ನ್ಯಾಯಬೆಲೆ ಅಂಗಡಿ ಹಂಚಿಕೆಯಲ್ಲಿ ನಿಯಮ ಪಾಲಿಸಲು ಹೈಕೋರ್ಟ್ ತಾಕೀತು
ಬೆಂಗಳೂರು, ಡಿಸೆಂಬರ್ 05; ಸಾರ್ವಜನಿಕ ಪಡಿತರ ವಿತರಣೆಗೆ ನ್ಯಾಯಬೆಲೆ ಅಂಗಡಿಗಳ ಹಂಚಿಕೆಯಲ್ಲಿ ನಡೆಯುತ್ತಿರುವ ಭಾರೀ ಹುಳುಕನ್ನು ಹೈಕೋರ್ಟ್ ಹೊರಹಾಕಿದೆ. ಅಲ್ಲದೆ, ಅದರಲ್ಲಿ ನಡೆಯುವ ತಾರತಮ್ಯ ಮತ್ತು ನಿಯಮ ಉಲ್ಲಂಘನೆಯನ್ನು ನ್ಯಾಯಾಲಯ ಗಂಭೀರವಾಗಿ ತೆಗೆದುಕೊಂಡಿರುವುದೇ ಅಲ್ಲದೆ, ಅಂಗಡಿಗಳ ಹಂಚಿಕೆಯಲ್ಲಿಕಡ್ಡಾಯವಾಗಿ ನಿಯಮಗಳನ್ನು ಪಾಲನೆ ಮಾಡಬೇಕೆಂದು ಸರ್ಕಾರಕ್ಕೆ ಕಟ್ಟಾಜ್ಞೆ ಹೊರಡಿಸಿದೆ.
ನ್ಯಾಯಬೆಲೆ ಅಂಗಡಿಗಳ ಹಂಚಿಕೆಯಲ್ಲಿ ಭಾರೀ ತಾರತಮ್ಯ ಮತ್ತು ಭಾರೀ ಪ್ರಮಾಣದಲ್ಲಿಪಡಿತರ ಚೀಟಿಗಳ ವಿತರಣೆಯಿಂದ ಸಮಸ್ಯೆಗಳಾಗುತ್ತಿವೆ. ಅಧಿಕಾರಿಗಳು ನಿಯಮ 11ರ ಪ್ರಕಾರ, ನ್ಯಾಯಬೆಲೆ ಅಂಗಡಿಗಳನ್ನು ಹಂಚಿಕೆ ಮಾಡುವಾಗ ನಗರ ಪ್ರದೇಶದಲ್ಲಾದರೆ 500 ಕಾರ್ಡ್ಗಳಿಗೆ ಒಂದರಂತೆ ಮತ್ತು ಗ್ರಾಮೀಣ ಪ್ರದೇಶದಲ್ಲಾದರೆ 800 ಕಾರ್ಡ್ಗಳಿಗೆ ಒಂದರಂತೆ ಅಂಗಡಿಗಳನ್ನು ಹಂಚಿಕೆ ಮಾಡಬೇಕು, ಅದನ್ನು ಪಾಲಿಸದಿರುವುದೇ ವ್ಯಾಜ್ಯಗಳಿಗೆ ಕಾರಣವಾಗುತ್ತಿದೆ ಎಂದು ನ್ಯಾಯಪೀಠ ಹೇಳಿದೆ.
ದೊಡ್ಡ ಬಿದರಕಲ್ಲಿನ ವಿಶೇಷ ಚೇತನ ಬಿ. ಮಂಜುನಾಥ್ ತಮಗೆ ಹಂಚಿಕೆಯಾಗಿದ್ದ ನ್ಯಾಯಬೆಲೆ ಅಂಗಡಿಗಳನ್ನು ರದ್ದು ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

ಆಹಾರ ಆಯುಕ್ತರಿಗೆ ನಿರ್ದೇಶನ: "ಇತ್ತೀಚಿನ ದಿನಗಳಲ್ಲಿ ನ್ಯಾಯಬೆಲೆ ಅಂಗಡಿಗಳ ಹಂಚಿಕೆಯ ಕುರಿತು ವ್ಯಾಜ್ಯಗಳ ಮಹಾಪೂರವೇ ಕೋರ್ಟ್ಗೆ ಹರಿದು ಬರುತ್ತಿದೆ. ಹಾಗಾಗಿ ಇಂತಹ ವ್ಯಾಜ್ಯಗಳನ್ನು ಬಗೆಹರಿಸಲು ಮತ್ತು ಕರ್ನಾಟಕ ಅಗತ್ಯ ವಸ್ತುಗಳ ಸಾಮಾಜಿಕ ಪಡಿತರ ವಿತರಣಾ ವ್ಯವಸ್ಥೆ ನಿಯಮ 2006 ಪಾಲನೆ ಕಡ್ಡಾಯವಾಗಿ ಮಾಡಲು ಕ್ರಮ ಕೈಗೊಳ್ಳಬೇಕು" ಎಂದು ನ್ಯಾಯಪೀಠ ಆಹಾರ ಆಯುಕ್ತರಿಗೆ ನಿರ್ದೇಶನ ನೀಡಿದೆ.
