ಎಚ್ಚರ.. ಎಚ್ಚರ.. ಗೃಹಲಕ್ಷ್ಮಿ ಯೋಜನೆ ಹೆಸರಲ್ಲಿ ಮೋಸ ಹೋಗಬೇಡಿ!
ಬೆಂಗಳೂರು: ಗೃಹಲಕ್ಷ್ಮಿ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಭರ್ಜರಿ ತಯಾರಿ ನಡೆಸಿದೆ. ಹಾಗೇ ಅರ್ಜಿ ಸಲ್ಲಿಕೆಗೆ ಎದುರಾಗುವ ಸರ್ವರ್ ಸಮಸ್ಯೆ ತಪ್ಪಿಸಲು ಪ್ರತ್ಯೇಕ ಆ್ಯಪ್ ಕೂಡ ಸಿದ್ಧವಾಗುತ್ತಿದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ನಕಲಿ ಆ್ಯಪ್ ಮೂಲಕ ನಿಮ್ಮ ಬ್ಯಾಂಕ್ ಖಾತೆಯಿಂದ ದುಡ್ಡು ಎಗರಿಸಲು ಸ್ಕೆಚ್ ಹಾಕಿದ್ದಾರೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಚುನಾವಣೆಗೆ ಮುನ್ನ ಕಾಂಗ್ರೆಸ್ ಘೋಷಿಸಿದ್ದಂತೆ ಪ್ರತಿ ಮನೆ ಯಜಮಾನಿಗೆ 2000 ಸಾವಿರ ರೂಪಾಯಿ ತಿಂಗಳಿಗೆ ಸಿಗಲಿದೆ. ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 2000 ಸಾವಿರ ರೂಪಾಯಿ ಬ್ಯಾಂಕ್ ಖಾತೆಗೆ ಬರಲಿದೆ. ಆದರೆ ಕೆಲವು ತಾಂತ್ರಿಕ ಸಮಸ್ಯೆಯಿಂದ ಅರ್ಜಿ ಸ್ವೀಕಾರ ತಡವಾಗುತ್ತಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಇದೇ ವೇಳೆ ದಿಢೀರ್ ಜನರಿಗೆ ಮೋಸ ಮಾಡುವ ಜಾಲ ಹುಟ್ಟಿಕೊಂಡಿದ್ದು, ನಕಲಿ ಆ್ಯಪ್ ಮೂಲಕ ರಾಜ್ಯದ ಜನರನ್ನು ಯಾಮಾರಿಸುತ್ತಿದ್ದಾರೆ. ಹಾಗಾದ್ರೆ ನಕಲಿ ಆ್ಯಪ್ ಬಗ್ಗೆ ಏನೆಲ್ಲಾ ಎಚ್ಚರಿಕೆಗಳನ್ನ ವಹಿಸಬೇಕು? ಸಂಪೂರ್ಣ ಮಾಹಿತಿ ತಿಳಿಯಿರಿ.

ಸರ್ಕಾರದ 'ಆ್ಯಪ್' ಬರುವವರೆಗೂ ಕಾಯಿರಿ!
ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಗೃಹಲಕ್ಷ್ಮಿ ಯೋಜನೆ 'ಆ್ಯಪ್' ಬಗ್ಗೆ ಚರ್ಚೆಯಾಗಿ, ಆದಷ್ಟು ಬೇಗ 'ಆ್ಯಪ್' ಬಿಡುಗಡೆಗೆ ತಯಾರಿ ನಡೆದಿದೆ. ಆದರೆ ಇದೇ ಸಂದರ್ಭ ಬಳಸಿ ಕೆಲವರು ಯಾಮಾರಿಸುತ್ತಿರುವ ಆರೋಪ ಕೇಳಿಬಂದಿದೆ. ಏಕೆಂದರೆ ಸರ್ಕಾರ ಇಲ್ಲಿಯತನಕ ಗೃಹಲಕ್ಷ್ಮಿ ಯೋಜನೆಗಾಗಿ ಯಾವುದೇ ಆ್ಯಪ್ ಬಿಡುಗಡೆ ಮಾಡಿಲ್ಲ. ಹೀಗಾಗಿ ಈಗ ಇರುವ ಆ್ಯಪ್ಗಳು ನಕಲಿ. ಹೀಗಾಗಿ ನಕಲಿ ಆ್ಯಪ್ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಅಕಸ್ಮಾತ್ ಇಂತಹ ಆ್ಯಪ್ ನಂಬಿ ಡೌನ್ಲೋಡ್ ಮಾಡಿದರೆ, ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ ಆಗೋದು ಪಕ್ಕಾ.
ಯಾರಿಗೆಲ್ಲಾ ಗೃಹಲಕ್ಷ್ಮಿ ಅನ್ವಯ ಆಗುತ್ತೆ?
ಗೃಹಲಕ್ಷ್ಮಿ ಯೋಜನೆಗೆ ಬೆಂಗಳೂರು ಒನ್ ಅಥವಾ ಆ್ಯಪ್ ಮೂಲಕ ಅರ್ಜಿ ಸಲ್ಲಿಸಬಹುದು. ಆದರೆ ಸರ್ಕಾರದಿಂದ 'ಆ್ಯಪ್' ಇನ್ನೂ ಬಿಡುಗಡೆಗೆ ಮಾಡಿಲ್ಲ. ಹಾಗೇ ಅರ್ಜಿ ಸಲ್ಲಿಸಲು ಬ್ಯಾಂಕ್ ಖಾತೆಯೊಂದಿಗೆ ಮೊಬೈಲ್ ನಂ. ಲಿಂಕ್ ಆಗಿರಬೇಕು. BPL, APL, ಅಂತ್ಯೋದಯ ಕಾರ್ಡ್ನಲ್ಲಿ ಮನೆ ಯಜಮಾನಿಯ ಹೆಸರು ಇರಬೇಕು. ಒಂದು ಮನೆಯಲ್ಲಿ ಒಬ್ಬರಿಗೆ ಮಾತ್ರ ಯೋಜನೆ ಅನ್ವಯ. ಯಜಮಾನಿಯ ಮೊಬೈಲ್ ನಂಬರ್ ಕಡ್ಡಾಯವಾಗಿ ನೀಡಬೇಕಾಗುತ್ತೆ. ಹಾಗೇ ಯಜಮಾನಿ ಅಥವಾ ಪತಿ ಆದಾಯ ತೆರಿಗೆ ಪಾವತಿ ಮಾಡುವವರಾಗಿರಬಾರದು. ಹೀಗೆ ಇದ್ದಲ್ಲಿ ಅವರಿಗೆ ಯೋಜನೆ ಅನ್ವಯ ಆಗುವುದಿಲ್ಲ. ಹಾಗೇ ಮನೆ ಒಡತಿಯ ಯಜಮಾನ ಜಿಎಸ್ಟಿ ರಿರ್ಟನ್ಸ್ ಮಾಡಿರಬಾರದು ಎಂಬ ನಿಯಮಗಳನ್ನ ಸರ್ಕಾರ ತಿಳಿಸಿದೆ.

