ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ 2014 : ಪ್ರಮುಖ ಘಟನಾವಳಿಗಳ ಹಿನ್ನೋಟ

|
Google Oneindia Kannada News

ಸರಣಿ ಅತ್ಯಾಚಾರ ಪ್ರಕರಣಗಳು, ಬೆಳಕಿಗೆ ಬಂದ ಹಗರಣಗಳು, ಸುದ್ದಿ ಮಾಡಿದ ಸ್ವಾಮೀಜಿಗಳು ಹೀಗೆ ಕರ್ನಾಟಕ 2014ರಲ್ಲಿ ಹಲವು ಏಳು ಬೀಳುಗಳನ್ನು ಕಂಡಿದೆ. ಕರ್ನಾಟಕ ಸರ್ಕಾರ ಮೊಬೈಲ್ ಒನ್ ಯೋಜನೆ ಜಾರಿಗೆ ತಂದು ಜನರಿಗೆ ಉಪಯೋಗ ಮಾಡಿಕೊಟ್ಟರೆ, ಶಾಸಕರು ಕಲಾಪದಲ್ಲಿ ಮೊಬೈಲ್ ಬಳಸಿ ಭಾರೀ ವಿವಾದವೆಬ್ಬಿಸಿದರು.

ಈ ವರ್ಷ ಉತ್ತಮ ಮಳೆಯಾಗಿ ರೈತರು ಸಂತಸ ಪಟ್ಟರೆ, ಉತ್ತರ ಕರ್ನಾಟಕ ಭಾಗದಲ್ಲಿ ಸುರಿದ ಅಕಾಲಿಕ ಮಳೆ ನಷ್ಟ ಉಂಟುಮಾಡಿತು. ಶಾಲೆಗಳಲ್ಲಿ ಮಕ್ಕಳ ಮೇಲೆ ಅತ್ಯಾಚಾರ, ಸರಣಿ ಅತ್ಯಾಚಾರ ಪ್ರಕರಣಗಳಿಂದ ರಾಷ್ಟ್ರಮಟ್ಟದಲ್ಲಿ ಕರ್ನಾಟಕ ಸದ್ದು ಮಾಡಿತು. [2014ರಲ್ಲಿ ಭಾರತ: ಘಟನಾವಳಿಗಳತ್ತ ಒಂದು ಹಿನ್ನೋಟ]

ಇಸ್ರೋ ನೌಕೆ ಮಂಗಳನ ಕಕ್ಷೆ ಸೇರಿದರೆ, ತುಮಕೂರಿನ ಬೃಹತ್ ಫುಡ್‌ಪಾರ್ಕ್ ಲೋಕಾರ್ಪಣೆಗೊಂಡಿತು. ಹಲವು ಹಗರಣಗಳು ಬೆಳಕಿಗೆ ಬಂದರೆ, ಮಠದ ಸ್ವಾಮೀಜಿಗಳು ಸುದ್ದಿಯಾದರು. ಐಪಿಎಸ್ ಅಧಿಕಾರಿ ಫೋಟೋ ತೆಗೆದು ಸುದ್ದಿ ಮಾಡಿದರೆ, ಶಾಸಕರ ಬೆಂಬಲಿಗರು ಪೊಲೀಸರಿಗೆ ಥಳಿಸಿ ಸದ್ದು ಮಾಡಿದರು. 2014ರ ಏಳು-ಬೀಳುಗಳ ಸಮ್ಮಿಶ್ರಣದ flashback ಇಲ್ಲಿದೆ.

Flashback 2014 what happened in Karnataka1

ಜನವರಿ 8, ಮಲ್ಲಿಕಾರ್ಜುನ ಬಂಡೆಗೆ ಗುಂಡು : ಕಲಬುರಗಿಯಲ್ಲಿ ಭೂಗತ ಪಾತಕಿ ಮುನ್ನಾ ಹಿಡಿಯಲು ಹೋದಾಗ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಅವರ ತಲೆಗೆ ಗುಂಡೇಟು ಬಿದ್ದಿತು. ತೀವ್ರವಾಗಿ ಗಾಯಗೊಂಡ ಅವರನ್ನು ಹೈದರಾಬಾದ್‌ನ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಜ.15ರಂದು ಚಿಕಿತ್ಸೆ ಫಲಕಾರಿಯಾಗದೆ ಬಂಡೆ ಮೃತಪಟ್ಟರು. ಮಲ್ಲಿಕಾರ್ಜುನ ಬಂಡೆ ಅವರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯಲಿಲ್ಲ ಎಂದು ಕಲಬುರಗಿ ಜನರು ಆರೋಪಿಸಿದರು. ಬಂಡೆ ಸಾವಿನ ಸುದ್ದಿ ಹರಡುತ್ತಿದ್ದಂತೆ ಕಲಬುರಗಿ ಉದ್ವಿಗ್ನಗೊಂಡಿತ್ತು. ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು. [ಬಂಡೆಯನ್ನು ವರ್ಷದ ವ್ಯಕ್ತಿಯಾಗಿ ಆಯ್ಕೆ ಮಾಡಿ]

