ಕಾಂಗ್ರೆಸ್ ಸರ್ಕಾರದಲ್ಲಿ ಕಾಸಿಗಾಗಿ ಪೋಸ್ಟಿಂಗ್: ಕುಮಾರಸ್ವಾಮಿ ಗಂಭೀರ ಆರೋಪ!
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 1 ತಿಂಗಳು ಕಳೆಯುವ ಒಳಗೆ ಮೇಲಿಂದ ಮೇಲೆ ಗಂಭೀರ ಆರೋಪ ಕೇಳಿಬಂದಿವೆ. ಈಗ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಗಂಭೀರ ಆರೋಪ ಮಾಡಿದ್ದು ಕಾಂಗ್ರೆಸ್ ಸರ್ಕಾರದಲ್ಲಿ ಕಾಸಿಗಾಗಿ ಪೋಸ್ಟಿಂಗ್ ನಡೆಯುತ್ತಿದೆ ಎಂದಿದ್ದಾರೆ. ಹಾಗಾದ್ರೆ ಮಾಜಿ ಸಿಎಂ ಕುಮಾರಸ್ವಾಮಿ ಈ ಆರೋಪ ಮಾಡಿದ್ದೇಕೆ? ಮಾಹಿತಿ ಇಲ್ಲಿದೆ ಓದಿ.
ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರ ಅಧಿಕಾರಿಗಳ ಪೋಸ್ಟಿಂಗ್ಗೆ ರೇಟ್ ಫಿಕ್ಸ್ ಮಾಡಿದೆ ಅನ್ನೋ ಆರೋಪ ಪುನರುಚ್ಚರಿಸಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ವಿದೇಶಿ ಪ್ರವಾಸದಲ್ಲಿರುವ ಸಚಿವರೊಬ್ಬರ ಇಲಾಖೆಗೆ ವರ್ಗ ಆಗಿರುವ ಹಿರಿಯ ಅಧಿಕಾರಿ ಒಬ್ಬರಿಗೆ ಅಧಿಕಾರ ವಹಿಸಿಕೊಳ್ಳಲು ಸ್ವತಃ ಸಚಿವರೇ ಅವಕಾಶ ನೀಡಿಲ್ಲ ಯಾಕೆ? ಎಂದು ಪ್ರಶ್ನಿಸಿದ್ದಾರೆ. ವಿದೇಶಿ ಪ್ರವಾಸದಲ್ಲಿರುವ ಆ ಸಚಿವರು ಯಾರು? ಸಚಿವರ ಗಮನಕ್ಕೆ ಬಾರದೆಯೇ ಅವರ ಇಲಾಖೆಗೆ ಪೋಸ್ಟಿಂಗ್ ಅದ ಆ ಅಧಿಕಾರಿ ಯಾರು? ಎನ್ನುವುದನ್ನು ಬಹಿರಂಗ ಮಾಡಲಿ. ಮೊದಲು ಇವರು ನನ್ನ ಬಗ್ಗೆ ಬಗ್ಗೆ ಲಘುವಾಗಿ ಮಾತಾನಾಡುವುದನ್ನು ನಿಲ್ಲಿಸಲಿ ಎಂದು ಬೆಂಗಳೂರಿನಲ್ಲಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ವರ್ಗಾವಣೆ ವಿಚಾರಕ್ಕೆ ಮಹಾಯುದ್ಧ ಶುರು!
ಬೆಂಗಳೂರಿನ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಸಿಎಂ ಅವರೇ ಅಧಿಕಾರಿಯನ್ನ ವರ್ಗಾವಣೆ ಮಾಡಿದ್ದಾರೆ. ಅದಕ್ಕೆ ಸಂಬಂಧಿತ ಮಂತ್ರಿ ವಿದೇಶದಲ್ಲಿ ಇದ್ದಾರೆ. ಸಿಎಂ ಆದೇಶ ಮಾಡಿದ್ದರೂ, ನಾನು ಬರುವವರೆಗೂ ಅಧಿಕಾರ ತೆಗೆದುಕೊಳ್ಳಬೇಡಿ ಅಂತ ತಾಕೀತು ಮಾಡಿದ್ದಾರಂತೆ. ಹಾಗಾದರೆ ಎಷ್ಟು ಹಣ ಕೊಟ್ಟು ಬಂದರು ಈ ಅಧಿಕಾರಿ? 'ವರ್ಗಾವಣೆ ಜ್ಯೋತಿ' ಕಾರ್ಯಕ್ರಮ ನಡೆಯುತ್ತಿದೆ. ಈ ದಂಧೆ ಬಗ್ಗೆ ಏನು ಹೇಳ್ತಾರೆ ಇವರು. ಎಸಿಬಿ ದಾಳಿಗೆ ಒಳಗಾಗಿದ್ದ ಇನ್ನೊಬ್ಬ ಅಧಿಕಾರಿಯನ್ನು ಸಿಎಂ ಕಚೇರಿಯಲ್ಲಿ ಇಟ್ಟುಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿಕೆ ವಾಗ್ದಾಳಿ ನಡೆಸಿದ್ದಾರೆ.
