ನಡೆದಾಡುವ ದೇವರ ಶ್ರೀವಾಣಿ: ದೇಹಕ್ಕೆ ಹಸಿವಾದರೆ ಪ್ರಸಾದ, ಮನಸ್ಸಿನ ಹಸಿವಿಗೆ ಪ್ರಾರ್ಥನೆ
ತ್ರಿವಿಧ ದಾಸೋಹಿ, ನಡೆದಾಡುವ ದೇವರು, ಡಾ. ಶಿವಕುಮಾರ ಸ್ವಾಮೀಜಿ ಸೋಮವಾರ, ಹುಣ್ಣಿಮೆಯ ದಿನ 11.44ಕ್ಕೆ ಶಿವೈಕ್ಯರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ 111 ವರ್ಷ ವಯಸ್ಸಿನ ಶ್ರೀಗಳಿಗೆ ಕಳೆದ ತಿಂಗಳಷ್ಟೇ ಚೆನ್ನೈಯಲ್ಲಿ ಹೃದಯ ಶಸ್ತ್ರಚಿಕಿತ್ಸೆ ನೀಡಲಾಗಿತ್ತು.
ಚೆನ್ನೈನಿಂದ ಡಿಸ್ಚಾರ್ಜ್ ಆಗಿ ಮಠಕ್ಕೆ ವಾಪಸ್ಸಾಗಿದ್ದ ಶ್ರೀಗಳು ಕೊಂಚ ಚೇತರಿಸಿಕೊಂಡಿದ್ದರು. ಆದರೆ ಭಾನುವಾರ ರಾತ್ರಿ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದ ಶ್ರೀಗಳ ಅಂತಿಮ ದರ್ಶನಕ್ಕೆ ಪ್ರವಾಹೋಪಾದಿಯಲ್ಲಿ ಭಕ್ತರು ಮಠದತ್ತ ಆಗಮಿಸುತ್ತಿದ್ದಾರೆ.
ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳು ತಮ್ಮ ಉತ್ತರಾಧಿಕಾರಿಯಾಗಿ ಸಿದ್ಧಲಿಂಗ ಶ್ರೀಗಳನ್ನ ನೇಮಕ ಮಾಡಿದ್ದರು. ಇದುವರೆಗೆ 128 ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿರುವ ಸಿದ್ದಗಂಗಾ ಶ್ರೀಗಳು, ಎಪ್ಪತ್ತರ ದಶಕದ ಸುಮಾರಿನಲ್ಲಿ ಎರಡು ಸಾವಿರ ವಿದ್ಯಾರ್ಥಿಗಳ ಮೂಲಕ ಅಕ್ಷರ ದಾಸೋಹ ಆರಂಭಿಸಿದ್ದರು.
ಭಕ್ತರು ಬೆಳೆದರೆ, ಮಠ ಬೆಳೆಯುತ್ತದೆ, ಮಠ ಬೆಳೆದರೆ ನಮ್ಮಂತಹ ಸ್ವಾಮೀಜಿಗಳು ಬೆಳೆಯುತ್ತಾರೆ ಎನ್ನುತ್ತಿದ್ದ ಸಿದ್ದಗಂಗಾ ಶ್ರೀಗಳು, ತಮ್ಮ ಪ್ರವಚನ ಮತ್ತು ಭಾಷಣದಲ್ಲಿ ಈ ರೀತಿಯ ಹಲವಾರು ವಾಣಿಗಳನ್ನು ಹೇಳುತ್ತಿದ್ದರು. ನಡೆದಾಡುವ ದೇವರ ಶ್ರೀವಾಣಿಯ ಕೆಲವು, ಕೆಳಗೆ ಮುಂದುವರಿಸಲಾಗಿದೆ.

ಪ್ರಕೃತಿಯಲ್ಲಿ ಅಪಾರ ಶಕ್ತಿ ಇದೆ
> ಮಾತಿಗೆ ಮನೆಕಟ್ಟಿ ಬೆಳಗಿಸುವ, ಮನೆ ಸುಟ್ಟು ಬೂದಿ ಮಾಡುವ ಎರಡು ಶಕ್ತಿಗಳಿವೆ.
> ಕ್ರಮಬದ್ಧ ಜೀವನ ಪ್ರಗತಿಯ ಮೂಲ, ಅಕ್ರಮ ಜೀವನ ವಿನಾಶಕ್ಕೆ ಹಾದಿ.
> ಮನುಷ್ಯ ಮನುಷ್ಯನಾಗಿ ಬಾಳುವ ಕಲೆಯನ್ನು ಇಂದು ಮರೆಯುತ್ತಿದ್ದಾನೆ.

