Karnataka Rain: ಕರಾವಳಿ-ಒಳನಾಡು ಸೇರಿ 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಮಹಾಮಳೆ' ಆಗಮನ, ವರದಿ
ಬೆಂಗಳೂರು, ಜುಲೈ 26: ಕರ್ನಾಟಕ ಕರಾವಳಿ ಹಾಗೂ ಉತ್ತರ ಒಳನಾಡು ಸೇರಿದಂತೆ ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಮಹಾಮಳೆ ಮುಂದುವರಿಯಲಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರಾಜ್ಯ ವಿವಿಧೆಡೆ ಜನಜೀವನ ಅಸ್ತವೆಸ್ತವಾಗಿದೆ. ಸದ್ಯದ ಈ ಪರಿಸ್ಥಿತಿ ಮುಂದಿನ ಐದು ದಿನಗಳ ಕಾಲ ಹೀಗೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬರಗಾಲ ಹೆಚ್ಚು ಕಾಡುವ ಉತ್ತರ ಕರ್ನಾಟಕ ಭಾಗದ ಕೆಲವು ಜಿಲ್ಲೆಗಳು ಕಳೆದ 10 ದಿನಗಳಿಂದ ಮೆಲನಾಡಿನ ಜಿಲ್ಲೆಗಳಂತಾಗಿವೆ. ನಿತ್ಯವು 24 ಗಂಟೆ ಮಳೆ ಜಿನುಗುತ್ತಲೇ ಇದ್ದು, ಕೆಲವೊಮ್ಮೆ ಭಾರಿ ಮಳೆ ಸುರಿಯುತ್ತಿದೆ. ಬೆಳಗಾವಿ, ಧಾರವಾಡ, ಹಾವೇರಿ, ಕೊಪ್ಪಳ, ಗದಗ, ಕಲಬುರಗಿ, ಬೀದರ್ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ವ್ಯಾಪಕ ಮಳೆ ದಾಖಲಾಗಿದೆ. ಈ ಮಹಾಮಳೆ ಮುಂದಿನ ಐದು ದಿನವು ಮುಂದುವರಿಯುವ ಸಂಭವ ಇದೆ.

ಕರ್ನಾಟಕ ಕರಾವಳಿಯಲ್ಲಿ ಬಲವಾದ ಗಾಳಿ ಬೀಸುತ್ತಿದ್ದು, ತಿಂಗಳಿನಿಂದ ಮಹಾಮಳೆ ಆಗಿದ್ದು, ರಾಜ್ಯದ ಗರಿಷ್ಠ ಮಳೆ ಈ ಭಾಗದಲ್ಲಿ ದಾಖಲಾಗಿದೆ. ಪ್ರತಿ ಗಂಟೆಗೆ ಇಲ್ಲಿ ಸುಮಾರು 55 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ಇಂದು ಜುಲೈ 26ರಂದು ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ರೆಡ್ ಅಲರ್ಟ್ ಪಡೆದಿದ್ದು, ನಾಳೆಯಿಂದ ಮೂರು ದಿನ ಆರೆಂಜ್ ಅಲರ್ಟ್ ಪಡೆದಿವೆ. ಸದ್ಯಕ್ಕೆ ಕರಾವಳಿಯಲ್ಲಿ ಮಳೆ ಕಡಿಮೆಯಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ.
ಎಲ್ಲೆಡೆ ಮುಂಗಾರು ಮಳೆ ಸಕ್ರಿಯ
ಕೇವಲ ಕರ್ನಾಟಕ ಮಾತ್ರವಲ್ಲದೇ ನೆರೆ ಆಂಧ್ರಪ್ರದೇಶ, ತೆಲಂಗಾಣ, ಕೇರಳ ರಾಜ್ಯದಲ್ಲೂ ಭಾರೀ ಮಳೆ ಸುರಿಯುತ್ತಿದೆ. ಹವಾಮಾನದಲ್ಲಿ ಉಂಟಾಗಿರುವ ತೀವ್ರತರ ಬದಲಾವಣೆಗಳು ಇಂತಹ ಮಹಾಮಳೆಗೆ ಕಾರಣ ಎಂದು ಹವಾಮಾನ ತಜ್ಞರು ಮಹಿತಿ ನೀಡಿದ್ದಾರೆ.

ಹಲವು ದಿನಗಳಿಂದ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಆವರಿಸಿರುವ ಮುಂಗಾರು ಮಳೆ, ನಿಧಾನವಾಗಿ ದಕ್ಷಿಣ ಒಳನಾಡು ಜಿಲ್ಲೆಗಳಲಿಗೆ ವಿಸ್ತರಿಸುತ್ತಿದೆ. ಬೆಂಗಳೂರು ನಗರ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳ ವ್ಯಾಪ್ತಿಯಲ್ಲಿ ಹಗುರದಿಂದ ಸಾಧಾರಣ ಮಳೆ ಆಗಿದ್ದು, ಇಲ್ಲಿ ಸಹ ಜಿಟಿ ಜಿಟಿ ಮಳೆ ಮುಂದುವರಿಯುವ ನಿರೀಕ್ಷೆ ಇದೆ.
ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಲ್ಲಿ ಮುಂದಿನ ನಾಲ್ಕೈದು ದಿನ ಜೋರು ಮಳೆ ಬರಲಿದ್ದು, ಈ ಹಿನ್ನೆಲೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಹಲವು ಕಡೆ ಅತೀ ಭಾರಿ ಮಳೆ ದಾಖಲು
ಇನ್ನೂ ಕಳೆದ 24 ಗಂಟೆಗಳಲ್ಲಿ ಕೊಡಗಿನ ಬಾಗಮಂಡಲದಲ್ಲಿ ಅತ್ಯಧಿಕ ಮಳೆ 17 ಸೆಂಟಿ ಮೀಟರ್ ಮಳೆ ದಾಖಲಾಗಿದೆ. ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್ ರಾಕ್ ನಲ್ಲಿ 16 ಸೆಂಟಿ ಮೀಟರ್, ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ, ಸುಬ್ರಹ್ಮಣ್ಯ ಚಿಕ್ಕಮಗಳೂರಿನ ಕೊಟ್ಟಿಗೆಹಾರ, ಸುಳ್ಯ, ಶಿರಾಲಿ, ಮಾನಿ, ಲಿಂಗನಮಕ್ಕಿ, ಮಂಗಳೂರು ವಿಮಾನ ನಿಲ್ದಾಣ, ಮಂಗಳೂರು ನಗರ, ಉಪ್ಪಿನಂಗಡಿಯಲ್ಲಿ ಬಿರುಗಾಳಿ ಸಹಿತ ಅತ್ಯಧಿಕ ಮಳೆ ಸುರಿದಿದೆ.
ಬೀದರ್, ಕಲಬುರಗಿ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ, ಹಾವೇರಿ, ಗದಗ, ಧಾರವಾಡ, ವಿಜಯಪುರ, ಚಿತ್ರದುರ್ಗ, ಕೊಪ್ಪಳ, ಬೆಂಗಳೂರು ನಗರ ಸೇರಿದಂತೆ ಅನೇಕ ಕಡೆಗಳಲ್ಲಿ ವ್ಯಾಪಕ ಮಳೆ ಆಗಿದೆ. ಬಿಸಿಲಿನ ದರ್ಶನವೇ ಇಲ್ಲದಂತಾಗಿದ್ದು, ಎಲ್ಲೆಲ್ಲೂ ವ್ಯಾಪಕ ಚಳಿಯ ವಾತಾವರಣ ನಿರ್ಮಾಣವಾಗಿದೆ.












Click it and Unblock the Notifications