Breaking; ಜನಾರ್ದನ ರೆಡ್ಡಿಗೆ ಸಿಹಿಸುದ್ದಿ ನೀಡಿದ ಕೋರ್ಟ್
ಬೆಂಗಳೂರು, ಡಿಸೆಂಬರ್ 07; ಮತ್ತೆ ರಾಜಕೀಯದ ಎರಡನೇ ಇನ್ನಿಂಗ್ಸ್ ಆರಂಭಿಸಲು ಸಿದ್ಧರಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಕೋರ್ಟ್ ಸಿಹಿಸುದ್ದಿ ನೀಡಿದೆ. ಒಂದೇ ದಿನ ನಾಲ್ಕು ಪ್ರಕರಣಗಳು ಇತ್ಯರ್ಥಗೊಂಡಿವೆ.
ಬೇನಾಮಿ ಆಸ್ತಿಗಳಿಕೆ ಕುರಿತು ಜನಾರ್ದನ ರೆಡ್ಡಿ ವಿರುದ್ಧ ದಾಖಲಾಗಿದ್ದ ನಾಲ್ಕು ಪ್ರಕರಣಗಳನ್ನು ಬೆಂಗಳೂರಿನ ಸೆಷನ್ಸ್ ಕೋರ್ಟ್ ಬುಧವಾರ ಇತ್ಯರ್ಥಗೊಳಿಸಿದೆ. ಇದರಿಂದಾಗಿ 4 ಕೇಸ್ಗಳಿಂದ ಮುಕ್ತಿ ಸಿಕ್ಕಂತೆ ಆಗಿದೆ.
ಭಾರತೀಯ ಜನತಾ ಪಕ್ಷವೇ ನನ್ನ ರಾಜಕೀಯ ಜೀವನ-ಗಾಲಿ ಜನಾರ್ದನ ರೆಡ್ಡಿ
2021ರಲ್ಲಿ ಆದಾಯ ತೆರಿಗೆ ಇಲಾಖೆ 2009ರಲ್ಲಿ ಜನಾರ್ದನ ರೆಡ್ಡಿ ಬೇನಾಮಿ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಆರೋಪಿಸಿ ನಾಲ್ಕು ಪ್ರಕರಣಗಳನ್ನು ದಾಖಲು ಮಾಡಿತ್ತು. ಆದರೆ ಸುಪ್ರೀಂಕೋರ್ಟ್ ತೀರ್ಪನ್ನು ಉಲ್ಲೇಖಿಸಿ ಈ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ.
ಗಂಗಾವತಿಯಲ್ಲಿ ಬೃಹತ್ ಮನೆ ನಿರ್ಮಾಣ ಮಾಡಿದ ಜನಾರ್ದನ ರೆಡ್ಡಿ, ಪ್ರಶ್ನೆಗಳ ಉದ್ಭವ
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎನ್. ವಿ. ರಮಣ, ನ್ಯಾಯಮೂರ್ತಿ ಕೃಷ್ಣ ಮುರಾರಿ, ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರಿದ್ದ ಪೀಠ ನೀಡಿದ್ದ ತೀರ್ಪು ಜನಾರ್ದನ ರೆಡ್ಡಿಗೆ ವರವಾಗಿದೆ.
ಬೇನಾಮಿ ಆಸ್ತಿಯ ಹಳೆ ಪ್ರಕರಣಗಳಲ್ಲಿ 2016ರ ಕಾನೂನಿನ ಅಡಿಯಲ್ಲಿ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ. 1998ರ ಕಾಯ್ದೆಯ ಪ್ರಕಾರ 2016ರಲ್ಲಿ ತಂದಿರುವ ಕಾಯ್ದೆ ಸೆಕ್ಷನ್ 3(2) ಕೂಡಾ ಅಸಾಂವಿಧಾನಿಕ ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿತ್ತು.
ಯೂನಿಯನ್ ಆಫ್ ಇಂಡಿಯಾ ಮತ್ತು ಗಣಪತಿ ಡೀಲ್ಕಾಮ್ ಪ್ರೈವೇಟ್ ಲಿಮಿಟೆಡ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಈ ತೀರ್ಪು ನೀಡಿತ್ತು. ಇದೇ ಪ್ರಕರಣ ಆಧರಿಸಿ ಜನಾರ್ದನ ರೆಡ್ಡಿ ವಿರುದ್ಧದ ನಾಲ್ಕು ಕೇಸ್ ಇತ್ಯರ್ಥಗೊಳಿಸಲಾಗಿದೆ.
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿಗೆ ಅಭಿಮಾನಿಗಳಿಂದ ನಾಣ್ಯದ ತುಲಾಭಾರ ಸೇವೆ
ಗಂಗಾವತಿಯಿಂದ ಕಣಕ್ಕೆ?; ಮಾಜಿ ಸಚಿವ ಜನಾರ್ದನ ರೆಡ್ಡಿ ಮುಂದಿನ ಚುನಾವಣೆಗೆ ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಇಂತಹ ಸಮಯದಲ್ಲಿಯೇ ಅವರಿಗೆ ಸಿಹಿಸುದ್ದಿ ಸಿಕ್ಕಿದೆ.
ಜನಾರ್ದನ ರೆಡ್ಡಿ, ಸಚಿವ ಬಿ. ಶ್ರೀರಾಮುಲು ಸ್ನೇಹದ ಬಗ್ಗೆ ಕೂಡಾ ಹಲವು ಸುದ್ದಿಗಳು ಹರಿದಾಡುತ್ತಿವೆ. ಬುಧವಾರ ಮಾಧ್ಯಮಗಳ ಜೊತೆ ಶ್ರೀರಾಮುಲು ಮಾತನಾಡಿದರು.
"ಜನಾರ್ದನ ರೆಡ್ಡಿ ಮನವೊಲಿಸಿ, ಅವರ ಅಸಮಾಧಾನ ಹೋಗಲಾಡಿಸಲು ನಾನು ಸಿದ್ಧನಿದ್ದು, ಅವರೊಂದಿಗಿನ ಸ್ನೇಹಕ್ಕೆ ಜೀವ ಕೊಡಲು ತಯಾರಿದ್ದೇನೆ" ಎಂದರು.
"ಜನಾರ್ದನ ರೆಡ್ಡಿ ನನ್ನ ಆತ್ಮೀಯ ಸ್ನೇಹಿತರು, ಸ್ನೇಹ ಅಂದರೆ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಎನ್ನುವಂತೆ ಎಲ್ಲರೂ ಮಾತಾಡುತ್ತಾರೆ. ಸ್ನೇಹಕ್ಕೆ ಪ್ರಾಣ ಕೊಡುವ ವ್ಯಕ್ತಿ ಶ್ರೀರಾಮುಲು. ಸ್ನೇಹ ಮತ್ತು ರಾಜಕಾರಣ ಎರಡೂ ಕೂಡ ಮುಖ್ಯ. ಬಿಜೆಪಿ ಪಕ್ಷ ನನಗೆ ತಾಯಿ ಸಮಾನ" ಎಂದು ಹೇಳಿದರು.