ಎಲ್ಲಿ ಪರ್ಸಂಟೇಜ್ ಫಿಕ್ಸ್ ಮಾಡ್ತಿದ್ದಾರೆ?
ಬಿಜೆಪಿ ಸರ್ಕಾರದ ಬಗ್ಗೆ 40 ಪರ್ಸೆಂಟ್ ಬಗ್ಗೆ ಮಾತಾಡಿದ್ದರು ಇವರು. ಹಾದಿಬೀದಿಯಲ್ಲಿ ಜಾಗಟೆ ಹೊಡೆದುಕೊಂಡು ಪ್ರಚಾರ ಮಾಡಿದರು. ಈಗ ನೋಡಿದರ ಅಧಿಕಾರಿಗಳ ವರ್ಗಾವಣೆಯಲ್ಲಿ ದಂಧೆ ಶುರು ಮಾಡಿಕೊಂಡಿದ್ದಾರೆ. 40 ಪರ್ಸೆಂಟ್ ಎಂದು ಪುಂಗಿ ಬಿಟ್ಟ ಇವರು ಆರೋಪವನ್ನ ಸಾಬೀತು ಮಾಡಿದ್ರ? ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಮಿ ಪ್ರಶ್ನಿಸಿದರು. ನಾನು ಮುಖ್ಯಮಂತ್ರಿ ಆಗಿದ್ದಾಗ ಹಣ ಪಡೆದು ಪೋಸ್ಟಿಂಗ್ ಮಾಡಿದ್ದೆ ಎನ್ನುವುದನ್ನು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಹೊಂದುತ್ತೆನೆ. ಈಗ ಅಧಿಕಾರಿಗಳ ಪೋಸ್ಟಿಂಗ್ ಬಗ್ಗೆ ಯಾರು? ಎಲ್ಲಿ ಕೂತು ರೇಟ್ ಫಿಕ್ಸ್ ಮಾಡುತ್ತಿದ್ದಾರೆ? ಎನ್ನುವುದನ್ನು ಅಧಿಕಾರಿಗಳೇ ಮಾತನಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಸಮ್ಮಿಶ್ರ ಸರ್ಕಾರ ಬಿದ್ದಿದ್ದು ಹೇಗೆ?
ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ಮಾಡಿದ್ದಾಗ ಕಾಂಗ್ರೆಸ್ ಹೇಳಿದ ಮೇಲೆ ವರ್ಗಾವಣೆ ಮಾಡಬೇಕು ಎನ್ನುವ ಪರಿಸ್ಥಿತಿ ಇತ್ತು. 2018ರಲ್ಲಿ ಸಿಎಂ ಆಗಿದ್ದಾಗ ಅಮೆರಿಕಕ್ಕೆ ಹೋಗಿದ್ದೆ. ಆಗ ಶಾಸಕ ಭೈರತಿ ಬಸವರಾಜ್ ಮುನಿಸಿಕೊಂಡು ಬಿಜೆಪಿಗೆ ಹೋದರು. ನನ್ನ ಸಂಪುಟದಲ್ಲಿ ಸಚಿವರಾಗಿದ್ದ ಕಾಂಗ್ರೆಸ್ ನಾಯಕರೊಬ್ಬರು ಸೋಪ್ ಅಂಡ್ ಡಿಟರ್ಜಂಟ್ ಕಾರ್ಖಾನೆಗೆ ಅಧಿಕಾರಿ ಒಬ್ಬರ ವರ್ಗ ಮಾಡುವ ವಿಷಯದಲ್ಲಿ ನಡೆದ ಗಲಾಟೆ ನನ್ನ ಸರ್ಕಾರವನ್ನ ಬಲಿ ತೆಗೆದುಕೊಂಡಿತು ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಆರಂಭದಲ್ಲೇ ಗಂಭೀರ ಆರೋಪ
ಹೊಸ ಕಾಂಗ್ರೆಸ್ ಸರ್ಕಾರದಲ್ಲಿ ಪ್ರಾರಂಭಿಕ ಹಂತದಲ್ಲಿಯೇ ಅಧಿಕಾರಿಗಳ ಸಭೆಯು ನಡೆದಿದೆ. ಆ ಸಭೆಯಲ್ಲಿ ಅಧಿಕಾರಿಗಳಿಗೆ ಯಾವ ರೀತಿ ಪಾಠ ಮಾಡಿದ್ರು ಅನ್ನೋ ಮಾಹಿತಿ ಇದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಕೆಲವು ಸೂಚನೆಗಳನ್ನು ಕೊಟ್ಟಿದ್ದಾರೆ. ನಾವು ಹೇಳಿದಂತೆ ಮಾತ್ರ ಕೇಳಬೇಕು ಎಂದು ಫರ್ಮಾನು ಹೊರಡಿಸಿದ್ದಾರೆ. ಅರ್ಥ ಏನೆಂದರೆ, ನಮಗೆ ಬೇಕಾದ ಹಾಗೇ ಕೆಲಸ ಮಾಡಿ, ಇಲ್ಲ ಹೊರಡಿ ಎನ್ನುವುದೇ ಫರ್ಮಾನಿನ ಒಳಾರ್ಥ ಎಂದು ಕುಮಾರಸ್ವಾಮಿ ದೂರಿದ್ದಾರೆ. ಅಲ್ಲದೆ ಇನ್ನೂ ಒಂದು ಗಂಭೀರ ಆರೋಪ ಮಾಡಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್ಡಿಕೆ.

600 ಕೋಟಿ ರೂಪಾಯಿ ವಿಷಯ!
ಹಿಂದಿನ ಟೆಂಡರ್ ಸೇರಿದಂತೆ ಅನೇಕ ಕಡೆ ಅನುದಾನ ತಡೆ ಹಿಡಿಯಲಾಗಿದೆ. ಬಿಜೆಪಿ ಸರಕಾರ 600 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಿತ್ತು. ಮೇ 6ರಂದು 675 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳ ಗುತ್ತಿಗೆದಾರರಿಗೆ ಎಲ್ಒಸಿ ರಿಲೀಸ್ ಆಯಿತು. ಆ ಸಂದರ್ಭದಲ್ಲಿ ಒಬ್ಬ ಕಾಂಗ್ರೆಸ್ ಎಂಪಿ ಹೇಳಿದ್ರಂತೆ ಯಾವ ಕಾರಣಕ್ಕೂ ಹಣ ರಿಲೀಸ್ ಮಾಡಬೇಡಿ ನಮ್ಮ ಸರ್ಕಾರ ಬರುತ್ತದೆ ಅಂತ ಹೇಳಿದ್ದರಂತೆ ಅವರು. ಅವರು ಯಾಕೆ ಹೇಳಿದ್ದರು? ಯಾರು ಆ ಎಂಪಿ ಯಾರು? ಎಂದು ಮಾಜಿ ಮುಖ್ಯಮಂತ್ರಿ ಪ್ರಶ್ನಿಸಿದರು.
ಏನಿದ್ರು 45 ಪರ್ಸೆಂಟ್ ಸರ್ಕಾರ?