ಬಾಳಲು ಶಕ್ತಿಯನ್ನಾಗಿ ಉಪಯೋಗಿಸಬೇಕು
> ಮಾತು ಜ್ಯೋತಿರ್ಲಿಂಗ, ಮಾನವ ಮಾತನ್ನು ಮಾನವೀಯತೆಯಿಂದ ಬಾಳಲು ಶಕ್ತಿಯನ್ನಾಗಿ ಉಪಯೋಗಿಸಬೇಕು > ಪ್ರಕೃತಿಯಲ್ಲಿ ಅಪಾರ ಶಕ್ತಿ ಇದೆ. ಅದು ನೀಡುವ ಸೊಪ್ಪಿನಲ್ಲಿ, ಉಪ್ಪಿನಲ್ಲಿ, ತುಪ್ಪದಲ್ಲಿ ಆ ಶಕ್ತಿ ನಿಕ್ಷೇಪವಾಗಿದೆ.
> ನುಡಿದಂತೆ ನಡೆ, ಇದೇ ಜನ್ಮ ಕಡೆ. ಹೇಳುವುದೊಂದು ಮಾಡುವುದೊಂದು ಆಗಬಾರದು.

ಎಲ್ಲಾ ಪಾತಕಗಳಿಗೂ ಕೋಪವೇ ಮೂಲ
> ಎಲ್ಲಾ ಪಾತಕಗಳಿಗೂ ಕೋಪವೇ ಮೂಲ ಬಾವಿಗೆ ಬಿಟ್ಟ ಹಗ್ಗ ಹರಿದು ಕೊಡಪಾನ ಮುಳುಗುವಂತೆ ಕೋಪಿಷ್ಟನು ನರಕಕ್ಕೆ ಬೀಳುವನು.
> ದೇವರೆಂಬುದು ಅದೇನು ಕಗ್ಗತ್ತಲ ಗವಿಯೆ?. ನಾವರಿಯಲಾರದ ಎಲ್ಲದರ ಒಟ್ಟು ಹೆಸರೇ?
> ಸುಖದ ಗರ್ಭದಲ್ಲಿ ದುಃಖದ ಬೀಜ ಹುದುಗಿರುತ್ತದೆ, ದುಃಖ ಸುಖದ ಮರಿಕೆಯಾಗುತ್ತದೆ.

ಪಠ್ಯ ಚಿಂತನೆಯೇ ವಿದ್ಯಾರ್ಥಿ ಲಕ್ಷಣ
> ಕಾಡು ಹರಟೆ ಸಮಯದ ವ್ಯರ್ಥ, ಪಠ್ಯ ಚಿಂತನೆಯೇ ವಿದ್ಯಾರ್ಥಿ ಲಕ್ಷಣ.
> ಪರಮಾತ್ಮ ಕೊಟ್ಟ ಶ್ರೇಷ್ಠವಾದ ಆಸ್ತಿಯಲ್ಲಿ ಹೆಚ್ಚಿನ ಭರವಸೆಯನ್ನು ತಾಳಬೇಕು.
> ಜ್ಞಾನ ಎನ್ನುವುದು ಬಹಳ ಪವಿತ್ರ. ಶ್ರೇಷ್ಠ. ಅದು ಅಮೂಲ್ಯ ರತ್ನ, ಯಾರು ನಿಜವಾದ ಜ್ಞಾನ ಸಂಪಾದನೆ ಮಾಡುತ್ತಾರೋ ನಿಜವಾದ ಜ್ಞಾನಿಯಾಗುತ್ತಾನೋ ಅವನೇ ನಿಜವಾದ ಶ್ರೀಮಂತ.

ಬದುಕಿಗೆ ಸಾರ್ಥಕತೆ
> ಸನ್ನಡತೆ, ಸಚ್ಚಾರಿತ್ರ್ಯ ನಾಗರೀಕತೆಗಳು ಹುಟ್ಟಿಗೊಂದು ಅರ್ಥ, ಬದುಕಿಗೆ ಸಾರ್ಥಕತೆ
> ಗುಣಶಾಲಿ, ಚಾರಿತ್ಯವಂತನಿಗೆ ಸ್ಥಾನ,ಭಾಗ್ಯ ಸಿಗದೇ ಇರದು.
> ಶಿಕ್ಷಣ ಒಂದು ವ್ಯಾಪಾರವಲ್ಲ, ಅದು ದಾಸೋಹದ ರೀತಿಯಲ್ಲಿ ಪಸರಿಸಬೇಕು. ಉತ್ತಮ ಸಮಾಜಕ್ಕಾಗಿ ಜ್ಞಾನದ ಬೀಜ ಬಿತ್ತಬೇಕು.












Click it and Unblock the Notifications