ಫೋನ್ನಲ್ಲಿ ಬ್ಯಾಂಕ್ ಮಾಹಿತಿ ಕೇಳಿದರೆ ಕೊಡಬೇಡಿ!
ಒಟ್ನಲ್ಲಿ ಮೋಸ ಹೋಗುವವರು ಇರೋ ತನಕ ಮೋಸ ಮಾಡುವವರು ಕೂಡ ಇರ್ತಾರೆ. ಹೀಗಾಗಿ ನಕಲಿ ಅಥವಾ ಫೇಕ್ ಅಪ್ಲಿಕೇಷನ್ಗಳ ಬಗ್ಗೆ ಎಚ್ಚರಿಕೆಯಿಂದ ಇರಿ. ಅನಾವಶ್ಯಕ ಕರೆ ಸ್ವೀಕರಿಸದಿರಿ. ಅಲ್ಲದೆ ನಿಮಗೆ ಬರುವ ವಾಟ್ಸಾಪ್ ಅಥವಾ ಟೆಲಿಗ್ರಾಂ ಮೆಸೇಜ್ಗಳನ್ನ ಸೂಕ್ಷ್ಮವಾಗಿ ಗಮನಿಸಿ. ಅದರಲ್ಲಿ ಗೃಹಲಕ್ಷ್ಮಿ ಯೋಜನೆ ಎಂದು ನಕಲಿ ಲಿಂಕ್ ಹಾಕಿರುವ ಸಾಧ್ಯತೆ ಹೆಚ್ಚು. ಹೀಗಾಗಿ ಇಂತಹ ಯಾವುದೇ ಸಂದೇಶ ನಂಬಬೇಡಿ. ಸರ್ಕಾರ ಸೂಚಿಸಿದ ಹಾಗೇ ಅಧಿಕೃತ ಸಂಸ್ಥೆಗಳಿಗೆ ತೆರಳಿ ಅರ್ಜಿಗಳನ್ನ ನೊಂದಾಯಿಸಿ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ ಎಂದು ಸರ್ಕಾರ ಹೇಳಿದೆ. ಅಕಸ್ಮಾತ್ ಈ ರೀತಿ ಹಣ ಕೇಳುವ ಘಟನೆ ನಡೆದರೆ ಸರ್ಕಾರ ಅಥವಾ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತನ್ನಿ.
ಯಾವೆಲ್ಲಾ ದಾಖಲೆಗಳು ಬೇಕು?
1) ರೇಷನ್ ಕಾರ್ಡ್
2) ಬ್ಯಾಂಕ್ ಪಾಸ್ಬುಕ್
3) ಆಧಾರ್ ಕಾರ್ಡ್
4) ವೋಟರ್ ಐಡಿ
ಅರ್ಜಿ ಸಲ್ಲಿಕೆ ಮಾಡುವುದು ಹೇಗೆ?
ಅಂದಹಾಗೆ ನಿಮ್ಮ ಬಳಿ ರೇಷನ್ ಕಾರ್ಡ್, ಬ್ಯಾಂಕ್ ಪಾಸ್ಬುಕ್, ಆಧಾರ್ ಕಾರ್ಡ್ ಜೊತೆ ವೋಟರ್ ಐಡಿ ಇರಬೇಕು. ಗೃಹಲಕ್ಷ್ಮೀ ಯೋಜನೆಗೆ ಸರ್ಕಾರದ ಸೇವಾಸಿಂಧು ಪೋರ್ಟಲ್ನ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬಹುದು. ಇಲ್ಲ ಎಂದರೆ ಗ್ರಾಮ ಒನ್ & ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲೂ ಭೌತಿಕವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ ನಕಲಿ 'ಆ್ಯಪ್'ಗಳ ಬಗ್ಗೆ ಎಚ್ಚರಿಕೆ ವಹಿಸಿ.












Click it and Unblock the Notifications