ವಿರಾಜಪೇಟೆಯಲ್ಲಿ ನಕಲಿ ಐಎಎಸ್ ಅಧಿಕಾರಿ ಬಂಧನ
ಕೊಡಗು, ಮಾರ್ಚ್ 31 : ಮೈಸೂರು ನಗರಪಾಲಿಕೆ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ, ತಾನು ಸರ್ಕಾರಿ ಅಧಿಕಾರಿ ಎಂದು ಫೋಸ್ ನೀಡಿ ಸರ್ಕಾರಿ ವಾಹನದಲ್ಲೇ ಕೊಡಗಿಗೆ ತೆರಳಿ ವೀರಾಜಪೇಟೆಯ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿ ಪೊಲೀಸ್ ಇಲಾಖೆಯ ಸೌಲಭ್ಯ ಪಡೆಯಲು ಮುಂದಾದ ಒಡಿಶಾ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಬಂಧಿತ ನಕಲಿ ಅಧಿಕಾರಿ ಒಡಿಶಾದ ಪುರಿ ಜಿಲ್ಲೆಯ ಚಂದ್ರಪುರ ಗ್ರಾಮದ ನಿವಾಸಿ ಸೌಮ್ಯ ರಂಜನ್ ಮಿಶ್ರಾ. ಈತನ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರಿಗೆ ಒಂದಷ್ಟು ಮಾಹಿತಿ ಲಭ್ಯವಾಗಿದ್ದು, ಎಂಸಿಎ ಪದವೀಧರನಾಗಿರುವ ಮಿಶ್ರಾ, ಹಿಂದೆ ಎಂಪ್ಲಾಯಿಮೆಂಟ್ ಪ್ರಾವಿಡೆಂಟ್ ಫಂಡ್ ಕಚೇರಿಯಲ್ಲಿ ಸಾಫ್ಟ್ ವೇರ್ ಡೆವಲಪರ್ ಆಗಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ.
ರೋಹಿಣಿ ಸಿಂಧೂರಿ ವರ್ಗಾವಣೆ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ
ಆ ನಂತರ ವಂಚನೆಗೆ ಇಳಿದ ಈತ ಬೇರೆ ಕಡೆಗಳಿಗೆ ತೆರಳಿ ತಾನೊಬ್ಬ ಅಧಿಕಾರಿ ಎಂದು ಫೋಸ್ ನೀಡುತ್ತಾ ಅನೇಕ ಸೌಲಭ್ಯಗಳನ್ನು ಪಡೆದುಕೊಳ್ಳುವ ಕುಕೃತ್ಯಕ್ಕೆ ಮುಂದಾಗಿದ್ದನು. ಈ ನಡುವೆ ಈತ ಮಾ.28ರಂದು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಕರೆ ಮಾಡಿ, ತಾನು ಮುಂಬೈ ಕಂದಾಯ ಇಲಾಖೆಯ ಪ್ರಾದೇಶಿಕ ಆಯುಕ್ತನಾಗಿದ್ದು, ಕೊಡಗಿಗೆ ತೆರಳಲು ವಾಹನ ವ್ಯವಸ್ಥೆ ಮಾಡಿಕೊಡುವಂತೆ ಕೇಳಿದ್ದನು.
ಆತನ ಪೂರ್ವಾಪರ ತಿಳಿಯದೆ ಅಧಿಕಾರಿಗಳು ಪಾಲಿಕೆಯಿಂದ ವಾಹನ ಒದಗಿಸಿಕೊಟ್ಟಿದ್ದು, ಅದೇ ವಾಹನದಲ್ಲಿ ಮೈಸೂರಿನಿಂದ ಕೊಡಗಿನ ವೀರಾಜಪೇಟೆ ಬಳಿಯ ಅಂಬಟ್ಟಿ ಗ್ರಾಮದ ಗ್ರೀನ್ಸ್ ರೆಸಾರ್ಟ್ಗೆ ತೆರಳಿ ಅಲ್ಲಿ ಆರಾಮಾಗಿ ಕಾಲ ಕಳೆಯುತ್ತಿದ್ದನು.
