ಕಾಂಗ್ರೆಸ್ ಅಸಮಾಧಾನ, ಬಿಜೆಪಿಗೆ ಲಾಭಕ್ಕಿಂತ ನಷ್ಟವಾಗಿದ್ದೇ ಹೆಚ್ಚು
Recommended Video

ಬೆಂಗಳೂರು, ಸೆಪ್ಟೆಂಬರ್ 18 : ಸತೀಶ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ಕಾಂಗ್ರೆಸ್ನಲ್ಲಿ ನಡೆಸಿದ ಚಟುವಟಿಕೆಗಳಿಂದ ಕರ್ನಾಟಕ ಬಿಜೆಪಿಗೆ ಸಿಕ್ಕಿದ ಲಾಭವೇನು?. ಕರ್ನಾಟಕ ಬಿಜೆಪಿ ನಾಯಕರಿಗೆ ಯಾವ ಲಾಭವೂ ಆಗಿಲ್ಲ. ಸರ್ಕಾರ ರಚನೆ ಮಾಡುವ ಕನಸು ಈಡೇರಿಲ್ಲ.
ಬೆಳಗಾವಿ ಪಿಎಲ್ಡಿ ಬ್ಯಾಂಕ್ ಚುನಾವಣೆ ಬಳಿಕ ಜಾರಕಿಹೊಳಿ ಸಹೋದರರು ಅಸಮಾಧಾನಗೊಂಡರು. ಇದು ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಮೇಲೆ ಪ್ರಭಾವ ಬೀರುತ್ತದೆ. ಸರ್ಕಾರ ಪತನವಾಗಲಿದೆ ಎಂದು ವಿಶ್ಲೇಷಿಸಲಾಗಿತ್ತು.
ಜಾರಕಿಹೊಳಿ ಸಹೋದರರನ್ನು ಸಮಾಧಾನಪಡಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಪ್ರಯತ್ನ ಫಲ ಕೊಟ್ಟಿಲ್ಲ. ಆದರೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಹೋದರರ ಬಂಡಾಯ ಶಮನಗೊಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿನ ಬಿಕ್ಕಟ್ಟಿನ ಲಾಭ ಪಡೆಯಲು ಬಿಜೆಪಿ ನಡೆಸಿದ ಪ್ರಯತ್ನ ಫಲಕೊಟ್ಟಿಲ್ಲ. ರಮೇಶ್ ಜಾರಕಿಹೊಳಿ ಮತ್ತು ಅವರ ಬೆಂಬಲಿಗರಾದ 14 ಶಾಸಕರು ಪಕ್ಷ ಬಿಟ್ಟು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳು ಸುಳ್ಳಾಗಿವೆ. ಈ ಗೊಂದಲದಿಂದ ಬಿಜೆಪಿ ಪಕ್ಷಕ್ಕೆ ಆದ ಲಾಭನಷ್ಟವೇನು?....

ಬಿಜೆಪಿಗೆ ಕೆಟ್ಟ ಹೆಸರು
ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಜಿಲ್ಲೆಯ ಬಿಜೆಪಿ ನಾಯಕರು ಬೆಂಬಲ ನೀಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಜಾರಕಿಹೊಳಿ ಸಹೋದರರ ಅಸಮಾಧಾನ ಸ್ಫೋಟಗೊಳ್ಳುತ್ತಿದ್ದಂತೆ ಆಪರೇಷನ್ ಕಮಲ ನಡೆಯಲಿದೆ ಎಂಬ ಸುದ್ದಿ ಹಬ್ಬಿತು. ಕರ್ನಾಟಕದಲ್ಲಿ ಹುಟ್ಟಿಕೊಂಡ ಸುದ್ದಿ ದೆಹಲಿ ತನಕ ತಲುಪಿತು. ಆದರೆ, ಈ ವಿಚಾರದಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗಿದ್ದು ಬಿಟ್ಟರೆ ಬೇರೆ ಪ್ರಯೋಜನವಾಗಲಿಲ್ಲ.

ಬಿಜೆಪಿ ನಾಯಕರ ವಿರುದ್ಧ ದೂರು
ಆಪರೇಷನ್ ಕಮಲ ಆರಂಭಿಸಿರುವ ಬಿಜೆಪಿ ನಮ್ಮ ಶಾಸಕರಿಗೆ ಹಣದ ಆಮಿಷವೊಡ್ಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಆದಾಯ ತೆರಿಗೆ ಇಲಾಖೆ ದೂರು ನೀಡಿದರು. ಬಿಜೆಪಿ ನಾಯಕರಿಗೆ ಹಣ ಎಲ್ಲಿಂದ ಬಂತು ಎಂದು ತನಿಖೆ ನಡೆಸುವಂತೆ ಮನವಿ ಮಾಡಿತು.
ಬಿ.ಎಸ್.ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಮಲ್ಲೇಶ್ವರ ಶಾಸಕ ಡಾ.ಅಶ್ವಥ್ ನಾರಾಯಣ, ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ, ಮಾಜಿ ಶಾಸಕ ಸಿ.ಪಿ.ಯೋಗೇಶ್ವರ ಅವರ ವಿರುದ್ಧ ದೂರು ನೀಡಲಾಯಿತು. ಇದರಿಂದ ಪಕ್ಷದ ಬಗ್ಗೆ ಅಪಪ್ರಚಾರ ನಡೆಯಿತು.