ಹಾಗೇ 675 ಕೋಟಿ ಮೊತ್ತದ ಎಲ್ ಒಸಿ ಹಣ ಯಾಕೆ ಬಿಡುಗಡೆ ಆಗಿಲ್ಲ ಎನ್ನುವುದು ಅನುಮಾನಕ್ಕೆ ಕಾರಣ. ಈಗ LOC ಬಿಡುಗಡೆ ಆಗಬೇಕು ಅಂದ್ರೆ 5 ಪರ್ಸೆಂಟ್ ಕೊಡಲೇಬೇಕು ಎಂದು ಡಿಮ್ಯಾಂಡ್ ಇಟ್ಟಿದ್ದಾರೆ. 40 ಪರ್ಸೆಂಟ್ ಜತೆ ಹೆಚ್ಚುವರಿಯಾಗಿ 5 ಪರ್ಸೆಂಟ್ ಕೊಟ್ರೆ ಹಣ ಬಿಡುಗಡೆ ಮಾಡ್ತೀವಿ ಅಂತ ಹೇಳಿದ್ದಾರಂತೆ. ಅಲ್ಲಿಗೆ 45 ಪರ್ಸೆಂಟ್ ಸರ್ಕಾರ ಎಂದಾಯಿತಲ್ವೆ? ಮುಗಿದು ಹೋಗಿರುವ ಕಾಮಗಾರಿಗಳಿಗೆ ಪರ್ಸಂಟೇಜ್ ಕೇಳುತ್ತಿದ್ದಾರೆ, ಇವರು ಸತ್ಯ ಹರಿಶ್ಚಂದ್ರರು ಎಂದು ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಪ್ರತಿಕ್ರಿಯೆ ನೀಡುತ್ತಾ ಕಾಂಗ್ರೆಸ್ ಸರ್ಕಾರ?
ಹೀಗೆ ಬಿಜೆಪಿ ಜೊತೆಗೆ ಜೆಡಿಎಸ್ ಕೂಡ ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪವನ್ನ ಮಾಡಿದೆ. ಅದ್ರಲ್ಲೂ ಮಾಜಿ ಸಿಎಂ ಕುಮಾರಸ್ವಾಮಿ ಸಿದ್ದರಾಮಯ್ಯ ನೇತೃತ್ವ ನೂತನ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಇದೀಗ 45 ಪರ್ಸೆಂಟ್ ಸರ್ಕಾರ ಅನ್ನೋ ಗಂಭೀರ ಆರೋಪ ಮಾಡಿದ್ದಾರೆ. ಇದರ ಜೊತೆ ಜೊತೆಗೆ ಅಧಿಕಾರಿಗಳ ವರ್ಗಾವಣೆ ಕಿರಿಕಿರಿಯು ನಡೆಯುತ್ತಿದೆ ಅಂತಿದ್ದಾರೆ ಮಾಜಿ ಸಿಎಂ ಎಚ್ಡಿಕೆ. ಹಾಗಾದ್ರೆ ಈ ಆರೋಪಗಳಿಗೆ ಕಾಂಗ್ರೆಸ್ ಸರ್ಕಾರ ಹಾಗೂ ನೂತನ ಸರ್ಕಾರದ ಸಚಿವರು ಉತ್ತರ ಕೊಡ್ತಾರಾ? ಕಾದು ನೋಡಬೇಕು.
ಒಟ್ನಲ್ಲಿ ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಒಂದು ತಿಂಗಳು ಕಳೆದಿಲ್ಲ. ಆಗಲೇ ಹಲವು ಗೊಂದಲ ಸೃಷ್ಟಿಯಾಗುತ್ತಿದೆ. ಅದರಲ್ಲೂ ಗ್ಯಾರಂಟಿ ಜಾರಿ ವಿಚಾರದಲ್ಲಿ ಈ ತನಕ ಕಿರಿಕ್ ನಡೆಯುತ್ತಿತ್ತು. ಇದಾದ ಬಳಿಕ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ತಮ್ಮ ಕಾರ್ಯಕರ್ತರನ್ನ ಟಾರ್ಗೆಟ್ ಮಾಡಿರುವ ಆರೋಪ ಮಾಡಿದ್ದರು. ಇದೀಗ ಮಾಜಿ ಸಿಎಂ ಕುಮಾರಸ್ವಾಮಿ ವರ್ಗಾವಣೆ ವಿಚಾರದಲ್ಲಿ ಆರೋಪ ಮಾಡಿದ್ದಾರೆ. ಅಲ್ಲದೆ 45 ಪರ್ಸೆಂಟ್ ಸರ್ಕಾರ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದು ವಿಪಕ್ಷಗಳು ಹಾಗೂ ಆಡಳಿತ ಪಕ್ಷದ ನಡುವಿನ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿರೋದು ಸುಳ್ಳಲ್ಲ.












Click it and Unblock the Notifications