ಗೋಕರ್ಣದಲ್ಲಿ ವಿದೇಶಿಯರಿಗೆ ಪೊಲೀಸರಿಂದ ಗೂಸಾ?
ಉತ್ತರ ಕನ್ನಡ, ಫೆ.22 : ಗೋಕರ್ಣ ಕಡಲ ತೀರದಲ್ಲಿ ಪ್ರೇಮಿಗಳ ದಿನದ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ವಿದೇಶಿಗರ ಮೇಲೆ ಸ್ಥಳೀಯ ಪೊಲೀಸರು ಹಲ್ಲೆ ನಡೆಸಿರುವ ಪ್ರಕರಣದ ಕುರಿತು ತನಿಖೆ ನಡೆಸಲು ರಾಜ್ಯ ಮಾನವ ಹಕ್ಕು ಆಯೋಗ ನಿರ್ಧರಿಸಿದೆ. ಘಟನೆ ಕುರಿತು 82 ಪ್ರವಾಸಿಗರು ನೀಡಿರುವ ಮಾಹಿತಿ ಅನ್ವಯ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.
ಫೆ.14ರಂದು ಪ್ರೇಮಿಗಳ ದಿನದಂದು ಗೋಕರ್ಣ ಕಡಲಿತೀರದಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ನಮ್ಮ ಮೇಲೆ ಪಾನಮತ್ತ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬುದು ವಿದೇಶಿಯರ ಆರೋಪ. ಈ ಕುರಿತು ಪ್ರವಾಸಿಗರು ಫೇಸ್ಬುಕ್ನಲ್ಲಿ ಹೋರಾಟವನ್ನು ಆರಂಭಿಸಿ, ಘಟನೆ ಕುರಿತು ಸೂಕ್ತ ತನಿಖೆ ಆಗಬೇಕೆಂದು ಒತ್ತಾಯಿಸಿದ್ದರು. ಇದರಿಂದಾಗಿ ಮಾನವ ಹಕ್ಕು ಆಯೋಗ ಈ ಕುರಿತು ತನಿಖೆ ನಡೆಸಲು ಆದೇಶಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಮಾನವ ಹಕ್ಕು ಆಯೋಗದ ಸದಸ್ಯರಾದ ಮೀರಾ ಸಕ್ಸೆನಾ, ಘಟನೆ ಕುರಿತು ವರದಿ ನೀಡುವಂತೆ ಸಂಬಂಧಿಸಿದ ಇಲಾಖೆಗೆ ನಾವು ಸೂಚಿಸಿದ್ದೇವೆ. ಆದರೆ, ಘಟನೆ ಕುರಿತು ಯಾರಿಂದಲೂ ನಾವು ಲಿಖಿತವಾಗಿ ದೂರು ಪಡೆದಿಲ್ಲ. 82 ಪ್ರವಾಸಿಗರು ನೀಡಿರುವ ಮಾಹಿತಿ ಅನ್ವಯ ತನಿಖೆ ನಡೆಸುವಂತೆ ಸೂಚಿಸಿದ್ದೇವೆ ಎಂದು ಹೇಳಿದ್ದಾರೆ. [ಗೋಕರ್ಣದಲ್ಲಿ ಟೆಕ್ಕಿಗಳು ನೀರುಪಾಲು]
ಪೊಲೀಸರ ಹಲ್ಲೆ ಕುರಿತು 82 ಪ್ರವಾಸಿಗರು ಆಯೋಗಕ್ಕೆ ಮಾಹಿತಿ ನೀಡಿದ್ದರು. ಘಟನೆಯಲ್ಲಿ ಗಾಯಗೊಂಡವರ ಫೋಟೋಗಳನ್ನೂ ನೀಡಿದ್ದರು. ಇದರ ಅನ್ವಯ ಮಾನವ ಹಕ್ಕು ಆಯೋಗ ತನಿಖೆ ನಡೆಸಲು ಆದೇಶ ನೀಡಿದೆ. ವರದಿ ಬಂದ ನಂತರ ಪೊಲೀಸರ ತಪ್ಪಿದ್ದರೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಕುರಿತು : ಫೆ. 14ರಂದು ಗೋಕರ್ಣ ಕಡಲ ತೀರದಲ್ಲಿ ಸುಮಾರು 200 ಪ್ರವಾಸಿಗರು ಪ್ರೇಮಿಗಳ ದಿನದ ಸಂಭ್ರಮಾಚರಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಪೊಲೀಸರು ಎಲ್ಲೆ ಮೇಲೆ ದಾಳಿ ನಡೆಸಿದ್ದಾರೆ ಎಂಬುದು ಪ್ರವಾಸಿಗರ ಆರೋಪ. ಸ್ಥಲೀಯ ಪೊಲೀಸರು ಪಾನಮತ್ತರಾಗಿದ್ದರು, ಅವರ ದಾಳಿಯಿಂದ ಕೆಲವು ಪ್ರವಾಸಿಗರಿಗೆ ಗಾಯವಾಗಿದೆ ಎಂದು ಪ್ರವಾಸಿಗರು ದೂರಿದ್ದಾರೆ.
ಇದು ಸತ್ಯಕ್ಕೆ ದೂರವಾದದ್ದು : ವಿದೇಶಿ ಪ್ರವಾಸಿಗರ ಆರೋಪವನ್ನು ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ ತಳ್ಳಿ ಹಾಕಿದ್ದಾರೆ. ಕಡಲ ತೀರದಲ್ಲಿ ಪೊಲೀಸರು ದೈನಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದರು. ನೈಜೀರಿಯಾ ಪ್ರಜೆ ಡ್ರಗ್ಸ್ ಹಗರಣ ಬೆಳಕಿಗೆ ಬಂದ ಬಳಿಕ, ವಿದೇಶಿಯರನ್ನು ನಿರಂತರವಾಗಿ ತಪಾಸಣೆ ನಡೆಸುತ್ತೇವೆ.
ಫೆ.14ರಂದು ವಿದೇಶಿಯರನ್ನು ತಪಾಸಣೆ ಮಾಡಿದಾಗ, ಒಬ್ಬರ ಬಳಿ 20 ಗ್ರಾಂ ಮಾದಕ ವಸ್ತುವಿರುವುದು ತಿಳಿದುಬಂದಿದೆ. ಈ ಕುರಿತು ಆತನನ್ನು ವಿಚಾರಣೆ ನಡೆಸಿದ್ದೇವೆ ಎಂದು ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ವಿದೇಶಿಯರು ಹೇಳಿದಂತೆ ಪೊಲೀಸರು ಯಾವ ಪ್ರವಾಸಿಗರ ಮೇಲೆಯೂ ಹಲ್ಲೆ ನಡೆಸಿಲ್ಲ ಎಂದು ಅವರು ತಿಳಿಸಿದ್ದಾರೆ.











Click it and Unblock the Notifications