ ತಾಲೂಕು ಬೋರ್ಡ್ಗೆ ನಾಪೋಕ್ಲು ಕ್ಷೇತ್ರದಿಂದ ಆಯ್ಕೆಯಾಗುವುದರೊಂದಿಗೆ ಉಪಾಧ್ಯಕ್ಷ ಸ್ಥಾನ ಪಡೆದರು. ತಾಲೂಕು ಬೋರ್ಡ್ನ ಅಧ್ಯಕ್ಷರಾಗಿದ್ದ ಹೆಚ್.ಎಸ್. ವೆಂಕಪ್ಪನವರ ಅಕಾಲಿಕ ಸಾವಿನ ನಂತರ ತಾಲೂಕು ಬೋರ್ಡ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.

ರಾಜಕೀಯದಿಂದ ದೂರವುಳಿದರು
ನಾಣಯ್ಯ ಅವರ ಜನಪರ ಕಾಳಜಿ ಮೆಚ್ಚಿದ ಅಂದಿನ ಮುಖ್ಯಮಂತ್ರಿ ಗುಂಡೂರಾವ್ ಅವರು 1983ರಲ್ಲಿ ಎಂಎಲ್ಎ ಟಿಕೆಟ್ ನೀಡಿದರು. 2 ವರ್ಷಗಳ ಕಾಲ ಕರ್ನಾಟಕ ವಿಧಾನಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ ನಾಣಯ್ಯ ಅವರು ಕೆಲವು ರಾಜಕೀಯ ಏರುಪೇರುಗಳಿಂದಾಗಿ ಸುಮಾರು 14 ವರ್ಷಗಳ ಕಾಲ ಸಕ್ರಿಯ ರಾಜಕಾರಣದಿಂದ ಬಹುತೇಕ ದೂರ ಉಳಿಯುವಂತಾಯಿತು.

ಎಲ್ಎಲ್ಬಿ ಪದವಿ ಪಡೆದರು
ರಾಜಕೀಯದಿಂದ ದೂರಾದ ಮುಂಡಂಡ ಎಂ. ನಾಣಯ್ಯ ಅವರು, ಎಲ್ಎಲ್ಬಿ ಪದವಿ ಪಡೆದು ವಕೀಲಿ ವೃತ್ತಿ ಆರಂಭಿಸಿದರು. ಮತ್ತೊಮ್ಮೆ ರಾಜಕೀಯ ಪ್ರವೇಶ ಮಾಡಿದ ಅವರು 1998ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು. ಎಸ್.ಎಂ.ಕೃಷ್ಣ ಅವರ ಸರ್ಕಾರದಲ್ಲಿ 1 ವರ್ಷಗಳ ಕಾಲ ಮಾಹಿತಿ ತಂತ್ರಜ್ಞಾನ ಸಚಿವರಾಗಿ, ಬಳಿಕ ನಾಲ್ಕು ವರ್ಷಗಳ ಕಾಲ ಅಬಕಾರಿ ಸಚಿವರಾಗಿ ಸೇವೆ ಸಲ್ಲಿಸಿದರು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಕಾರ್ಯನಿರ್ವಹಿಸಿದರು.

ಪಕ್ಷ ಸಂಘಟನೆಗೆ ಶ್ರಮಿಸಿದರು
ಎಸ್.ಎಂ. ಕೃಷ್ಣ ಸರ್ಕಾರದ ಬಳಿಕ ರಾಜ್ಯ ರಾಜಕಾರಣದಲ್ಲಿ ಹಲವಾರು ಬದಲಾವಣೆಗಳಾಗಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರ ಪಡೆಯಿತು. ಈ ನಡುವೆ ನಾಣಯ್ಯ ಸಕ್ರಿಯ ರಾಜಕಾರಣದಿಂದ ಕೊಂಚ ದೂರ ಉಳಿದಿದ್ದರೂ ಆ ಸಂದರ್ಭದಲ್ಲಿ ನಡೆದ ವಿವಿಧ ಚುನಾವಣೆಗಳಲ್ಲಿ ಪಕ್ಷ ಸಂಘಟನೆಯೊಂದಿಗೆ, ಪಕ್ಷದ ಅಭ್ಯರ್ಥಿಗಳ ಗೆಲುವಿಗೂ ಶ್ರಮಿಸಿದ್ದರು.












Click it and Unblock the Notifications