ಕಾವೇರಿ ಪಾಳೇಪಟ್ಟಿನಲ್ಲಿ ಕಳಚುತ್ತಿವೆ ಕಾಂಗ್ರೆಸ್ ಕೈ-ಕಾಲು, ಕಮಲಕ್ಕೆಷ್ಟು ಪಾಲು?
ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ-ಪ್ರಮುಖ ನಾಯಕರ ಅಸಮಾಧಾನ ಹೊರಬರುತ್ತಿದೆ. ಅದರಲ್ಲೂ ಹಳೇ ಮೈಸೂರು ಭಾಗದ ಪ್ರಮುಖ ನಾಯಕರು ಕಾಂಗ್ರೆಸ್ ತೊರೆದಿದ್ದಾರೆ ಅಥವಾ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಈ ಬೆಳವಣಿಗೆಯ ಲಾಭ ಯಾರಿಗೆ ಎಂಬ ವಿಶ್ಲೇಷಣೆ ಇಲ್ಲಿದೆ
ಬೆಂಗಳೂರು, ಜನವರಿ 31: ಕರ್ನಾಟಕ ಕಾಂಗ್ರೆಸ್ ನಲ್ಲಿ ಒಂದೊಂದೇ ಅವಯವಗಳಂತೆ ನಾಯಕರು ಕಳಚಿಕೊಳ್ಳುತ್ತಿದ್ದಾರೆ. ಇನ್ನೂ ವಿಚಿತ್ರ ಏನೆಂದರೆ, ಇತ್ತೀಚೆಗೆ ಹಾಗೆ ದೂರವಾಗುತ್ತಿರುವ ಪ್ರಮುಖ ನಾಯಕರೆಲ್ಲ ಹಳೆ ಮೈಸೂರು ಭಾಗದವರು ಅಥವಾ ಕಾವೇರಿ ಪಾಳೇಪಟ್ಟಿನವರು. ಈ ಬೆಳವಣಿಗೆಯ ಲಾಭ ಪಡೆಯಲು ಬಿಜೆಪಿ ಕಣ್ಣು ನೆಟ್ಟು ಕೂತಿದೆ.
ಚಾಮರಾಜನಗರ, ಮಂಡ್ಯ ಹಾಗೂ ಮೈಸೂರು ಜಿಲ್ಲೆ ವ್ಯಾಪ್ತಿಯಲ್ಲಿ ಇಪ್ಪತ್ತೆರಡು ವಿಧಾನಸಭೆ ಕ್ಷೇತ್ರಗಳಿವೆ. ಕಾಂಗ್ರೆಸ್ ಪಾಲಿಗೆ ತವರಿನಂತಿರುವ ಈ ಜಿಲ್ಲೆಗಳಲ್ಲೇ ಅದನ್ನು ಮಣಿಸುವ ಅವಕಾಶಗಳನ್ನು ಬಿಜೆಪಿ ಎದುರು ನೋಡುತ್ತಿದೆ. ಮೊದಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಜಿ ಸಂಪುಟ ಸಹೋದ್ಯೋಗಿ ಹಾಗೂ ದಲಿತರ ನಾಯಕ ವಿ.ಶ್ರೀನಿವಾಸ್ ಪ್ರಸಾದ್ ಕಾಂಗ್ರೆಸ್ ತೊರೆದರು.[ಎಸ್.ಎಂ ಕೃಷ್ಣ ಜತೆ ಅಂಬರೀಶನ್ನೂ ಬಿಜೆಪಿಗೆ ಸ್ವಾಗತಿಸಿದ ಆರ್.ಅಶೋಕ್!]
ಇದೀಗ ಎಸ್.ಎಂ.ಕೃಷ್ಣ ಕೂಡ ಪಕ್ಷ ತೊರೆದಿದ್ದಾರೆ. ವಿಧಾನ ಪರಿಷತ್ ಸದಸ್ಯ ಡಿ.ಮಾದೇಗೌಡ ಅವರು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಸಂಪುಟದಿಂದ ಕೈ ಬಿಟ್ಟಿರುವ ಕಾರಣಕ್ಕೆ ಸಿಟ್ಟಾಗಿರುವ ಅಂಬರೀಶ್ ಇನ್ನೇನು ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ವಿಷಯವನ್ನು ಸ್ವತಃ ಅಂಬರೀಶ್ ಆಗಲಿ, ಕಾಂಗ್ರೆಸ್ ಅಥವಾ ಬಿಜೆಪಿ ಆಗಲಿ ಖಾತ್ರಿ ಪಡಿಸಿಲ್ಲ.
