ಮಗನ ಕಾಲು ಕಟ್: ನೊಂದ ಅಪ್ಪ ಆತ್ಮಹತ್ಯೆ

ಮಗುವಿಗೆ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಯ ಮೇಲಂಸ್ತಿಗೆ ಹೋದವರೆ 43 ವರ್ಷದ ಆ ಅಪ್ಪ ಅಲ್ಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡು ತಮ್ಮ ದುಃಖವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಇತ್ತ ಮಗುವಿನ ದುಃಖ ಮತ್ತಷ್ಟು ಹೆಚ್ಚಿದೆ. ಯಾವ 'ಸುಕೃತವೂ' ಆ ಮಗುವಿನ ತಾಯಿಗೆ ಜೀವನ ಈಗ ಮತ್ತಷ್ಟು ಭಾರವಾಗಿದೆ.
ಇದೆಲ್ಲಾ ನಡೆದಿದ್ದು ಹೀಗೆ:
ಬೀದರ್ ಮೂಲದ ರಾಜಕುಮಾರ್ ಮತ್ತು ಸುಕೃತಮ್ಮ ದಂಪತಿಯ ಮುದ್ದಿನ ಮಗ ವಿಕಾಸ್. ಆದರೆ ಅವನಿಗೋ ಮೂಳೆ ಕ್ಯಾನ್ಸರ್ ಅಂಟಿಕೊಂಡಿತ್ತು. ಹೇಗಾದರೂ ಸರಿ ಮಗುವನ್ನು ಉಳಿಸಿಕೊಳ್ಳಬೇಕೆಂಬ ಹಂಬಲದಿಂದ ಬೆಂಗಳೂರಿಗೆ ಬಂದವರೆ ಮಗುವನ್ನು ವೈಟ್ಫೀಲ್ಡ್ ಸಮೀಪದ ವೈದೇಹಿ ಆಸ್ಪತ್ರೆಗೆ ಬುಧವಾರ ಬೆಳಗ್ಗೆ 8 ಗಂಟೆಗೆ ದಾಖಲಿಸಿದ್ದಾರೆ.
ತಪಾಸಣೆಯ ನಂತರ ಅನಿವಾರ್ಯಯವಾಗಿ ಮಗುವಿನ ಕಾಲನ್ನು ಕತ್ತರಿಸಬೇಕು ಎಂದು ವೈದೇಹಿ ಆಸ್ಪತ್ರೆಯ ವೈದ್ಯರು ( ಆಸ್ಪತ್ರೆಯ ವೆಬ್ ಸೈಟ್ ವಿಳಾಸ) ದಂಪತಿಗೆ ವಿವರಿಸಿದ್ದಾರೆ. ಆದರೆ ವೈದ್ಯರ ಸಲಹೆಯಿಂದ ಕಂಗಾಲಾದ ರಾಜಕುಮಾರ್ ಗುರುವಾರ ಬೆಳಗಿನ ಹೊತ್ತಿನಲ್ಲಿ ಆಸ್ಪತ್ರೆಯ ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.
ಬೆಳಗ್ಗೆ 6 ಗಂಟೆಯಲ್ಲಿ ಪತ್ನಿ ಮತ್ತು ಮಗು ಅಕ್ಕಪಕ್ಕ ಮಲಗಿರುವುದನ್ನು ಒಮ್ಮೆ ಕಣ್ತುಂಬ ನೋಡಿದ ರಾಜಕುಮಾರ್, ಇಬ್ಬರಿಗೂ ಶಾಶ್ವತ ಗುಡ್ ಬೈ ಹೇಳುತ್ತಾ ವಾರ್ಡಿನಿಂದ ಹೊರನಡೆದಿದ್ದಾರೆ. ಹೆಚ್ಚು ಸಮಯವಿಲ್ಲ, ಸೀದಾ ಐದನೇ ಮಹಡಿಗೆ ತೆರಳಿ ಅಲ್ಲಿಂದ ಕೆಳಗೆ ಜಿಗಿದಿದ್ದಾರೆ. ತಲೆ ಕೆಳಗಾಗಿ ಬಿದ್ದಿದ್ದರಿಂದ ತಲೆಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗ ವಿಕಾಸನಿಗೆ ವಾಜಪೇಯಿ ಆರೋಗ್ಯಶ್ರೀ ಯೋಜನೆಯಡಿ ಚಿಕಿತ್ಸೆ ಕೊಡಿಸಲು ನಗರಕ್ಕೆ ಬಂದಿದ್ದೆವು. ಬಸ್ ಚಾರ್ಜು ಮತ್ತಿತರ ಖರ್ಚುಗೆಂದು 2 ಮೇಕೆ ಮಾರಿ ಬಂದಿದ್ದೆವು. ವ್ಯವಸಾಯ ಮಾಡುತ್ತಿದ್ದ ಪತಿಯೊಬ್ಬರೇ ಕುಟುಂಬಕ್ಕೆ ಆಧಾರವಾಗಿದ್ದರು. ಈಗ ಅವರೂ ಇಲ್ಲ. ಇತ್ತ ಮಗು ಸ್ಥಿತಿ ಹೀಗಿದೆ' ಎಂದು ಸುಕೃತಮ್ಮ ಕಣ್ಣೀರಿಟ್ಟಿದ್ದಾರೆ.












Click it and Unblock the Notifications