Prajwal Revanna Case: ‘ಮಗ ಮಾತ್ರವಲ್ಲ, ಅಪ್ಪನೂ ಕಾಮುಕ, ವಿಕೃತಕಾಮಿ, ಹೆಣ್ಣುಬಾಕ ಎನ್ನುವ ಸುದ್ದಿ ಇದೆ’
ಹಾಸನದ 'ಪೆನ್ಡ್ರೈವ್' ಪ್ರಕರಣ ಎಲ್ಲೆಲ್ಲೂ ಸಂಚಲನ ಸೃಷ್ಟಿ ಮಾಡಿದ್ದು, ಭಾರಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಕರ್ನಾಟಕದ ರಾಜಕೀಯ ಮಾತ್ರವಲ್ಲ, ಭಾರತದ ರಾಜಕೀಯ ಅಂಗಳದಲ್ಲೂ ಈ ವಿಚಾರ ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿದೆ. ಇಷ್ಟು ಮಾತ್ರವಲ್ಲ ಈಗ ಪ್ರಜ್ವಲ್ ರೇವಣ್ಣ ಅವರ ತಂದೆ, ಮಾಜಿ ಸಚಿವ ರೇವಣ್ಣ ಅವರ ವಿರುದ್ಧವೂ ಆರೋಪವನ್ನ ಮಾಡಿದ್ದಾರೆ ಇಲ್ಲೊಬ್ಬರು.
ಹೌದು ಹಾಸನದಲ್ಲಿ ರೋಡ್ ರೋಡ್ನಲ್ಲಿ ಸಿಗುತ್ತಿರುವ. ಪಾರ್ಕ್ & ಕ್ರೀಡಾಂಗಣದಲ್ಲೆಲ್ಲಾ ಚೆಲ್ಲಾಪಿಲ್ಲಿ ಆಗಿ ಬಿದ್ದಿದ್ದ ಪೆನ್ಡ್ರೈವ್ ಒಳಗೆ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿರುವ ಖಾಸಗಿ ವಿಡಿಯೋಗಳು ಇವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಆರೋಪಗಳು, ದೊಡ್ಡದಾಗಿ ಕಾಡ್ಗಿಚ್ಚು ಹೊತ್ತಿಸಿವೆ. ಇದೇ ಸಮಯದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಕೂಡ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ವಿಶೇಷ ತಂಡ ರಚನೆ ಮಾಡಿ ತನಿಖೆಗೆ ಕೂಡ ಆದೇಶ ನೀಡಿದೆ. ಇದೇ ಸಮಯದಲ್ಲಿ ಕೆಆರ್ಎಸ್ ಪಕ್ಷದ ರವಿ ಕೃಷ್ಣಾ ರೆಡ್ಡಿ ಅವರು ಈಗ ಮಾಜಿ ಸಚಿವ ಎಚ್.ಡಿ. ರೇವಣ್ಣ ವಿರುದ್ಧ, ಪರೋಕ್ಷವಾಗಿ ಗಂಭೀರ ಆರೋಪವನ್ನ ಮಾಡಿದ್ದಾರೆ. ಎಚ್.ಡಿ. ರೇವಣ್ಣ ಹೆಸರು ಬಳಸದೆ ಗಂಭೀರ ಆರೋಪ ಮಾಡಿದ್ದಾರೆ.

'ಅಸಹಾಯಕ ಅಬಲೆಯರು ಮಾತ್ರವಲ್ಲ'
ರವಿ ಕೃಷ್ಣಾ ರೆಡ್ಡಿ ಅವರು ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವ ಪೋಸ್ಟ್ ಪ್ರಕಾರವೇ, 'ಮಗ ಮಾತ್ರವಲ್ಲ, ಅಪ್ಪನೂ ಕಾಮುಕ, ವಿಕೃತಕಾಮಿ, ಹೆಣ್ಣುಬಾಕ ಎನ್ನುವ ಸುದ್ದಿ ಇದೆ (ನಂಬಬಹುದಾದ ಮೂಲಗಳಿಂದ). ಕೇವಲ ಅಸಹಾಯಕ ಅಬಲೆಯರು ಮಾತ್ರವಲ್ಲ, ಮಹಿಳಾ ಅಧಿಕಾರಿಗಳೂ ಸೇರಿದಂತೆ ಸಬಲೆಯರೂ ಈ ಅಪ್ಪ-ಮಗನಿಂದ ಲೈಂಗಿಕ ಶೋಷಣೆಗೆ ಒಳಪಟ್ಟಿದ್ದಾರಂತೆ. ಕೆಲವು ಮಹಿಳಾ ಪೊಲೀಸ್ ಅಧಿಕಾರಿಗಳು ಹಿರಿಯ ಅಧಿಕಾರಿಗಳ ಗಮನಕ್ಕೂ ವಿಚಾರ ಒಯ್ದಿದ್ದರಂತೆ. ಆದರೆ... ಗುಲಾಮಿ ಮನಸ್ಥಿತಿಯ ಭ್ರಷ್ಟ ಅಧಿಕಾರಿಗಳು ಯಾವ ರಕ್ಷಣೆ ತಾನೇ ನೀಡಬಲ್ಲರು?' ಎಂದು ಪ್ರಶ್ನೆ ಮಾಡಿದ್ದಾರೆ.
