Rain Alert: ವಾಯುಭಾರ ಕುಸಿತ, 5 ದಿನ ರಾಜ್ಯಾದ್ಯಂತ ಭಾರೀ ಮಳೆ ಮುನ್ಸೂಚನೆ! 'ರೆಡ್ ಅಲರ್ಟ್'
ಬೆಂಗಳೂರು, ಜೂನ್ 11: ಕರ್ನಾಟಕ ರಾಜ್ಯಾದ್ಯಂತ ಆವರಿಸಿರುವ ಮುಂಗಾರು ಮಳೆಯು ಧಾರಾಕಾರವಾಗಿ ಸುರಿಯಲಿದೆ. ಮುಂದಿನ 3-5 ದಿನಗಳ ಕಾಲ (ಜೂನ್ 16 ರವರೆಗೆ) 10ಕ್ಕೂ ಅಧಿಕ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗಲಿದೆ. ಬಂಗಾಳಕೊಲ್ಲಿ ಸಮುದ್ರ ಭಾಗದಲ್ಲಿ ಆದ ವೈಪರೀತ್ಯದ ತೀವ್ರತೆ ಪರಿಣಾಮ ಕೆಲವು ಜಿಲ್ಲೆಗಳಿಗೆ 200 ಮಿಲಿ ಮೀಟರ್ಗೂ ಹೆಚ್ಚಿನ ಮಳೆ (Karnataka Rains) ಆಗಲಿದ್ದು, 'ರೆಡ್ ಅಲರ್ಟ್' (Red Alert) ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ (IMD Weather Forecast) ನೀಡಿದೆ.
ಬಂಗಾಳಕೊಲ್ಲಿ ಸಮುದ್ರ ಮೇಲ್ಮೈನಲ್ಲಿ ಚಂಡಮಾರುತ ರೂಪದ ವೈಪರೀತ್ಯ ಉಂಟಾಗಿದೆ. ಇದು ಪರಿಪೂರ್ಣವಾಗಿ ಸೈಕ್ಲೋನ್ ಆಗಿ ಬದಲಾಗಿಲ್ಲ. ಆದರೆ ದಿನದಿಂದ ದಿನಕ್ಕೆ ಅದರ ತೀವ್ರತೆ ಹೆಚ್ಚಾಗುತ್ತಿದೆ. ಆಂಧ್ರ ಪ್ರದೇಶದ ಕರಾವಳಿ ಭಾಗದಲ್ಲಿನ ಬಿರುಗಾಳಿಯು ಸಮುದ್ರ ಮೇಲ್ಭಾಗದಿಂದ ಸುಮಾರು 5.8 ಕಿಲೋ ಮೀಟರ್ ಎತ್ತರದಲ್ಲಿದೆ.

ಇದರೊಂದಿಗೆ ವಾಯುಭಾರ ಕುಸಿತವು ತಮಿಳುನಾಡಿನ ಉತ್ತರ ಭಾಗದಿಂದ ದಕ್ಷಿಣ ಮಹಾರಾಷ್ಟ್ರ ಕರಾವಳಿಯವರೆಗೆ ಏರ್ಪಟ್ಟಿದೆ. ಇದು ಸರಾಸರಿ ಸಮುದ್ರ ಮಟ್ಟದಿಂದ 3.1 ರಿಂದ 4.5 ಕಿ.ಮೀ. ಎತ್ತರದಲ್ಲಿದೆ. ಇದರ ಪ್ರಭಾವದಿಂದಾಗಿ ಕರ್ನಾಟಕದ ಎಲ್ಲ ಭಾಗಗಳ 31 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಆಗಲಿದೆ.
ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ
ಜೂನ್ 12ರಂದು ಈಗಾಗಲೇ ಸುರಿಯುತ್ತಿರುವ ಮಳೆ ಮತ್ತಷ್ಟು ಹೆಚ್ಚಾಗಲಿದೆ. ನಂತರ ಜೂನ್ 13ರಂದು ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಹಾಗೂ ಮಲೆನಾಡಿನ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಉತ್ತರ ಒಳನಾಡಿನ ಬೆಳಗಾವಿ, ಗದಗ ಮತ್ತು ಧಾರವಾಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಗುಡಗು ಮಿಂಚು ಸಮೇತ ಅತ್ಯಧಿಕ ಭಾರೀ ಮಳೆ ಆಗಲಿದ್ದು, ರೆಡ್ ಅಲರ್ಟ್ ನೀಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಪ್ರಯುಕ್ತ ಇದೇ ದಿನ ಯೆಲ್ಲೋ ಅಲರ್ಟ್ ನೀಡಲಾಗಿದೆ.
'ಆರೆಂಜ್ ಅಲರ್ಟ್' ಜಿಲ್ಲೆಗಳು ಯಾವುವು?
ಜೂನ್ 14ರಂದು ಉಡುಪಿ, ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಕೊಡಗಿಗೆ ಮಾತ್ರ ರೆಡ್ ಅಲರ್ಟ್ ನೀಡಲಾಗಿದೆ. ಉಳಿದ ಜಿಲ್ಲೆಗಳಾದ ಶಿವಮೊಗ್ಗ, ಬೆಳಗಾವಿ, ಗದಗ, ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಗಳಿಗೆ 110.5ರಿಂದ 200 ಮಿಲಿ ಮೀಟರ್ ಮಧ್ಯ ಮಳೆ ಅಬ್ಬರಿಸುವ ಹಿನ್ನೆಲೆಯ ಒಂದು ದಿನ 'ಆರೆಂಜ್ ಅಲರ್ಟ್' ನೀಡಲಾಗಿದೆ. ಇನ್ನುಳಿದ ಎಲ್ಲ ಜಿಲ್ಲೆಗಳಿಗೆ ಆ ದಿನ ಸಾಧಾರಣದಿಂದ ಭಾರೀ ಮಳೆ ಆಗಲಿದ್ದು, 'ಯೆಲ್ಲೋ ಅಲರ್ಟ್' ನೀಡಲಾಗಿದೆ.

