Siddaramaiah Biopic : ಸಿದ್ದರಾಮಯ್ಯ ಕುರಿತು ಸಿನಿಮಾ, ರಾಮನವಮಿಗೆ ಬಂತು ಪೋಸ್ಟರ್
ಬೆಂಗಳೂರು, ಮಾರ್ಚ್ 30; ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೀವನ ಆಧಾರಿತ ಸಿನಿಮಾ ನಿರ್ಮಾಣವಾಗಲಿದೆ. ಗುರುವಾರ ರಾಮನವಮಿಯ ದಿನದಂದು ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಸಿನಿಮಾ ಆಗಸ್ಟ್ ವೇಳೆಗೆ ಬಿಡುಗಡೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಗುರುವಾರ ಬೆಂಗಳೂರಿನ ಸಿದ್ದರಾಮಯ್ಯ ನಿವಾಸದಲ್ಲಿ 'Leader ರಾಮಯ್ಯ' ಎಂಬ ಶೀರ್ಷಿಕೆಯ ಸಿನಿಮಾ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಸತ್ಯರತ್ನಂ ನಿರ್ದೇಶನದಲ್ಲಿ ಸಿದ್ದರಾಮಯ್ಯ ಜೀವನ ಆಧಾರಿತ ಸಿನಿಮಾ ತೆರೆಗೆ ಬರಲಿದೆ. ರಾಮನವಮಿ ದಿನದಂದು ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

ಕನ್ನಡ, ತಮಿಳು, ತೆಲಗು, ಹಿಂದಿ ಮತ್ತು ಮಲೆಯಾಳಂ ಭಾಷೆಯಲ್ಲಿ 'Leader ರಾಮಯ್ಯ' ಎಂಬ ಶೀರ್ಷಿಕೆಯ ಸಿನಿಮಾ ತೆರೆಗೆ ಬರಲಿದೆ. ಸದ್ಯದ ಮಾಹಿತಿ ಪ್ರಕಾರ ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ಸಿದ್ದರಾಮಯ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಸತ್ಯರತ್ನಂ ಅವರೇ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಸಿದ್ದರಾಮಯ್ಯ ಅಭಿಮಾನಿ ಸಂಘದಿಂದ ಗುರುವಾರ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಬುಧವಾರ ಕರ್ನಾಟಕದ ಚುನಾವಣೆ ದಿನಾಂಕ ಘೋಷಣೆಯಾಗಿ, ನೀತಿ ಸಂಹಿತೆ ಜಾರಿಗೆ ಬಂದಿತ್ತು. ಗುರುವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿನಿಮಾ ಕುರಿತ ಸುದ್ದಿ ಹೊರಬಂದಿದೆ. ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ.
ಮೈಸೂರಿನ ಸಿದ್ದರಾಮನಹುಂಡಿ ಎಂಬ ಗ್ರಾಮದಲ್ಲಿ ಜನಿಸಿದ ಸಿದ್ದರಾಮಯ್ಯ ಬಳಿಕ ರಾಜ್ಯದ ಮುಖ್ಯಮಂತ್ರಿ ಹುದ್ದೆ ಏರಿರುವ ಜೀವನಗಾಥೆ ಸ್ವಾರಸ್ಯಕರವಾಗಿದೆ. ಮೊದಲು ಜೆಡಿಎಸ್ ಪಕ್ಷದಲ್ಲಿದ್ದ ಸಿದ್ದರಾಮಯ್ಯ ಬಳಿಕ ಕಾಂಗ್ರೆಸ್ ಸೇರಿ ಮುಖ್ಯಮಂತ್ರಿಯಾದರು ಐದು ವರ್ಷಗಳ ಕಾಲ ರಾಜ್ಯದಲ್ಲಿ ಆಡಳಿತ ನಡೆಸಿದರು. ಅತಿ ಹೆಚ್ಚು ಬಾರಿ ಬಜೆಟ್ ಮಂಡನೆ ಮಾಡಿದ ದಾಖಲೆ ಸಹ ಅವರ ಹೆಸರಿನಲ್ಲಿದೆ. ಕುರುಬ ಸಮುದಾಯದ ಪ್ರಭಾವಿ ನಾಯಕನ ಜೀವನ ತೆರೆಯ ಮೇಲೆ ಬರುತ್ತಿದೆ.

