ಜೆಡಿಎಸ್ ನಾಯಕರಿಗೆ ಜಮೀರ್ ನೀಡಿದ ಸಲಹೆ ಏನು?
ಬೆಂಗಳೂರು, ಆಗಸ್ಟ್ 25 : 'ಪಕ್ಷದಿಂದ ಅಮಾನತುಗೊಂಡಿರುವ ಎಂಟು ಶಾಸಕರನ್ನು ಪಕ್ಷಕ್ಕೆ ವಾಪಸ್ ಕರೆಸಿಕೊಳ್ಳುವ ಅಥವ ಉಚ್ಛಾಟನೆ ಮಾಡುವ ಕುರಿತು ಶೀಘ್ರವೇ ನಿರ್ಧಾರವನ್ನು ಕೈಗೊಳ್ಳಬೇಕು' ಎಂದು ಶಾಸಕ ಜಮೀರ್ ಅಹಮದ್ ಖಾನ್ ಜೆಡಿಎಸ್ ನಾಯಕರಿಗೆ ಸಲಹೆ ನೀಡಿದ್ದಾರೆ.
ನಾಗಮಂಗಲ ಶಾಸಕ ಚೆಲುವರಾಯಸ್ವಾಮಿ, ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಅವರು ಬುಧವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. 'ನಾನು ಸೇರಿದಂತೆ ಕೆಲವು ಶಾಸಕರು ಪಕ್ಷ ಬಿಡುವ ತಯಾರಿಯಲ್ಲಿದ್ದೇವೆ. ಆದ್ದರಿಂದ, ಬೇಗ ನಿರ್ಧಾರ ಕೈಗೊಳ್ಳಿ' ಎಂದು ಒತ್ತಾಯಿಸಿದರು.['ನಾನು ಅವರಿಗೆ ಹಣ ಕೊಟ್ಟು ಸಾಕುವಷ್ಟು ಶ್ರೀಮಂತನಲ್ಲ']
'ನಮ್ಮನ್ನು ಪಕ್ಷದಿಂದ ಹೊರಗೆ ಹಾಕಲು ದೇವೇಗೌಡರು ಆತುರದಲ್ಲಿದ್ದಾರೆ. ಉಳಿಸಿಕೊಳ್ಳಿ ಎಂದು ಒತ್ತಾಯ ಮಾಡುವುದಿಲ್ಲ. ಅವರ ತೀರ್ಮಾನಕ್ಕೆ ನಾವೆಲ್ಲರೂ ಕಾಯುತ್ತಿದ್ದೇವೆ. ಪಕ್ಷ ದೇವೇಗೌಡರದ್ದು, ಅವರು ಈ ಕುರಿತು ನಿರ್ಧಾರ ಕೈಗೊಳ್ಳಬೇಕು' ಎಂದು ಚೆಲುವರಾಯಸ್ವಾಮಿ ಹೇಳಿದರು.[ಜೆಡಿಯುನತ್ತ ಹೊರಟ ಜೆಡಿಎಸ್ಸಿನ 8 ಶಾಸಕರು?]
ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘನೆ ಮಾಡಿ, ಅಡ್ಡ ಮತದಾನ ಮಾಡಿದ ಕಾರಣಕ್ಕೆ 8 ಶಾಸಕರನ್ನು ಜೆಡಿಎಸ್ ಪಕ್ಷದಿಂದ ಅಮಾನತು ಮಾಡಲಾಗಿದೆ. ಈ ಶಾಸಕರನ್ನು ಪಕ್ಷಕ್ಕೆ ಪುನಃ ಸೇರಿಸಿಕೊಳ್ಳುವುದಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ...

ಅಮಾನತುಗೊಂಡಿರುವ ಶಾಸಕರು
ಜಮೀರ್ ಅಹಮದ್ ಖಾನ್ (ಚಾಮರಾಜಪೇಟೆ), ಕೆ.ಗೋಪಾಲಯ್ಯ (ಮಹಾಲಕ್ಷ್ಮೀ ಪುರ), ಅಖಂಡ ಶ್ರೀನಿವಾಸಮೂರ್ತಿ (ಪುಲಿಕೇಶಿ ನಗರ), ಚೆಲುವರಾಯ ಸ್ವಾಮಿ (ನಾಗಮಂಗಲ), ಎಚ್.ಸಿ.ಬಾಲಕೃಷ್ಣ (ಮಾಗಡಿ) ಇಕ್ಬಾಲ್ ಅನ್ಸಾರಿ (ಗಂಗಾವತಿ), ರಮೇಶ್ ಬಂಡಿಸಿದ್ದೇಗೌಡ (ಶ್ರೀರಂಗಪಟ್ಟಣ), ಭೀಮಾ ನಾಯಕ್ (ಹಗರಿಬೊಮ್ಮನಹಳ್ಳಿ).