ನಂತರ ಜೂನ್ 15ರಂದು ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ 'ರೆಡ್ ಅಲರ್ಟ್', ಕಲಬುರಗಿ, ಬೀದರ್, ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ 'ಆರೆಂಜ್ ಅಲರ್ಟ್' ನೀಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಅಂದರೆ 60.5 ಮಿಲಿ ಮೀಟರ್ ನಿಂದ 110 ಮಿಲಿ ಮೀಟರ್ ವರೆಗೆ ವ್ಯಾಪಕ ಮಳೆ ಆಗಲಿದ್ದು, ಆ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಜೂನ್ 16ರಂದು ಮತ್ತೆ ಮಳೆ ಚುರುಕಾಗುವ ಸಾಧ್ಯತೆ ಇದೆ. ಅಂದು ಸಹ ಕರಾವಳಿ ಭಾಗಕ್ಕೆ 'ರೆಡ್ ಅಲರ್ಟ್', ಕಲ್ಯಾಣ ಕರ್ನಾಟಕ ಹಾಗೂ ಇತರ ಒಳನಾಡು ಜಿಲ್ಲೆಗಳಿಗೆ ಆರೆಂಜ್ ಮತ್ತು 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬುಧವಾರದ ಹವಾಮಾನ ಮುನ್ಸೂಚನೆ ವರದಿಯಲ್ಲಿ ತಿಳಿಸಿದೆ.
ಗಾಳಿ ಬೀಸುವಿಕೆ ವೇಗ ಹೆಚ್ಚಳ
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಮಲೆನಾಡು, ಕರಾವಳಿ ಹಾಗೂ ಉತ್ತರ ಒಳನಾಡಿನ ಒಂದಷ್ಟು ಜಿಲ್ಲೆಗಳಲ್ಲಿ ಉತ್ತಮ ಮಳೆ ಆಗಿದೆ. ಈ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ. ಭಾರೀ ಮಳೆ ಬರುವ ಈ ಮೇಲಿನ ಎಲ್ಲ ಜಿಲ್ಲೆಗಳಲ್ಲಿ ಗಾಳಿ ಬೀಸುವಿಕೆ ಪ್ರಮಾಣ ಪ್ರತಿ ಗಂಟೆಗೆ ಕನಿಷ್ಠ 30 ರಿಂದ 50 ಕಿಲೋ ಮೀಟರ್ವರೆಗೆ ಬೀಸಲಿದೆ ಎಂದು ಹವಾಮಾನ ತಜ್ಞರು ವಿವರಿಸಿದ್ದಾರೆ.
ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಣೆ
ಕರ್ನಾಟಕ ಕರಾವಳಿ ಭಾಗದಲ್ಲಿ ರಣಭೀಕರ ಮಳೆ ಮುನ್ಸೂಚನೆ ಇದೆ. ಹೀಗಾಗಿ ಕೊಡುಗು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಶಾಲೆಗಳಿಗೆ, ಅಂಗನವಾಡಿ ಕೇಂದ್ರಗಳಿಗೆ ಇಂದು ಜೂನ್ 12ರಂದು ರಜೆ ಘೋಷಿಸಲಾಗಿದೆ. ಮಕ್ಕಳ ಹಿತ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಜಿಲ್ಲಾಡಳಿತವು ಅಗತ್ತ ಎಚ್ಚರಿಕೆ ವಹಿಸುವಂತೆ, ಯಾವುದೇ ಸ್ಥಿತಿ ಎದರಿಸಲು ಸಜ್ಜಾಗುವಂತೆ ಸಿಬ್ಬಂದಿಗೆ ತಿಳಿಸಿದೆ.












Click it and Unblock the Notifications