ಕಿಂಗ್ ಪಿನ್ ಬಾಂಬ್ ಹಾಕಿದ ಕುಮಾರಸ್ವಾಮಿ
ಆಪರೇಷನ್ ಕಮಲಕ್ಕೆ ಬಿಜೆಪಿ ಯಾರನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂಬುದು ಗೊತ್ತು. ಕಿಂಗ್ ಪಿನ್ಗಳೆಲ್ಲಾ ಏನಾಗಿದ್ದರು ಎಂಬುದೂ ಗೊತ್ತು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬಾಂಬ್ ಹಾಕಿದರು. ಬಿಜೆಪಿ ನಾಯಕರು ರೌಡಿ ಶೀಟರ್ ಸೇರಿದಂತೆ ಹಲವರ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಮಾಧ್ಯಮಗಳಲ್ಲಿ ಹಲವು ವರದಿಗಳು ಪ್ರಸಾರವಾದವು. ಕಾಂಗ್ರೆಸ್ನಲ್ಲಿನ ಚಟುವಟಿಕೆಗಳ ಲಾಭ ಪಡೆಯಲು ಹೋದ ಬಿಜೆಪಿಗೆ ಹಿನ್ನಡೆ ಉಂಟಾಯಿತು.

ಯಾವ ಶಾಸಕರು ಬಿಜೆಪಿಗೆ ಬರಲ್ಲ
ರಮೇಶ್ ಜಾರಕಿಹೊಳಿ ಅವರ ಜೊತೆ 14 ಶಾಸಕರು ಬಿಜೆಪಿಗೆ ಬರಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದನ್ನು ಬಳಸಿಕೊಂಡು ಕಾಂಗ್ರೆಸ್, ಜೆಡಿಎಸ್ ನಾಯಕರು ಬಿಜೆಪಿ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನ ನಡೆಸಿದೆ ಎಂದು ಬಹಿರಂವಾಗಿ ಹೇಳಿಕೆ ನೀಡುವ ಮೂಲಕ ಪಕ್ಷದ ನಾಯಕರಿಗೆ ಮುಜುಗರ ತಂದರು. ಸ್ವತಃ ಯಡಿಯೂರಪ್ಪ ಅವರು ನಾವು ವಿರೋಧ ಪಕ್ಷದಲ್ಲಿ ಕೂರುತ್ತೇವೆ. ಸರ್ಕಾರವನ್ನು ನಾವು ಅಸ್ಥಿರ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಬೇಕಾಯಿತು. ಕಾಂಗ್ರೆಸ್ ಅಸಮಾಧಾನದಿಂದ ಬಿಜೆಪಿಗೆ ಯಾವುದೇ ಲಾಭವಾಗಿಲ್ಲ.

ಸರ್ಕಾರ ರಚನೆ ಪ್ರಯತ್ನ ವಿಫಲ
2018ರ ವಿಧಾನಸಭೆ ಚುನಾವಣೆಯಲ್ಲಿ 104 ಸ್ಥಾನಗಳನ್ನು ಗಳಿಸಿದರೂ ಕರ್ನಾಟಕದಲ್ಲಿ ಅಧಿಕಾರ ಪಡೆಯುವ ಬಿಜೆಪಿ ಕನಸು ನನಸಾಗಿಲ್ಲ. ಬಿ.ಎಸ್.ಯಡಿಯೂರಪ್ಪ ರಚನೆ ಮಾಡಿದ್ದ ಸರ್ಕಾರ ಬಹುಮತದ ಕೊರತೆ ಕಾರಣಕ್ಕೆ ಪತನವಾಗಿತ್ತು.
ಈಗ ಜಾರಕಿಹೊಳಿ ಸಹೋದರರ ಅಸಮಾಧಾನ ಮುಂದಿಟ್ಟುಕೊಂಡು ಸರ್ಕಾರ ರಚನೆಗೆ ಮತ್ತೊಮ್ಮೆ ಪ್ರಯತ್ನ ನಡೆಸಲಾಗಿತ್ತು. ಯಡಿಯೂರಪ್ಪ ನಿವಾಸದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿದ್ದವು. ಆದರೆ, ಈಗ ಅಸಮಾಧಾನ ಶಮನವಾಗಿದ್ದು, ಬಿಜೆಪಿಯ ಪ್ರಯತ್ನಕ್ಕೆ ಮತ್ತೆ ಹಿನ್ನಡೆ ಆಗಿದೆ.












Click it and Unblock the Notifications