ಸಿನಿಮಾ ಬೇಡ ಎಂದಿದ್ದರು; ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೀವನ ಆಧಾರಿತ ಸಿನಿಮಾ ನಿರ್ಮಾಣವಾಗಲಿದೆ ಎಂಬ ಸುದ್ದಿ ಹಲವು ದಿನಗಳಿಂದ ಕೇಳಿ ಬಂದಿತ್ತು. ಈ ಕುರಿತು ಸಿದ್ದರಾಮಯ್ಯ ಜೊತೆ ಸಹ ಚರ್ಚೆ ಮಾಡಲಾಗಿತ್ತು. ಆಗ ಅವರು ಸಿನಿಮಾ ಬೇಡ ಸುಮ್ಮನೆ 20 ಕೋಟಿ ರೂ. ಹಾಳು ಮಾಡಬೇಡಿ ಎಂದು ಸಲಹೆ ನೀಡಿದ್ದರಂತೆ. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ಸಿನಿಮಾ ಮಾಡಲು ಅವರು ಒಪ್ಪಿಗೆ ನೀಡಿದ್ದರು. ಸಿನಿಮಾದ ಚಿತ್ರಕಥೆ ಸಿದ್ಧವಾದ ಮೇಲೆ ಅದನ್ನು ಅವರಿಗೆ ತೋರಿಸಿ ಅಂತಿಮ ಒಪ್ಪಿಗೆಯನ್ನು ಪಡೆಯಲಾಗಿದೆ.
ಸಿದ್ದರಾಮಯ್ಯ 2018ರ ಚುನಾವಣೆಗೆ ಮೈಸೂರಿನ ಚಾಮುಂಡೇಶ್ವರಿ, ಬಾಗಲಕೋಟೆಯ ಬಾದಾಮಿ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿಯಲ್ಲಿ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಚುನಾವಣೆಯಲ್ಲಿ ಅವರು ಕ್ಷೇತ್ರ ಬದಲಾವಣೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಈಗಾಗಲೇ 124 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಸಿದ್ದರಾಮಯ್ಯ ಈ ಬಾರಿ ಮೈಸೂರಿನ ವರುಣ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎಂದು ಹೇಳಿದೆ.
ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಕಣಕ್ಕಿಳಿಯುತ್ತಾರೆ ಎಂಬ ಚರ್ಚೆಗಳು ಇದ್ದವು. ಆದರೆ ಪಕ್ಷದ ನಾಯಕ ರಾಹುಲ್ ಗಾಂಧಿ ಸಲಹೆಯಂತೆ ಸಿದ್ದರಾಮಯ್ಯ ವರುಣದಿಂದ ಕಣಕ್ಕಿಳಿಯುತ್ತಿದ್ದಾರೆ. ವರುಣದ ಹಾಲಿ ಶಾಸಕ ಯತೀಂದ್ರ ಸಿದ್ದರಾಮಯ್ಯ ತಂದೆಗಾಗಿ ಕ್ಷೇತ್ರತ್ಯಾಗ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮತ್ತೊಂದು ಕ್ಷೇತ್ರದಿಂದಲೂ ಕಣಕ್ಕಳಿಯಬಹುದು ಎಂಬ ಲೆಕ್ಕಾಚಾರವಿದೆ. ಆದರೆ ಈ ಕುರಿತು ಯಾವುದೇ ನಾಯಕರು ಹೇಳಿಕೆ ನೀಡಿಲ್ಲ.
ಈಗಾಗಲೇ ವರುಣ ಕ್ಷೇತ್ರದಲ್ಲಿ ಅವರು ಪ್ರಚಾರ ಆರಂಭಿಸಿದ್ದಾರೆ. ನನ್ನ ಎದುರಾಳಿ ಯಾರಾದರೂ ಆಗಲಿ ಕ್ಷೇತ್ರದ ಜನರು ನನ್ನ ಜೊತೆ ಇದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.












Click it and Unblock the Notifications