ರೇವಣ್ಣ ಹಿಡ್ಕೊಂಡ್ರೆ ನಿಂಬೆಹಣ್ಣು, ರಾಜನಾಥ್ ಸಿಂಗ್ ಹಿಡ್ಕೊಂಡ್ರೆ ಕುಂಬ್ಳಕಾಯಿನಾ?
ರಫೇಲ್ ಯುದ್ದ ವಿಮಾನಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪೂಜೆ ಮಾಡುತ್ತಿರುವ ಫೋಟೋ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ. ಅದರಲ್ಲೂ, ಯುದ್ದವಿಮಾನದ ಟೈರ್ ಕೆಳಗೆ ನಿಂಬೆಹಣ್ಣು ಇಟ್ಟ ಫೋಟೋ ಮಾತ್ರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಜೊತೆಗೆ, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಹೆಸರನ್ನು ಈ ಫೋಟೋ ಜೊತೆ ಎಳೆದು ತರಲಾಗುತ್ತಿದೆ.
ರೇವಣ್ಣ ಅವರಿಗೂ ನಿಂಬೆಹಣ್ಣಿಗೂ ಅವಿನಾವಭಾವ ಸಂಬಂಧ. ಕಳೆದ ಕುಮಾರಸ್ವಾಮಿ ಸರಕಾರದ ಅವಧಿಯಲ್ಲಿ ನಿಂಬೆಹಣ್ಣು ಅವರಿಗೆ ಯಾವರೀತಿ ಸಾಥ್ ನೀಡಿತ್ತೆಂದರೆ, ಕುಂತಲ್ಲಿ, ಎದ್ದಲ್ಲಿ, ನಿಂಬೆಹಣ್ಣು ರೇವಣ್ಣ ಅವರ ಜೊತೆ ಇರುತ್ತಿತ್ತು.
ಆದರೆ, ಇದಕ್ಕೂ, ಜನರ ತೆರಿಗೆ ದುಡ್ದಿಗೆ ಸಂಬಂಧವಿಲ್ಲ, ಇದು ಅವರ ವೈಯಕ್ತಿಕ ವಿಚಾರ, ನಂಬಿಕೆ ಎನ್ನುವುದು ಅಷ್ಟೇ ಸ್ಪಷ್ಟ. ಆದರೂ, 'ನಿಂಬೆಹಣ್ಣು ರೇವಣ್ಣ' ಎಂದು ಸಾಮಾಜಿಕ ತಾಣದಲ್ಲಿ ಸಿಕ್ಕಾಪಟ್ಟೆ ಅಪಹಾಸ್ಯ ಮಾಡಲಾಗಿತ್ತು. ಈಗ, 'ರಾಜನಾಥ್ ಸಿಂಗ್ ವಿಮಾನದ ಕೆಳಗೆ ಇಟ್ಟಿದ್ದು, ನಿಂಬೆಹಣ್ಣಾ ಅಥವಾ ಕುಂಬಳಕಾಯಿನಾ' ಎಂದು, ಅಂದು ಕಿಂಡಾಲ್ ಮಾಡಿದವರ ಕಾಲೆಳೆಯಲಾಗುತ್ತಿದೆ.

ಸಮ್ಮಿಶ್ರ ಸರಕಾರ ತೀವ್ರ ಎಮರ್ಜೆನ್ಸಿಯಲ್ಲಿ ಇದ್ದಾಗಲೂ, ರೇವಣ್ಣ ಬರಿಗಾಲಿನಲ್ಲಿ, ಜೊತೆಗೆ, ಕೈಯಲ್ಲಿ ನಿಂಬೆಹಣ್ಣು ಇಟ್ಟುಕೊಂಡು, ವಿಧಾನಸೌಧಕ್ಕೆ ಪ್ರದಕ್ಷಿಣೆ ಹಾಕಿದ್ದುಂಟು. ಸರಕಾರೀ ಕಾರ್ಯಕ್ರಮದ ವೇದಿಕೆಯಲ್ಲೇ, ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ರೇವಣ್ಣ ನಿಂಬೆಹಣ್ಣು ಹಂಚಿದ್ದುಂಟು.
'ನಿಂಬೆಹಣ್ಣು ರೇವಣ್ಣ' ಎಂದೇ ರೇವಣ್ಣ ಹೆಸರು ಪಡಿದಿದ್ದರು. ಸಹೋದರನ ನಿಂಬೆಹಣ್ಣು ಪ್ರೇಮದ ಬಗ್ಗೆ ಸಿಎಂ ಆಗಿದ್ದ ಕುಮಾರಸ್ವಾಮಿಯವರನ್ನು ಕೇಳಿದ್ದಾಗ, "ಅದು ಅವನ ನಂಬಿಕೆಯ ಪ್ರಶ್ನೆ. ನಾನು ಅದನ್ನು ತಪ್ಪು ಎಂದು ಹೇಳುವುದಿಲ್ಲ" ಎಂದು ಹೇಳಿದ್ದರು.
ಈಗ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವ ಪ್ರಶ್ನೆ ಏನಂದರೆ, " ರೇವಣ್ಣನವರು ನಿಂಬೆಹಣ್ಣನ್ನು ಪೂಜೆಗೆ ಉಪಯೋಗಿಸಿದರೆ ಅಪಹಾಸ್ಯ ಮಾಡಿದ ಬಿಜೆಪಿಗರೇ ಇವತ್ತು ರಫೇಲ್ ಯುದ್ದ ವಿಮಾನಕ್ಕೆ ರಾಜನಾಥ್ ಸಿಂಗ್ ಇಟ್ಟಿದ್ದು ಕುಂಬಳಕಾಯಿನಾ?" ಎಂದು ಪ್ರಶ್ನಿಸುತ್ತಿದ್ದಾರೆ.
"ಕೆಲವೊಂದು ನಂಬಿಕೆಗಳನ್ನು ಯಾವತ್ತೂ ತಮಾಷೆ ಮಾಡಲು ಹೋಗಬಾರದು ಎನ್ನುವುದನ್ನು ಇನ್ನಾದರೂ ಬಿಜೆಪಿಯವರು ಅರಿತುಕೊಳ್ಳಲಿ" ಎನ್ನುವ ಸಲಹೆಯೂ ಬರುತ್ತಿದೆ. "ರೇವಣ್ಣ ತಮ್ಮ ರಕ್ಷಣೆಗೆ ನಿಂಬೆಹಣ್ಣನ್ನು ಬಳಸಿದ್ದದ್ದು. ರಫೇಲ್ ಯುದ್ದವಿಮಾನ ದೇಶದ ರಕ್ಷಣೆಗೆ ಬಂದಿರುವುದು. ಹಾಗಾಗಿ, ಒಂದಕ್ಕೊಂದು ಹೋಲಿಕೆ ಮಾಡಬೇಡಿ' ಎನ್ನುವ ಮಾತೂ ಕೇಳಿಬರುತ್ತಿದೆ.












Click it and Unblock the Notifications