ಮರಳಿ ಕಾಡು ಸೇರಿದ ಆನೆಗಳು, ಕೊಡಗು ಗ್ರಾಮಸ್ಥರು ನಿರಾಳ
ಮಡಿಕೇರಿ, ಡಿಸೆಂಬರ್, 03: ಕಾಫಿ ತೋಟಗಳಲ್ಲಿ ವಾಸ್ತವ್ಯ ಹೂಡಿ ಜನರನ್ನು ಭಯಭೀತರನ್ನಾಗಿಸಿದ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯ ಕೊಡಗಿನ ಚೆಟ್ಟಳ್ಳಿಯಲ್ಲಿ ಗುರುವಾರ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಹರಸಾಹಸದ ನಡುವೆ ಈ ಕಾರ್ಯ ಯಶಸ್ವಿಯಾಗಿದೆ.
ಚೆಟ್ಟಳ್ಳಿ ಕಾಫಿಬೋರ್ಡಿನ ತೋಟ ಹಾಗೂ ಕೆರೆಯ ಬಳಿ ಸುಮಾರು 9 ಆನೆಗಳು ಬೀಡು ಬಿಟ್ಟು ಭಯದ ವಾತಾವರಣ ನಿರ್ಮಾಣ ಮಾಡಿದ್ದವು. ರೈತರು ಬೆಳೆದ ಕಾಫಿ, ಬಾಳೆ, ತೆಂಗು, ಅಡಿಕೆ, ಭತ್ತದ ಬೆಳೆಯನ್ನು ನಾಶಮಾಡುತ್ತಿದ್ದವು. ಆನೆಯ ಹಾವಳಿಯಿಂದ ಬೇಸತ್ತ ಮಂದಿ ಅರಣ್ಯ ಇಲಾಖೆಗೆ ದೂರು ನೀಡಿದ್ದರಿಂದ ಅಧಿಕಾರಿಗಳು ಆನೆ ಕಾರ್ಯಾಚರಣೆ ಕೈಗೊಂಡಿದ್ದರು.[ಮದವೇರಿದ ಗಜೇಂದ್ರನ ಪುಂಡಾಟಕ್ಕೆ ಆನೆ, ಕಾವಾಡಿ ಬಲಿ]

ಅರಣ್ಯ ಇಲಾಖೆಗೆ ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಕುಶಾಲನಗರ ವಲಯ ಅರಣ್ಯ ಅಧಿಕಾರಿ ಚಿಣ್ಣಪ್ಪನವರ ನೇತೃತ್ವದಲ್ಲಿ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಕಾಡಾನೆಗಳನ್ನು ಮರಳಿ ಕಾಡಿಗಟ್ಟುವ ಕಾರ್ಯಾಚರಣೆ ಆರಂಭಿಸಿತ್ತು.
ಈ ಸಂದರ್ಭ ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಸತಾಯಿಸಿದ ಆನೆಗಳು ಕಾಫಿತೋಟಗಳಲ್ಲಿ ಅಡ್ಡಾದಿಡ್ಡಿ ಓಡಾಡಿ ಬೆವರಿಳಿಸಿದವು. ಒಟ್ಟಾಗಿದ್ದ ಆನೆಗಳನ್ನು ದುಬಾರೆಯ ಉಪವಲಯಾಧಿಕಾರಿ ರಂಜನ್ ಅವರು ಮುನ್ನುಗ್ಗಿ ಗಾಳಿಗೆ ಗುಂಡು ಹಾರಿಸುತ್ತಿದ್ದಂತೆ ಮಧ್ಯಾಹ್ನದ ವೇಳೆಗೆ ಮರಿ ಸೇರಿ 9 ಕಾಡಾನೆಗಳ ಹಿಂಡು ಕಾಫಿತೋಟ ಬಿಟ್ಟು ಅರಣ್ಯದತ್ತ ಓಡಿದವು. ಇದರಿಂದ ಜನ ನೆಮ್ಮದಿಯ ಉಸಿರು ಬಿಟ್ಟಿದ್ದಾರೆ.












Click it and Unblock the Notifications