ಆಯುಕ್ತರು ಎಲ್ಲ ಉಪ ನಿರ್ದೇಶಕರಿಗೆ ಪತ್ರ ಬರೆದು ದಾಖಲೆಗಳ ದೃಢೀಕರಣದ ನಂತರವೇ ನ್ಯಾಯಬೆಲೆ ಅಂಗಡಿಗಳನ್ನು ಹಂಚಿಕೆ ಮಾಡುವಂತೆ ಸೂಚನೆ ನೀಡಿದ್ದಾರೆ. ಆದರೆ ಅದು ಕೇವಲ ಕಾಗದದಲ್ಲಿ ಉಳಿದಿದೆ. ಪ್ರತಿಯೊಂದು ಹಂಚಿಕೆಯ ಬಗ್ಗೆಯೂ ದೂರುಗಳು ಬರುತ್ತಿವೆ ಮತ್ತು ಆ ರೀತಿಯ ಅನ್ಯಾಯಕ್ಕೆ ಒಳಗಾದವರು ನ್ಯಾಯಾಲಯಗಳ ಮೆಟ್ಟಿಲೇರುತ್ತಿರುವುದು ಸರ್ವೇ ಸಾಮಾನ್ಯವಾಗಿದೆ ಎಂದು ಕೋರ್ಟ್ ಅಸಮಾಧಾನ ಹೊರಹಾಕಿದೆ.
ಅರ್ಜಿದಾರರಿಗೆ ನೀಡಿದ್ದ ನ್ಯಾಯಬೆಲೆ ಅಂಗಡಿಯನ್ನು ರದ್ದುಗೊಳಿಸುವಂತೆ ರಾಜಾಜಿನಗರ ಸ್ವಾಸ್ಥ್ಯ ಮಹಿಳಾ ಒಕ್ಕೂಟ ಮೇಲ್ಮನವಿ ಪ್ರಾಧಿಕಾರದ ಮುಂದೆ ಅರ್ಜಿ ಹೂಡಿದ್ದರು. ಅದನ್ನು ಆಲಿಸಿದ ಪ್ರಾಧಿಕಾರ, ಅರ್ಜಿದಾರರಿಗೆ ಮಾಡಿದ್ದ ನ್ಯಾಯಬೆಲೆ ಅಂಗಡಿಯ ಹಂಚಿಕೆಯನ್ನು ರದ್ದುಗೊಳಿಸಿತ್ತು. ಮೇಲ್ಮನವಿ ಪ್ರಾಧಿಕಾರದ ಆದೇಶದ ವಿರುದ್ಧ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.
ವಿಮಾ ಕಂಪನಿಯೇ ಹೊಣೆ: ಅಪಘಾತಕ್ಕೆ ಕಾರಣವಾದ ವಾಹನದ ಚಾಲಕ ಹೊಂದಿದ್ದ ಚಾಲನಾ ಪರವಾನಗಿ ನಕಲಿ ಎಂಬುದನ್ನು ಸಾಬೀತುಪಡಿಸುವ ಜವಾಬ್ದಾರಿ ವಿಮಾ ಕಂಪನಿಯದ್ದಾಗಿರುತ್ತದೆ ಎಂದು ಹೈಕೋರ್ಟ್ ಹೇಳಿದೆ.
ಲೈಸೆನ್ಸ್ ನಕಲಿ ಎನ್ನುವುದು ಸಾಬೀತಾಗುವವರೆಗೆ ಪರಿಹಾರ ನೀಡುವ ಹೊಣೆಗಾರಿಕೆ ವಾಹನದ ಮಾಲೀಕನ ಮೇಲೆ ಹೊರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲಎಂದೂ ಕೋರ್ಟ್ ಆದೇಶಿಸಿದೆ.
ಅಪಘಾತ ಪ್ರಕರಣವೊಂದರಲ್ಲಿಗಾಯಗೊಂಡಿದ್ದ ತರುಣ್ ಗೌಡನಿಗೆ ಪರಿಹಾರ ಪಾವತಿಸುವ ಹೊಣೆಗಾರಿಕೆ ವಿಮಾ ಕಂಪನಿಗೆ ವಹಿಸಿದ್ದ ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣದ (ಎಂಎಸಿಟಿ) ಕ್ರಮ ಪ್ರಶ್ನಿಸಿ ಯುನೈಟೆಡ್ ಇನ್ಶೂರೆನ್ಸ್ ಇಂಡಿಯಾ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಚ್. ಪಿ. ಸಂದೇಶ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ನ್ಯಾಯಪೀಠ "ಅಪಘಾತಕ್ಕೆ ಕಾರಣವಾದ ಚಾಲಕನ ಲೈಸೆನ್ಸ್ ನಕಲಿ ಎನ್ನುವುದು ವಿಮಾ ಕಂಪನಿಯ ವಾದ. ಆದರೆ,ಆ ದಾಖಲೆ ವಿತರಿಸಿದ ಅಧಿಕಾರಿಯನ್ನು ಸಂಸ್ಥೆ ವಿಚಾರಣೆಗೊಳಪಡಿಸಿಲ್ಲ. ಲೈಸೆನ್ಸ್ ನಕಲಿಯೋ ಅಥವಾ ಅಸಲಿಯೋ ಎಂಬುದನ್ನು ಸಾಬೀತುಪಡಿಸುವ ಹೊಣೆ ವಿಮಾ ಕಂಪನಿಯ ಮೇಲೆಯೇ ಇರುತ್ತದೆ" ಎಂದು ಹೇಳಿದೆ.












Click it and Unblock the Notifications