ಕರಾವಳಿಯಲ್ಲಿ ಬಿಜೆಪಿ, ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್-ಕಾಂಗ್ರೆಸ್
ಕರ್ನಾಟಕದ ಕರಾವಳಿ ಹಾಗೂ ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಬಲವಾದ ನೆಲೆಗಟ್ಟಿದೆ. ಜೆಡಿಎಸ್ ಗೆ ಈ ಭಾಗದಲ್ಲಿ ನೆಲೆಯೇ ಇಲ್ಲ. ಇನ್ನು ಬಿಜೆಪಿಗೆ ಎದುರಾಳಿ ಅಂದರೆ ಕಾಂಗ್ರೆಸ್ಸೇ. ಕಾವೇರಿ ಪಾಳೇಪಟ್ಟಿನಲ್ಲಿ ಒಕ್ಕಲಿಗರ ಹಾಗೂ ಒಕ್ಕಲು ಮಾಡುವವರ ಪ್ರಾಬಲ್ಯ ಇದ್ದು, ಇಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಬಹಳ ಪ್ರಾಮುಖ್ಯ ಇದೆ.
ಬಿಜೆಪಿಗೆ ಅವಕಾಶ
ಈಗ ಕಾವೇರಿ ಭಾಗದಲ್ಲಿ ಕಾಂಗ್ರೆಸ್ ನಿಂದ ಹೊರಬರುತ್ತಿರುವ ಪ್ರಮುಖ ನಾಯಕರನ್ನು ಸೆಳೆಯಲು ಬಿಜೆಪಿ ಅವಕಾಶ ಎದುರು ನೋಡುತ್ತಿದೆ. ಹಳೆ ಮೈಸೂರು ಭಾಗದಲ್ಲಿ ಈ ನಾಯಕರಿಗೆ ಜನ ಮನ್ನಣೆಯಿದೆ. ಭಾನುವಾರ ಎಸ್ಸೆಂ ಕೃಷ್ಣ ಮತ್ತು ಅವರ ಪತ್ನಿ ಪ್ರೇಮಾ ಅವರಿಗೆ ಸ್ವಾಗತ ಕೋರಲು ಮಂಡ್ಯದಲ್ಲಿ ಸೇರಿದ್ದ ಭಾರೀ ಜನಸ್ತೋಮವೇ ಅ ಜನಪ್ರಿಯತೆಗೆ ಸಾಕ್ಷಿ.
ಶ್ರೀನಿವಾಸ್ ಪ್ರಸಾದ್ ಬಿಜೆಪಿ ಜೊತೆಗೆ
ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ಸಂಪುಟದಿಂದ ಕೈ ಬಿಟ್ಟ ಕೂಡಲೇ ಬಿಜೆಪಿ ಸೇರಿದರು. ನಂಜನಗೂಡು ಭಾಗದಲ್ಲಿ ತುಂಬ ಪ್ರಾಬಲ್ಯ ಹೊಂದಿರುವ ಅವರು, ಬಿಜೆಪಿಗೆ ಸ್ಥಾನ ಗೆಲ್ಲಿಸಿಕೊಡುವ ಭರವಸೆ ನೀಡಿದ್ದಾರೆ.
ಅಮಿತ್ ಶಾ ಭೇಟಿ ಸುದ್ದಿ
ಎಸ್ಸೆಂ ಕೃಷ್ಣ ಕಾಂಗ್ರೆಸ್ ಬಿಡುವ ಮುನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರನ್ನು ಭೇಟಿ ಮಾಡಿದ ಸುದ್ದಿ ಇದೆ. ಕೃಷ್ಣ ಅವರು ಬಿಜೆಪಿ ಸೇರುತ್ತಾರೆ ಎಂಬ ನಿರೀಕ್ಷೆಗೆ ಈ ವಿಚಾರ ಮತ್ತಷ್ಟು ಇಂಬು ಕೊಡುತ್ತದೆ. ಜತೆಗೆ ಯಡಿಯೂರಪ್ಪ ಸೇರಿ ಕರ್ನಾಟಕದ ಬಿಜೆಪಿ ನಾಯಕರು ಪಕ್ಷಕ್ಕೆ ಸ್ವಾಗತ ಕೋರಿದ್ದಾರೆ.
ತುಟಿ ಬಿಚ್ಚದ ಎಸ್ಸೆಂ ಕೃಷ್ಣ
ಅದರೆ, ಎಸ್ಸೆಂ ಕೃಷ್ಣ ಅವರು ಈ ಬಗ್ಗೆ ತುಟಿ ಬಿಚ್ಚಿಲ್ಲ. ರಾಜಕೀಯ ವಿಶ್ಲೇಷಕರ ಪ್ರಕಾರ, ಇನ್ನು ಕೆಲವೇ ಸಮಯಕ್ಕೆ ಕೃಷ್ಣ ಬಿಜೆಪಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಬೆಂಬಲ ಸೂಚಿಸುವ ಸಾಧ್ಯತೆಗಳಿವೆ. ಅಂಬರೀಶ್ ಆಗಲಿ ಅಥವಾ ಕೃಷ್ಣ ಆಗಲಿ ಒಂದು ವೇಳೆ ಬಿಜೆಪಿ ಸೇರದಿರಬಹುದು. ಕಾಂಗ್ರೆಸ್ ನಿಂದ ಒಂದು ಅಂತರವನ್ನಂತೂ ಕಾಯ್ದುಕೊಳ್ಳುತ್ತಾರೆ. ಒಂದು ವೇಳೆ ಹೀಗಾದರೂ ಸಾಕು, ಕಾವೇರಿ ಪಾಳೇಪಟ್ಟಿನ 22 ವಿಧಾನಸಭಾ ಕ್ಷೇತ್ರದಲ್ಲಿ ದೊಡ್ಡ ಪಾಲು ಪಡೆಯಲು ಬಿಜೆಪಿ ಶ್ರಮ ಹಾಕುತ್ತದೆ.
