ಏಳು ಹಾಲಿ ಒಬ್ಬ ಮಾಜಿ ಶಾಸಕನ ವಿರುದ್ಧ ಎಫ್ಐಆರ್ ದಾಖಲು
ಬೆಂಗಳೂರು, ನವೆಂಬರ್ 21: ಏಳು ಹಾಲಿ ವಿಧಾನಸಭಾ ಪರಿಷತ್ ಸದಸ್ಯರ ಹಾಗೂ ಒಬ್ಬ ಮಾಜಿ ಶಾಸಕರ ವಿರುದ್ಧ ನಗರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಸಲುವಾಗಿ ತಪ್ಪು ವಿಳಾಸ ಮಾಹಿತಿ ನೀಡಿ ವಂಚಿಸಿದ್ದಾರೆ ಎಂದು ರಾಯಚೂರು ಮೂಲದ ವ್ಯಕ್ತಿಯೊಬ್ಬರು ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು ಸುಳ್ಳು ದಾಖಲೆನೀಡಿ ವಂಚಿಸಿದ ಶಾಸಕರ ವಿರುದ್ಧ ವಂಚನೆ ಪ್ರಕರಣ (420), ಅಧಿಕಾರ ದುರುಪಯೋಗ, ಸರ್ಕಾರಕ್ಕೆ ತಪ್ಪು ಮಾಹಿತಿ, ಅಪರಾಧದ ಉದ್ದೇಶಕ್ಕೆ ಗುಂಪುಗೂಡುವುದು ಮತ್ತು ಜನಪ್ರತಿನಿಧಿ ಕಾಯ್ದೆ ಅಡಿ ಪ್ರಕರಣಗಳನ್ನು ದಾಖಲಿಸುವಂತೆ ಸೂಚಿಸಿತ್ತು. ಅದರಂತೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಯಾರ್ಯಾರ ಮೇಲೆ ಪ್ರಕರಣ ದಾಖಲು?
ಪರಿಷತ್ತಿನ ಸದಸ್ಯರಾದ ಎಸ್.ರವಿ, ರಘು ಆಚಾರ್, ಆರ್.ಬಿ.ತಿಮ್ಮಾಪುರ, ಎನ್.ಎಸ್.ಬೋಸರಾಜು, ಅಲ್ಲಂ ವೀರಭದ್ರಪ್ಪ, ಜೆಡಿಎಸ್ನ ಎನ್.ಅಪ್ಪಾಜಿಗೌಡ, ಸಿ.ಆರ್.ಮನೋಹರ್ ಹಾಗೂ ನಿವೃತ್ತ ಪರಿಷತ್ತಿನ ಸದಸ್ಯ ಎಂ.ಡಿ.ಲಕ್ಷ್ಮಿನಾರಾಯಣ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಕೆಲವರು ನಿರೀಕ್ಷಣಾ ಜಾಮೀನಿಗೆ ಮೊರೆ ಹೋಗಿದ್ದಾರೆ.

2016ರಲ್ಲಿ ನಡೆದಿದ್ದ ಘಟನೆ
2016ರಲ್ಲಿ ಬಿಬಿಎಂಪಿ ಮೇಯರ್ ಆಯ್ಕೆ ಸಂದರ್ಭದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ತುರುಸಿನ ಪೈಪೋಟಿ ಇತ್ತು. ಈ ಸಂದರ್ಭದಲ್ಲಿ ಈ ಎಂಎಲ್ಸಿಗಳು ಸುಳ್ಳು ವಿಳಾಸ ನೀಡಿ ನಾವು ಬಿಬಿಎಂಪಿ ವ್ಯಾಪ್ತಿಯಲ್ಲಿಯೇ ಇರುವುದಾಗಿ ಹೇಳಿ ಮೇಯರ್ ಚುನಾವಣೆಯಲ್ಲಿ ಮತದಾನ ಮಾಡಿದ್ದರು.

ಸ್ವಕ್ಷೇತ್ರದಿಂದ ಬರುತ್ತಿರುವುದಾಗಿ ಭತ್ಯೆ ಸ್ವೀಕಾರ
ಆದರೆ ವಿಧಾನಸಭಾ ಕಲಾಪದ ಸಂದರ್ಭ ತಾವು ತಮ್ಮ ಸ್ವಕ್ಷೇತ್ರದಿಂದ ಕಲಾಪಗಳಿಗೆ ಬರುತ್ತಿರುವುದಾಗಿ ಬಿಲ್ ನೀಡಿ ಭತ್ಯೆ ಹಣ ಪಡೆದಿದ್ದರು. ಇದು ವಿವಾದ ಸೃಷ್ಠಿಸಿತ್ತು. ಈ ಅಕ್ರಮದ ಬಗ್ಗೆ ಬಿಜೆಪಿ ಸಹ ಆಕ್ಷೇಪ ವ್ಯಕ್ತಪಡಿಸಿ ಸಭಾಪತಿಗೆ ದೂರು ನೀಡಿತ್ತು. ಆದರೆ ಯಾವುದೇ ಕ್ರಮ ಕೈಗೊಂಡಿರಿಲಿಲ್ಲ. ಈಗ ಇವರೆಲ್ಲರ ಮೇಲೆ ಪ್ರಕರಣ ದಾಖಲಾಗಿದೆ.

ಸೆಕ್ಷನ್ 420 ಹೇರಿಕೆ
ಐಪಿಸಿ ಸೆಕ್ಷನ್ 420 ಹೇರಿರುವ ಕಾರಣ ಬಂಧಿಸುವ ಅವಕಾಶ ಪೊಲೀಸರಿಗೆ ಇದೆ. ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುವುದು ಸಹ ಅಪರಾಧವೇ. ಆದರೆ ಜನಪ್ರತಿನಿಧಿ ಕಾಯ್ದೆಯ ಪ್ರಕರಣದ ವಿಚಾರಣೆಯನ್ನು ಸಭಾಪತಿಗಳೇ ಮಾಡಬೇಕಿದೆ. ಈಗಾಗಲೇ ಆರೋಪಿತ ಶಾಸಕರು ನಿರೀಕ್ಷಣಾ ಜಾಮೀನಿನ ಮೊರೆ ಹೋಗಿದ್ದಾರೆ.












Click it and Unblock the Notifications