ಫೆ.1, ಕಲಬುರಗಿ ಮೆಡಿಕಲ್ ಹಬ್ ಲೋಕಾರ್ಪಣೆ : ಕಲಬುರಗಿಯ ಸೇಡಂ ರಸ್ತೆಯಲ್ಲಿ ನಿರ್ಮಿಸಲಾದ ದೇಶದ ಮೊದಲ ಇಎಸ್‌ಐ ಮೆಡಿಕಲ್ ಹಬ್‌ ಅನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಉದ್ಘಾಟಿಸಿದರು. ಸುಮಾರು 50 ಎಕರೆ ವಿಸ್ತೀರ್ಣದಲ್ಲಿ ಇಎಸ್‌ಐಸಿ ವೈದ್ಯ ಸಂಕೀರ್ಣ ನಿರ್ಮಿಸಲಾಗಿದ್ದು, ದಂತ ವೈದ್ಯಕೀಯ, ಫಾರ್ಮಸಿ, ನರ್ಸಿಂಗ್, ಇತರೆ ಪ್ಯಾರಾ ಮೆಡಿಕಲ್ ಕೋರ್ಸ್‌ಗಳ ಅಧ್ಯಯನಕ್ಕೆ ಒಂದೇ ಸೂರಿನಡಿ ಅವಕಾಶ ಕಲ್ಪಿಸಲಾಗಿದೆ.

Flashback 2014 what happened in Karnataka2

ಫೆ. 11 ರಾಮದಾಸ್ ಆತ್ಮಹತ್ಯೆ ಯತ್ನ : ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಎಸ್ಎ ರಾಮದಾಸ್ ಅವರು ಫೆ.11ರಂದು ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ಪ್ರೇಮಕುಮಾರಿ ಎಂಬ ಮಹಿಳೆ ಮಾಧ್ಯಮದ ಮುಂದೆ ಮಾಜಿ ಸಚಿವ ರಾಮದಾಸ್ ಅವರು ತಮ್ಮನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂದು ಆರೋಪಿಸಿದ್ದರು. ಇದರಿಂದ ಮನನೊಂದ ರಾಮದಾಸ್ ಆತ್ಮಹತ್ಯೆಗೆ ಯತ್ನಿಸಿದ್ದರು.

ಫೆ.14 ಕರ್ನಾಟಕ ಬಜೆಟ್ ದಿನದ ಬಜೆಟ್ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಫೆಬ್ರವರಿ ತಿಂಗಳಲ್ಲೇ ರಾಜ್ಯ ಬಜೆಟ್ ಮಂಡನೆಯಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಫೆಬ್ರವರಿ 14ರ ಶುಕ್ರವಾರದಂದು ಬಜೆಟ್ ಮಂಡಿಸಿದರು. 1.21 ಲಕ್ಷ ಕೋಟಿ ಯೋಜನಾ ಗಾತ್ರದ ಬಜೆಟ್ಅನ್ನು ಸಿಎಂ ಸಿದ್ದರಾಮಯ್ಯ ಪ್ರೇಮಿಗಳ ದಿನ ಮಂಡಿಸಿದರು.

Flashback 2014 what happened in Karnataka3

ಫೆ. 28 ಹಸಿರು ಮೆಟ್ರೋಗೆ ಹಸಿರು ನಿಶಾನೆ : ಬೆಂಗಳೂರಿನಲ್ಲಿ ಸಂಪಿಗೆ ರಸ್ತೆ-ಪೀಣ್ಯ ಹಸಿರು ಮಾರ್ಗದ ನಮ್ಮ ಮೆಟ್ರೋ ರೈಲು ಸಂಚಾರಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಮಾರ್ಚ್ 1ರಿಂದ ಈ ಮಾರ್ಗದ ಸಂಚಾರ ಸಾರ್ವಜನಿಕರಿಗೆ ಮುಕ್ತವಾಯಿತು. ಪೀಣ್ಯ-ಸಂಪಿಗೆ ರಸ್ತೆ ನಡುವಿನ ಪ್ರಯಾಣ ದರ 23ರೂ. ಇದ್ದು, ಕೇವಲ 18 ನಿಮಿಷಗಳಲ್ಲಿ ಪೀಣ್ಯಕ್ಕೆ ತಲುಪಬಹುದಾಗಿದೆ.