ಕಾಂಗ್ರೆಸ್ ಗೆ ಅನುಕೂಲ ವಾತಾವರಣ ಇಲ್ಲ
2018ರಲ್ಲಿ ವಿಧಾನಸಭೆ ಚುನಾವಣೆ ಇದೆ. ಅದರೆ ಕಾಂಗ್ರೆಸ್ ಪಾಲಿಗೆ 2013ರಲ್ಲಿ ಇದ್ದಂತೆ ತುಂಬ ಅನುಕೂಲಕರ ವಾತಾವರಣವಂತೂ ಇಲ್ಲ. ಬಿಜೆಪಿಯಲ್ಲಿನ ಒಳಜಗಳ, ಯಡಿಯೂರಪ್ಪನವರು ಕಟ್ಟಿದ ಕೆಜೆಪಿ, ಕಡೆಗೆ ಕರಾವಳಿ-ಉತ್ತರ ಕರ್ನಾಟಕದಲ್ಲಿನ ಸಾಮ್ಪ್ರದಾಯಿಕ ಬಿಜೆಪಿ ಮತಗಳು ಕಾಂಗ್ರೆಸ್ಸಿಗೆ ಅನುಕೂಲ ಮಾಡಿದ್ದವು. ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದ್ದ ಬಿಜೆಪಿಯು ಗೆಲುವನ್ನು ಹರಿವಾಣದಲ್ಲಿಟ್ಟು ಕಾಂಗ್ರೆಸ್ ಗೆ ಕೊಟ್ಟಿತ್ತು.
2013ರಲ್ಲಿ ಒಂದು ಸ್ಥಾನವೂ ಗೆಲ್ಲಲಿಲ್ಲ
2013ರಲ್ಲಿ ಮಂಡ್ಯದಲ್ಲಿ 7ರ ಪೈಕಿ 2, ಮೈಸೂರಿನಲ್ಲಿ 11ರ ಪೈಕಿ 8, ಚಾಮರಾಜನಗರದಲ್ಲಿ 4ಕ್ಕೆ 4 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿತ್ತು. ಬಿಜೆಪಿ ಒಂದು ಸ್ಥಾನ ಕೂಡ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ 2008ರಲ್ಲಿ ಬಿಜೆಪಿ ಮೈಸೂರಿನಲ್ಲಿ 2 ಸ್ಥಾನವನ್ನಾದರೂ ಪಡೆದಿತ್ತು. ಕಾಂಗ್ರೆಸ್ ಚಾಮರಾಜನಗರದಲ್ಲಿ ಎಲ್ಲ ನಾಲ್ಕು ಹಾಗೂ ಮಂಡ್ಯ ಭಾಗದಲ್ಲಿ ಏಳರ ಪೈಕಿ ಎರಡು ಸ್ಥಾನ ಪದೆದಿತ್ತು.
ಈ ನಾಯಕರು ಬಂದರೆ ಮತ ಕೀಳಬಹುದು
ಆದರೆ, ಜೆಡಿಎಸ್ ಪಕ್ಷ ಮಾತ್ರ 2008, 2013ರ ವಿಧಾನಸಭೆ ಚುನಾವಣೆಯಲ್ಲಿ ತನ್ನ ಸ್ಥಾನಗಳನ್ನು ಉಳಿಸಿಕೊಂಡಿದೆ. ಶ್ರೀನಿವಾಸ್ ಪ್ರಸಾದ್ ರಂಥ ನಾಯಕರು ಜೊತೆಗಿರುವಾಗ ನಂಜನಗೂಡಿನಲ್ಲಿ ಬಿಜೆಪಿ ಗೆಲುವು ಬಹುತೇಕ ಖಚಿತ. ಇನ್ನು ಅಂಬರೀಶ್, ಎಸ್ಸೆಂ ಕೃಷ್ಣ ಕೂಡ ಬಿಜೆಪಿ ಸೇರಿಬಿಟ್ಟರೆ ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ, ಮಳವಳ್ಳಿ ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರಮುಖವಾಗಿ ಮತಗಳನ್ನು ಕೀಳಬಹುದು. ಆ ಕಾರಣಕ್ಕೆ ಕಾಂಗ್ರೆಸ್ ಪಾಲಿಗೆ ಸಮೃದ್ಧ ಮತಬುಟ್ಟಿಯಾಗಿರುವ ಕಾವೇರಿ ಪಾಳೇಪಟ್ಟಿನಲ್ಲಿ ತನ್ನ ಅದೃಷ್ಟ ಬದಲಾಯಿಸಿಕೊಳ್ಳಲು ಬಿಜೆಪಿ ನಾಯಕರು ಕೆಲಸ ಆರಂಭಿಸಿದ್ದಾರೆ.