ಕರ್ನಾಟಕ, ಮಹಾರಾಷ್ಟ್ರ ಸಿಎಂಗಳ ಭೇಟಿ, ನಡೆದ ಚರ್ಚೆ ಏನು?
ಬೆಂಗಳೂರು, ಸೆಪ್ಟೆಂಬರ್ 03 : ನೆರೆಹಾವಳಿ ತಪ್ಪಿಸಲು ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ಜಲಾಶಯಗಳ ನಿರ್ವಹಣೆಗಾಗಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲು ತೀರ್ಮಾನವನ್ನು ಕೈಗೊಂಡಿವೆ.
ಮಂಗಳವಾರ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮುಂಬೈನಲ್ಲಿ ಭೇಟಿ ಮಾಡಿದರು. ಉಭಯ ನಾಯಕರ ಭೇಟಿಯ ವೇಳೆ ಈ ನಿರ್ಧಾರ ಕೈಕೊಳ್ಳಲಾಗಿದೆ.
ಗಣಪತಿ ಉತ್ಸವದ ಸಂದರ್ಭದಲ್ಲಿ ಮುಂಬೈಗೆ ಆಗಮಿಸಬೇಕು ಎಂಬ ಫಡ್ನವೀಸ್ ಆಹ್ವಾನದಂತೆ ಯಡಿಯೂರಪ್ಪ ಇಂದು ಭೇಟಿಯಾಗಿದ್ದರು. ಮಲ್ಬಾರ್ ಹಿಲ್ನಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸ 'ವರ್ಷಾ'ದಲ್ಲಿ ಭೋಜನ ಸವಿದ ನಾಯಕರು ಬಳಿಕ ಮಂತ್ರಾಲಯದಲ್ಲಿ ಸಮಾಲೋಚನೆ ನಡೆಸಿದರು.

ಕೃಷ್ಣಾ ನದಿ ನೀರಿನ ಮರುಹಂಚಿಕೆಗೆ ಒತ್ತಾಯಿಸುತ್ತಿರುವ ಆಂಧ್ರ ಮತ್ತು ತೆಲಂಗಾಣ ಸರ್ಕಾರಗಳ ನಿಲುವನ್ನು ವಿರೋಧಿಸಲೂ ಸಹ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಬೇಸಿಗೆ ಸಮಯದಲ್ಲಿ ಕರ್ನಾಟಕಕ್ಕೆ ನೀರು ಬಿಡುಗಡೆಯ ಸಂಬಂಧ 'ನೀರು ವಿನಿಮಯ ಒಪ್ಪಂದ' ಕ್ಕೆ ಪಟ್ಟು ಹಿಡಿದಿರುವ ಮಹಾರಾಷ್ಟ್ರದ ಪ್ರಸ್ತಾವನೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿಲ್ಲ.
ಕರ್ನಾಟಕದ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮಹಾರಾಷ್ಟ್ರದ ನೀರಾವರಿ ಸಚಿವ ಗಿರೀಶ ಮಹಾಜನ, ಇಂಧನ ಸಚಿವ ಚಂದ್ರಶೇಖರ ಬಾವನಕುಲೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನೆರೆಹಾವಳಿ ಪರಿಸ್ಥಿತಿಗೆ ಮಹಾರಾಷ್ಟ್ರ ಸರಕಾರವೇ ಹೊಣೆಯಾಗಿದ್ದು ಇಂಥ ಪರಿಸ್ಥಿತಿ ಮರುಕಳಿಸದಂತೆ ತಡೆಯಲು ಅಂತಾರಾಜ್ಯ ಸಮನ್ವಯ ಸಮಿತಿ ರಚಿಸಬೇಕೆಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ಸೋಮವಾರ ಸಂಜೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತುರ್ತು ಪತ್ರ ಕಳಿಸಿತ್ತು.

ಉಭಯ ರಾಜ್ಯಗಳ ನಡುವಿನ ಸಂಬಂಧ ಸುಧಾರಣೆಗೆ ಇಂದಿನ ತೀರ್ಮಾನ ಪೂರಕವಾಗಿದೆ. ಮಹಾರಾಷ್ಟ್ರ ಮುಂದಿನ ದಿನಗಳಲ್ಲಿ ಯಾವ ರೀತಿ ನಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು. ಕೃಷ್ಣಾ ನದಿಯ ನೀರನ್ನು ಮರುಹಂಚಿಕೆ ಮಾಡಬೇಕೆಂಬುದು ಆಂಧ್ರದ ಒತ್ತಾಯವಾಗಿದೆ.
ಅವಿಭಾಜ್ಯ ಆಂಧ್ರಕ್ಕೆ ಹಂಚಿಕೆಯಾದ ನೀರಿನಲ್ಲಿಯೇ ತೆಲಂಗಾಣ
ತನ್ನ ಪಾಲನ್ನು ಪಡೆಯಬೇಕೆಂಬುದು ಕರ್ನಾಟಕದ ವಾದ. ಈ ವಾದವನ್ನು ಬೆಂಬಲಿಸಿದ ಮಹಾರಾಷ್ಟ್ರವು ಕರ್ನಾಟಕದ ಜೊತೆಗೂಡಿ ಸುಪ್ರೀಂ ಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಸಲು ನಿರ್ಧರಿಸಿದೆ.












Click it and Unblock the Notifications