ಬೀದರ್ ನಲ್ಲಿ ರಾಹುಲ್ ಗಾಂಧಿಗೆ ಬಂದ್ ಮೂಲಕ ಸ್ವಾಗತ?!
ಬೀದರ್, ಫೆಬ್ರವರಿ 12: ನಾಲ್ಕು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಇಂದು ಬೀದರ್ ನಲ್ಲಿ ಬಂದ್ ಮೂಲಕ ಸ್ವಾಗತ ಕೋರಲಾಗುತ್ತಿದೆ!
ತೊಗರಿ ಬೆಳೆ ಖರೀದಿ ಕೇಂದ್ರ ಆರಂಭ ಮಾಡುವಂತೆ ಒತ್ತಾಯಿಸಿ ರೈತ ಪರ ಸಂಘಟನೆಗಳಿಗೆ ಇಂದು ಬೀದರ್ ಬಂದ್ ಗೆ ಕರೆನೀಡಿವೆ. ರಾಹುಲ್ ಗಾಂಧಿಯವರು ಬೀದರ್ ನಲ್ಲಿಂದು ಸಾರ್ವಜನಿಕ ಸಮಾವೇಶವೊಂದರಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಬಂದ್ ಬಿಸಿ ಕಾಂಗ್ರೆಸ್ ಸಮಾವೇಶಕ್ಕೂ ತಟ್ಟುವ ಸಾಧ್ಯತೆ ಇದೆ.
ಬಿಎಸ್ ಎಸ್ ಕೆ ಕಾರ್ಖಾನೆ ಆರಂಭಿಸುವಂತೆ ಒತ್ತಾಯಿಸಿ ಬಂದ್ ನಡೆಸುತ್ತಿರುವ ಈ ಬಂದ್ ನಿಮಿತ್ತ ಬೀದರ್ ನಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಕಾರಟಗಿಯಲ್ಲಿ ರಾಹುಲ್ ಗಾಂಧಿ ಭಾಷಣ, 10 ಪ್ರಮುಖ ಹೇಳಿಕೆಗಳು
ರಾಯಚೂರಿನಿಂದ ಬೀದರಿಗೆ ಆಗಮಿಸಲಿರುವ ರಾಹುಲ್ ಗಾಂಧಿ, ನಂತರ ಕಲಬುರಗಿ ತಲುಪಲಿದ್ದಾರೆ. ಕಾಂಗ್ರೆಸ್ ಜನಾಶೀರ್ವಾದ ಯಾತ್ರೆಗೆ ಬಂದ್ ಸ್ವಾಗತ ದೊರಕುತ್ತಿರುವುದು ಕಾಂಗ್ರೆಸ್ ನಾಯಕರಲ್ಲಿ ಇರುಸುಮುರಿಸುಂಟುಮಾಡಿದೆ.
ಜಿಲ್ಲೆಯಲ್ಲಿ ತೊಗರಿ ಮಾರಾಟಕ್ಕೆ ನೋಂದಣಿ ಮಾಡಿದ ಎಲ್ಲ ರೈತರ ತೊಗರಿ ಬೆಳೆಯನ್ನು ಸರ್ಕಾರ ಬೆಂಬಲ ಬೆಲೆಯಡಿ ಖರೀದಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ.ಬೀದರ್ ಕ್ಷೇತ್ರದಲ್ಲಿ ಕಾಂಗ್ರೆಸ್ ನ ರಹೀನ್ ಖಾನ್ ಅವರೇ ಶಾಸಕರಾಗಿದ್ದು, ಇಲ್ಲಿನ ರೈತರ ಸಮಸ್ಯೆಗಳನ್ನು ಸರ್ಕಾರಕ್ಕೆ ಸರರಿಯಾಗಿ ಅರ್ಥ ಮಾಡಿಸುವಲ್ಲಿ ವಿಫಲರಾಗಿದ್ದಾರೆ ಎಂಬುದು ಜನರ ಅಂಬೋಣ.
ಅದಕ್ಕೆಂದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿಯವರಂಥ ಘಟಾನುಘಟಿಗಳು ಆಗಮಿಸುತ್ತಿರುವುದರಿಂದ ಇಂದೇ ಬಂದ್ ಆಚರಿಸುವುದು ಸರಿ ಎಂಬ ತೀರ್ಮಾನಕ್ಕೆ ರೈತರು ಬಂದಂತಿದೆ.