ಸರ್ಕಾರಿ ಹುದ್ದೆ ತೊರೆದು ಶಾಸಕರಾಗಿದ್ದ ಡಾ.ವೈ.ಸಿ.ವಿಶ್ವನಾಥ್ ವಿಧಿವಶ
ಚಿಕ್ಕಮಗಳೂರು, ಮೇ 21 : ಕಡೂರು ಕ್ಷೇತ್ರದ ಮಾಜಿ ಶಾಸಕ ಡಾ.ವೈ.ಸಿ.ವಿಶ್ವನಾಥ್ ವಿಧಿವಶರಾಗಿದ್ದಾರೆ. ಸರ್ಕಾರಿ ವೈದ್ಯರಾಗಿದ್ದ ವೈ.ಸಿ.ವಿಶ್ವನಾಥ್ ಸರ್ಕಾರಿ ಹುದ್ದೆ ತೊರೆದು, 1999 ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿದ್ದರು.
ಅನಾರೋಗ್ಯದಿಂದ ಬಳಲುತ್ತಿದ್ದ ವೈ.ಸಿ.ವಿಶ್ವನಾಥ್ (68) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನ ಹೊಂದಿದರು. ಕೆಲವು ತಿಂಗಳ ಹಿಂದೆ ವಿಶ್ವನಾಥ್ ಅವರ ಪತ್ನಿ ಮೃತಪಟ್ಟಿದ್ದರು.
ಸರ್ಕಾರಿ ವೈದ್ಯರಾಗಿದ್ದ ವೈ.ಸಿ.ವಿಶ್ವನಾಥ್ ಅವರು 1999ರಲ್ಲಿ ಸರ್ಕಾರಿ ಉದ್ಯೋಗ ತೊರೆದು ಬಿಜೆಪಿ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಳಿಕ ಎರಡು ಚುನಾವಣೆಯಲ್ಲಿಯೂ ಸ್ಪರ್ಧಿಸಿ ಸೋತಿದ್ದರು.

ಕಾಂಗ್ರೆಸ್ ಶಾಸಕ ಕೆ.ಎಂ.ಕೃಷ್ಣಮೂರ್ತಿ ನಿಧನದ ಬಳಿಕ ಎದುರಾದ ಉಪ ಚುನಾವಣೆಯಲ್ಲಿ ವೈ.ಸಿ.ವಿಶ್ವನಾಥ್ ಸ್ಪರ್ಧಿಸಿ ಜಯಗಳಿಸಿದ್ದರು. ಮೂರು ವರ್ಷಗಳ ಕಾಲ ಶಾಸಕರಾಗಿ ಕೆಲಸ ಮಾಡಿದ್ದರು.
2013ರ ವಿಧಾನಸಭೆ ಚುನಾವಣೆಗೆ ಅವರು ಸ್ಪರ್ಧಿಸಿರಲಿಲ್ಲ. ಈ ಬಾರಿಯ ಚುನಾಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬೆಳ್ಳಿ ಪ್ರಕಾಶ್ ಅವರಿಗೆ ವೈ.ಸಿ.ವಿಶ್ವನಾಥ್ ಬೆಂಬಲ ನೀಡಿದ್ದರು. ಬೆಳ್ಳಿ ಪ್ರಕಾಶ್ ಗೆದ್ದಿದ್ದರು. ವಿಜಯೋತ್ಸವ ಕಾರ್ಯಕ್ರಮದಲ್ಲಿಯೂ ವಿಶ್ವನಾಥ್ ಪಾಲ್ಗೊಂಡಿದ್ದರು.
ವಿಜಯೋತ್ಸವ ಕಾರ್ಯಕ್ರಮದ ಬಳಿಕ ವೈ.ಸಿ.ವಿಶ್ವನಾಥ್ ಅವರ ಆರೋಗ್ಯ ಹದಗೆಟ್ಟಿತ್ತು. ಕುಟುಂಬ ಸದಸ್ಯರು ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.












Click it and Unblock the Notifications