ಮಾರ್ಚ್ 1, ಸಿ.ಆರ್‌.ಸಿಂಹ ವಿಧಿವಶ : ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟ, ನಿರ್ದೇಶಕ ಹಾಗೂ ರಂಗಕರ್ಮಿ ಸಿ.ಆರ್.ಸಿಂಹ (72) ಅವರು ಮಾರ್ಚ್ 1ರಂದು ವಿಧಿವಶರಾದರು. ನಾಲ್ಕು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಪ್ರಜ್ಞಾಹೀನ ಸ್ಥಿತಿಗೆ ಜಾರಿ ಚಿಕಿತ್ಸೆಗೆ ಸ್ಪಂದಿಸದಂತಾಗಿದ್ದರು. ರಂಗತಂಡವಾದ 'ನಟರಂಗ' ಕಟ್ಟಿ ಹಲವಾರು ರಂಗಪ್ರಯೋಗಗಳನ್ನು ಮಾಡಿ ಗೆದಿದ್ದ ಸಿ.ಆರ್.ಸಿಂಹ ಅವರು, ಕಾಕನಕೋಟೆ, ತುಘಲಕ್ ಹಾಗೂ ಸಂಕ್ರಾಂತಿ ನಾಟಕಗಳನ್ನು ನಿರ್ದೇಶಿಸಿದ್ದರು.

ಮಾರ್ಚ್ 3, ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ : ಪ್ರತಿಭಟನೆ ನಡುವೆಯೇ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಬಯಲುಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಕ್ಕಬಳ್ಳಾಪುರದಲ್ಲಿ ಶಂಕುಸ್ಥಾಪನೆ ನೆರವೇರಿಸಿದರು. ಎತ್ತಿನಹೊಳೆ ಯೋಜನೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಯೋಜನೆಯ ಶಂಕುಸ್ಥಾಪನೆ ಖಂಡಿಸಿ ಕರೆ ನಿಡಿದ್ದ ಜಿಲ್ಲಾ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

Flashback 2014 what happened in Karnataka4

ಏಪ್ರಿಲ್ 17, ಲೋಕಸಭೆ ಚುನಾವಣೆಗೆ ಮತದಾನ : 16ನೇ ಲೋಕಸಭೆಗೆ ಕರ್ನಾಟಕದಲ್ಲಿ ಏಪ್ರಿಲ್ 17ರಂದು ಮತದಾನ ನಡೆಯಿತು. ಸಣ್ಣಪುಟ್ಟ ಘರ್ಷಣೆ ಪ್ರಕರಣಗಳನ್ನು ಹೊರತುಪಡಿಸಿದರೆ, ಮತದಾನ ಶಾಂತಿಯುತವಾಗಿ ಪೂರ್ಣಗೊಂಡಿತು. ಒಟ್ಟಾರೆ ರಾಜ್ಯದಲ್ಲಿ ಶೇ 62 ರಷ್ಟು ಮತದಾನವಾಗಿತ್ತು. ಆದರೆ, ಬೆಂಗಳೂರು ನಗರದಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿತ್ತು.

ಏಪ್ರಿಲ್ 19, ಎಎನ್‌ಎಫ್ ಎನ್‌ಕೌಂಟರ್ : ಶೃಂಗೇರಿಯ ತನಿಕೋಡು ಚೆಕ್ ಪೋಸ್ಟ್ ಬಳಿ ಎಎನ್ಎಫ್ ಸಿಬ್ಬಂದಿ ನಕ್ಸಲ್‌ ಎಂದು ಶಂಕಿಸಿ ಯುವಕನೊಬ್ಬನ ಮೇಲೆ ಗುಂಡಿನ ದಾಳಿ ನಡೆಸಿದರು. ಈ ಪ್ರಕರಣದ ಸಂಬಂಧ ಎಎನ್ಎಫ್ ಪೇದೆ ನವೀನ್ ನಾಯಕ್ ಎಂಬುವವರನ್ನು ಬಂಧಿಸಲಾಗಿತ್ತು. ಎನ್ ಕೌಂಟರ್ ನಲ್ಲಿ ಕಬೀರ್ ಎಂಬ ಯುವಕ ಮೃತಪಟ್ಟಿದ್ದ. ಈ ಕುರಿತು ಸಿಐಡಿ ತನಿಖೆ ನಡೆಯುತ್ತಿದೆ.

ಮೇ 16, ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟ : ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶ ಪ್ರಕಟಗೊಂಡಿತು. 17ರಲ್ಲಿ ಬಿಜೆಪಿ ಜಯಗಳಿಸಿದರೆ, ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ 9 ಸೀಟುಗಳನ್ನು ಪಡೆಯಿತು. ಜೆಡಿಎಸ್ ಕೇವಲ 2 ಸ್ಥಾನಗಳನ್ನು ತನ್ನದಾಗಿಸಿಕೊಂಡರೆ, ಆಮ್ ಆದ್ಮಿ ಪಕ್ಷ ಹೇಳಹೆಸರಿಲ್ಲದಂತಾಯಿತು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ನಡೆಸುತ್ತಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. [ಇವರು ನಮ್ಮ ಸಂಸದರು]

English summary
The year 2014 People of Karnataka have a reason to cheer. Thanks to Karnataka Mobile One, they can now access around 4,500 services at their fingertips. Here is a look at the top events that unfolded in Karnataka in 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X