ತೋಳ್ಬಲದ ಮೂಲಕ ಅಧಿಕಾರಕ್ಕೆ ಬರುವ ಕಾಂಗ್ರೆಸ್ ಕಾಲ ಮುಗಿದಿದೆ: ಯಡಿಯೂರಪ್ಪ ಹೇಳಿದ್ದೇನು.?
ಕಾಂಗ್ರೆಸ್ ನಾಯಕರ ಬಸ್ ಯಾತ್ರೆ ದಾರಿ ಮಧ್ಯದಲ್ಲಿ ಪಂಚರ್ ಆಗಲಿದೆ. ಅತೃಪ್ತಿ ಅಸಮಾಧಾನ ಕಾಂಗ್ರೆಸ್ ನಲ್ಲಿ ತುಂಬಿ ತುಳುಕುತ್ತಿದೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಒಗ್ಗಟ್ಟಾಗಿ ಇದ್ದೇವೆ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದರು.
ಬೆಂಗಳೂರು,ಫೆಬ್ರವರಿ4: ಕಾಂಗ್ರೆಸ್ ಪಕ್ಷದಲ್ಲಿ ಅತೃಪ್ತಿ ಅಸಮಾಧಾನ ತುಂಬಿ ತುಳುಕುತ್ತಿದೆ. ತೋಳಬಲದ ಮೂಲಕ ಅಧಿಕಾರಕ್ಕೆ ಬರುವ ಕಾಂಗ್ರೆಸ್ ಕಾಲ ಮುಗಿದಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.
ಶನಿವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಬಸ್ ಯಾತ್ರೆ ದಾರಿ ಮಧ್ಯದಲ್ಲಿ ಪಂಚರ್ ಆಗಲಿದೆ. ಅತೃಪ್ತಿ ಅಸಮಾಧಾನ ಕಾಂಗ್ರೆಸ್ ನಲ್ಲಿ ತುಂಬಿ ತುಳುಕುತ್ತಿದೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಒಗ್ಗಟ್ಟಾಗಿ ಇದ್ದೇವೆ ಎಂದರು.
ಕಾಂಗ್ರೆಸ್ ಬಸ್ ಯಾತ್ರೆ ಮಧ್ಯದಲ್ಲಿ ಪಂಚರ್ ಆಗುತ್ತೆ, ಅನುಮಾನ ಬೇಡ. ತೋಳ್ಬಲದ ಮೂಲಕ ಅಧಿಕಾರಕ್ಕೆ ಬರುವ ಕಾಂಗ್ರೆಸ್ ಕಾಲ ಮುಗಿದಿದೆ. ಈಗಾಗಲೇಡಾ.ಜಿ ಪರಮೇಶ್ವರ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಇಬ್ಬರು ಮುಖಂಡರು ನಾವೇ ಮುಖ್ಯಮಂತ್ರಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಆದರೆ, ನಿಮ್ಮ ನಾಯಕ ಯಾರು ರಾಹುಲ್ ಗಾಂಧಿನಾ? ಎಂದು ಪ್ರಶ್ನಿಸಿದ್ದಾರೆ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ನಮ್ಮ ಜೊತೆ ಇರಬೇಕಾದರೆ ಯಾವುದೇ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸುವಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಕೇಂದ್ರ ಬಜೆಟ್ ಮಂಡನೆ ಮಾಡಲಾಗಿದೆ. ಪ್ರತಿಪಕ್ಷಗಳು ಸಹ ನಿರ್ಮಲಾ ಸೀತಾರಾಮನ್ ಬಜೆಟ್ ಸ್ವಾಗತ ಮಾಡಿದ್ದಾರೆ. ಕರ್ನಾಟಕ ರಾಜ್ಯಕ್ಕೆ ದೊಡ್ಡ ಕೊಡುಗೆ ಬಜೆಟ್ ನೀಡಿದೆ. ಏಪ್ರಿಲ್ 10,12 ಒಳಗೆ ಚುನಾವಣಾ ಬರುತ್ತಿದೆ. ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು130 ರಿಂದ 140 ಸೀಟು ಗೆಲ್ಲುವ ಮೂಲಕ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದ ಸಾಧ್ಯ ಇಲ್ಲ ಎಂದರು.
ರಾಜ್ಯದ ಯಾವುದಾದರೂ ಮನೆಗೆ ಹೋಗಿ ಸರ್ಕಾರದ ಸವಲತ್ತು ತಲುಪದ ಒಂದು ಮನೆ ಇದ್ದರೆ ಹೇಳಿ, ಸಾಮಾಜಿಕ ನ್ಯಾಯ ಆಧಾರದ ಮೇಲೆ ಅನೇಕ ಸವಲತ್ತು ನೀಡಲಾಗಿದೆ. ಕರ್ನಾಟಕ ಬಜೆಟ್ ನಲ್ಲೂ ನಿರೀಕ್ಷೆ ಮೀರಿ ಹೆಚ್ಚಿನ ಸವಲತ್ತು ಘೋಷಣೆ ಮಾಡ್ತೇವೆ. ಪ್ರಪಂಚದ ಎಲ್ಲಾ ದೇಶಗಳ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಆದರೆ ಭಾರತದ ಆರ್ಥಿಕತೆ ಉತ್ತಮ ರೀತಿಯಲ್ಲಿ ದಾಪುಗಾಲು ಹಾಕುತ್ತಿದೆ ಎಂದು ಹೇಳಿದರು.
ಯಾರ ಮೇಲೆ ಅವಲಂಬಿಸದೆ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರಲಿದೆ. ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಆಗಬೇಕು. ಗ್ರಾಮದಲ್ಲಿ ಮಹಿಳೆಯರ ತಂಡ ಪಕ್ಷದ ಪರವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.