'ಧೈರ್ಯವಾಗಿ ಮುಂದೆ ಬಂದರೆ'
ಹಾಗೇ ತಮ್ಮ ಆರೋಪವನ್ನು ಮುಂದುವರಿಸಿರುವ ರವಿ ಕೃಷ್ಣಾ ರೆಡ್ಡಿ, 'ಈಗ ಸಂತ್ರಸ್ಥರು ಧೈರ್ಯವಾಗಿ ಮುಂದೆ ಬಂದರೆ ಮಾತ್ರ ಅತ್ಯಾಚಾರಿಗಳಿಗೆ ಶಿಕ್ಷೆ ಆಗುತ್ತದೆ. ಕನಿಷ್ಠ ಸರ್ಕಾರಿ ನೌಕರಿಯ ಸೇವಾಭದ್ರತೆ ಮತ್ತು ಆರ್ಥಿಕಭದ್ರತೆ ಇರುವವರಾದರೂ ಮುಂದೆ ಬರಬೇಕು ಈಗಲ್ಲದಿದ್ದರೆ ಇನ್ಯಾವಾಗ? ನೀವಲ್ಲದಿದ್ದರೆ ಇನ್ಯಾರು? ರಾಜ್ಯದ ಬಹಳಷ್ಟು MLA/MPಗಳು ಮತ್ತು ಅವರ ಕುಟುಂಬಸ್ಥರು ಇದೇ ರೀತಿಯ ಕುಕೃತ್ಯಗಳಲ್ಲಿ ತೊಡಗಿರುವುದು ಸುಳ್ಳಲ್ಲ. ಆ ನೀಚರು ಎಷ್ಟೇ ಬಲಿಷ್ಟರಾಗಿರಲಿ, ಸಂತ್ರಸ್ಥ ಮಹಿಳೆಯರು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ಸಂಪರ್ಕಿಸಿದರೆ ಅವರಿಗೆ ಎಲ್ಲಾ ತರಹದ ರಕ್ಷಣೆ ನೀಡುವ ಮತ್ತು ನ್ಯಾಯ ದೊರಕಿಸಿಕೊಡುವ ಕೆಲಸವನ್ನು KRS ಪಕ್ಷ ಮಾಡುತ್ತದೆ. ನೀವು ಯಾರಿಗೂ ಅಂಜಬೇಕಿಲ್ಲ. ಮೊದಲಿಗೆ, ಶೋಷಣೆಗೆ ಒಳಪಡುವುದನ್ನು ನಿರಾಕರಿಸಿ. ಧೈರ್ಯದಿಂದ ಎದ್ದು ನಿಲ್ಲಿ. ನಿಮಗೆ ಖಂಡಿತ ಬೆಂಬಲ ಮತ್ತು ರಕ್ಷಣೆ ಸಿಗುತ್ತದೆ. ಸಂಕೋಲೆಗಳಿಂದ ವಿಮೋಚನೆಯೂ.' ಎಂದಿದ್ದಾರೆ.
'ಜನರೂ ಗಂಭೀರವಾಗಿ ಯೋಚಿಸಬೇಕು'
ಹಾಗೇ ತಮ್ಮ ಪೋಸ್ಟ್ನಲ್ಲಿ ಆರೋಪ ಮುಂದುವರಿಸಿರುವ ರವಿ ಕೃಷ್ಣಾ ರೆಡ್ಡಿ, 'ಲೋಕಸಭಾ ಚುನಾವಣೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ತಾವು ಎಂತಹವರಿಗೆ ಮತ ಹಾಕಿ ಬೆಂಬಲಿಸುತ್ತಿದ್ದೇವೆ ಎಂದು ಜನರೂ ಗಂಭೀರವಾಗಿ ಯೋಚಿಸಬೇಕು ಎಂದು 🙏 ಮನವಿ ಮಾಡುತ್ತೇನೆ. ಅಂದಹಾಗೆ, ಜನತಾ ಜನಾರ್ದನನು ಕೊಟ್ಟ ಪವಿತ್ರವಾದ ಅಧಿಕಾರ ಬಲವನ್ನು ಅಧರ್ಮಕ್ಕೆ ಬಳಸುವವರು ಬದುಕಿರುವಾಗಲೇ ರೌರವ ನರಕ ಅನುಭವಿಸುತ್ತಾರೆ. ಅವರಷ್ಟೇ ಅಲ್ಲ, ಅವರನ್ನು ಪೋಷಿಸಿದ ಮತ್ತು ರಕ್ಷಿಸಿದ ಅಧರ್ಮಿ ರಕ್ಷಕರೂ. ಇವೆಲ್ಲವೂ ಕ್ಷಮಾರ್ಹವಲ್ಲದ ಘೋರ ಪಾತಕಗಳು. ನಿಮ್ಮ ಯಾವುದೇ ಪೂಜೆ, ಪುನಸ್ಕಾರ, ಯಾಗ, ಮಾಟ, ಮಂತ್ರಗಳು ನಿಮ್ಮನ್ನು ಶಿಕ್ಷೆಯಿಂದ ರಕ್ಷಿಸಲಾರವು. ಸ್ವಯಂಕೃತಾಪರಾಧ. ಅನುಭವಿಸಿ. ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.' ಎಂದು ಆರೋಪ ಮಾಡಿದ್ದಾರೆ.












Click it and Unblock the Notifications