'ಬೇಗ ನಿರ್ಧಾರ ತೆಗೆದುಕೊಳ್ಳಿ'
'ಕೆಲವು ಶಾಸಕರು ಪಕ್ಷ ಬಿಡಲು ತಯಾರಾಗಿದ್ದಾರೆ. ನಾನು ಸಹ ಸಿದ್ಧವಾಗಿದ್ದೇನೆ. ಇದು ನಿರ್ಧಾರವನ್ನು ತೆಗೆದುಕೊಳ್ಳಲು ಸರಿಯಾದ ಸಮಯ. ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕೆ?, ಬೇಡವೆ ಎಂದು ತಕ್ಷಣ ನಿರ್ಧಾರ ಕೈಗೊಳ್ಳಿ' ಎಂದು ಜಮೀರ್ ಒತ್ತಾಯಿಸಿದ್ದಾರೆ.

'ಕಾಂಗ್ರೆಸ್ಗೆ ನಮ್ಮ ಬೆಂಬಲ'
ಸೆ.19ರಂದು ನಡೆಯಲಿರುವ ಬಿಬಿಎಂಪಿ ಮೇಯರ್ ಚುನಾವಣೆ ಬಗ್ಗೆ ಮಾತನಾಡಿದ ಜಮೀರ್ ಅವರು, 'ನಾವು 8 ಜನ ಅಮಾನತುಗೊಂಡ ಶಾಸಕರು ಕಾಂಗ್ರೆಸ್ ಜೊತೆ ಇರುತ್ತೇವೆ' ಕಾಂಗ್ರೆಸಿಗೆ ಬೆಂಬಲ ನೀಡುತ್ತೇವೆ' ಎಂದರು.

'ಮಾತಿಗೆ ತಪ್ಪಿದಾಗ ಏನಾಗಿದೆ ಗೊತ್ತು'
'ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರವಿದ್ದಾಗ ಜೆಡಿಎಸ್ ಕೊಟ್ಟ ಮಾತಿಗೆ ತಪ್ಪಿದೆ. ಈಗಲೂ ನಾವು ಬಿಬಿಎಂಪಿಯಲ್ಲಿ ಕಾಂಗ್ರೆಸ್ಗೆ ಬೆಂಬಲ ಕೊಟ್ಟಿದ್ದೇವೆ. ಅದನ್ನು ಉಳಿಸಿಕೊಳ್ಳುತ್ತೇವೆ' ಎಂದು ಜಮೀರ್ ಅಹಮದ್ ಹೇಳಿದರು.

'ನಾವೆಲ್ಲರೂ ಕಾಯುತ್ತಿದ್ದೇವೆ'
'ನಮ್ಮನ್ನು ಪಕ್ಷದಿಂದ ಹೊರಗೆ ಹಾಕಲು ದೇವೇಗೌಡರು ಆತುರದಲ್ಲಿದ್ದಾರೆ. ಉಳಿಸಿಕೊಳ್ಳಿ ಎಂದು ಒತ್ತಾಯ ಮಾಡುವುದಿಲ್ಲ. ಅವರ ತೀರ್ಮಾನಕ್ಕೆ ನಾವೆಲ್ಲರೂ ಕಾಯುತ್ತಿದ್ದೇವೆ. ಪಕ್ಷ ದೇವೇಗೌಡರದ್ದು, ಅವರು ಈ ಕುರಿತು ನಿರ್ಧಾರ ಕೈಗೊಳ್ಳಬೇಕು' ಎಂದು ಚೆಲುವರಾಯಸ್ವಾಮಿ ಹೇಳಿದರು.

'ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ'
ಅಮಾನತುಗೊಂಡಿರುವ 8 ಶಾಸಕರನ್ನು ಪಕ್ಷಕ್ಕೆ ಪುನಃ ಸೇರಿಸಿಕೊಳ್ಳುವುದಿಲ್ಲ ಎಂದು ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. 'ಮುಂದಿನ ದಿನಗಳಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು 8 ಶಾಸಕರನ್ನು ಉಚ್ಛಾಟನೆ ಮಾಡುವ ಬಗ್ಗೆ ನಿರ್ಧಾರವನ್ನು ಕೈಗೊಳ್ಳುತ್ತಾರೆ. ಅದಕ್ಕೂ ಮುನ್ನ ಅವರ ಕ್ಷೇತ್ರದ ಜನರು ಅವರನ್ನು ಉಚ್ಛಾಟಿಸುತ್ತಾರೆ. ಶಾಸಕರನ್ನು ಪುನಃ ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳುವುದಿಲ್ಲ' ಎಂದು ಹೇಳಿದ್ದಾರೆ.












Click it and Unblock the Notifications