ಅತಂತ್ರರಾಗಿದ್ದಾರೆ ಐಎಎಸ್ ಅಧಿಕಾರಿ ರಂದೀಪ್!
ಕೊಡಗಿನ ಕೆಲವು ಅಧಿಕಾರಿಗಳ ನಂಬರನ್ನು ನೆಟ್ ಮೂಲಕ ಪಡೆದು ಅವರಿಗೆ ಕರೆ ಮಾಡಿ ಮಾತನಾಡಿದ್ದಲ್ಲದೆ, ವೀರಾಪೇಟೆ ಡಿವೈಎಸ್ಪಿ ನಾಗಪ್ಪ, ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ ಮತ್ತು ಗ್ರಾಮಾಂತರ ಎಸ್ಐ ಬಸವರಾಜ್ ಅವರಿಗೆ ಕರೆ ಮಾಡಿದ್ದ.
ಮುಂಬೈ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯಾಗಿದ್ದು, ಇದೀಗ ರೆಸಾರ್ಟ್ನಲ್ಲಿರುವುದಾಗಿಯೂ ಜಿಲ್ಲೆಯನ್ನು ಸುತ್ತಾಡಲು ಗನ್ಮ್ಯಾನ್ ನೀಡಬೇಕೆಂದು ಕೇಳಿದ್ದನಲ್ಲದೆ, ಜಿಲ್ಲಾಧಿಕಾರಿ ಶ್ರೀವಿದ್ಯಾ ಹಾಗೂ ಎಸ್ಪಿ ರಾಜೇಂದ್ರ ಪ್ರಸಾದ್ ಅವರಿಗೂ ಕರೆ ಮಾಡಿ ಬೇರೆ ಬೇರೆ ಬೇಡಿಕೆಗಳನ್ನು ಮುಂದಿಟ್ಟಿದ್ದನು.
ಇದರಿಂದ ಸಂಶಯಬಂದಿದ್ದು, ಕೂಡಲೇ ಎಸ್ಪಿ, ಡಿಸಿ ಆತನ ವಿಚಾರಣೆ ಮಾಡುವಂತೆ ಆದೇಶಿಸಿದ್ದಾರೆ ಅದರಂತೆ ವೀರಾಪೇಟೆ ಡಿವೈಎಸ್ಪಿ ನಾಗಪ್ಪ, ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ ಮತ್ತು ಗ್ರಾಮಾಂತರ ಎಸ್ಐ ಬಸವರಾಜ್ ಮತ್ತು ಸಿಬ್ಬಂದಿಗಳು ರೆಸಾರ್ಟ್ಗೆ ದಾಳಿ ಮಾಡಿದ್ದಾರೆ.
ಅಧಿಕಾರಿ ಎಂದು ಹೇಳಿಕೊಂಡಿದ್ದ ಸೌಮ್ಯ ರಂಜನ್ ಮಿಶ್ರಾನನ್ನು ವಿಚಾರಣೆ ಮಾಡಿದ್ದಾರೆ. ಈ ವೇಳೆ ಆತನ ಮುಖವಾಡ ಕಳಚಿ ಬಿದ್ದಿದ್ದು, ಈತ ಸರ್ಕಾರಿ ಅಧಿಕಾರಿ ಎಂದು ಸುಳ್ಳು ಹೇಳಿ ಸರ್ಕಾರಿ ವಾಹನವನ್ನು ಕಾನೂನು ಬಾಹಿರವಾಗಿ ಉಪಯೋಗಿಸಿಕೊಂಡು ವಂಚನೆ ಮಾಡಿದ್ದಲ್ಲದೆ, ಇನ್ನಿತರ ಈತನ ವಂಚನೆ ಬೆಳಕಿಗೆ ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಸೌಮ್ಯ ರಂಜನ್ ಮಿಶ್ರಾನನ್ನು ಬಂಧಿಸಿರುವ ವೀರಾಜಪೇಟೆ ಗ್ರಾಮಾಂತರ ಪೊಲೀಸರು, ಆತನ ವಿರುದ್ಧ ಮೊ.ಸಂ.76/2018 ಕಲಂ.170, 419,420 ಐ.ಪಿ.ಸಿ. ರೀತ್ಯ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.