ಹಳ್ಳಿಗಳಿಗೆ ಅಧಿಕಾರಿಗಳನ್ನು ಕರೆದುಕೊಂಡು ಬಂದು ಗ್ರಾಮಸಭೆ ಮಾಡ್ತಿದ್ದೆ!
ಕರ್ನಾಟಕದಲ್ಲಿ ಒಂದೇ ವಾರದ ಅಂತರದಲ್ಲಿ ಎರಡೆರಡು ಮಹತ್ವದ ಜನತಾ ದರ್ಶನ ಕಾರ್ಯಕ್ರಮ ನಡೆದಿವೆ. ಒಂದು ಕಡೆ ಸಿಎಂ ಸಿದ್ದರಾಮಯ್ಯ ಅವರು 'ಜನತಾ ದರ್ಶನ' ನಡೆಸಿದ ಕೆಲವೇ ದಿನದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೂಡ ತಮ್ಮ ಕ್ಷೇತ್ರದ ಜನರ ಸಮಸ್ಯೆ ಆಲಿಸಿದ್ದಾರೆ. ಇದೇ ವೇಳೆ 'ಹಳ್ಳಿಗಳಿಗೆ ಅಧಿಕಾರಿಗಳನ್ನು ಕರೆದುಕೊಂಡು ಬಂದು ಗ್ರಾಮಸಭೆ ಮಾಡ್ತಿದ್ದೆ!' ಎಂಬ ಮಹತ್ವದ ವಿಚಾರ ಹಂಚಿಕೊಂಡಿದ್ದಾರೆ.
ಮೊದಲೇ ನಿಗದಿ ಆಗಿದ್ದಂತೆ ಇಂದು ಕನಕಪುರದ ಅಂಬೇಡ್ಕರ್ ಭವನದಲ್ಲಿ ಜನರ ಸಮಸ್ಯೆ ಆಲಿಸಿದರು ಡಿಸಿಎಂ ಡಿ.ಕೆ. ಶಿವಕುಮಾರ್. ಈ ವೇಳೆ ಮಾತನಾಡಿದ ಉಪಮುಖ್ಯಮಂತ್ರಿ, 'ನಾನು ಮೊದಲು ಹಳ್ಳಿಹಳ್ಳಿಗೆ ಅಧಿಕಾರಿಗಳನ್ನ ಕರೆದುಕೊಂಡು ಬಂದು ಗ್ರಾಮಸಭೆ ಮಾಡ್ತಿದ್ದೆ ಆದರೆ ಕಳೆದ ಎರಡು ಅವಧಿಯಿಂದ ರಾಜ್ಯ ರಾಜಕಾರಣದ ಒತ್ತಡ ಹೆಚ್ಚಾಗಿದೆ. ಆದರೂ ಇಡೀ ತಾಲೂಕಿನ ಜನತೆ ದೊಡ್ಡ ಶಕ್ತಿ ಕೊಟ್ಟಿದ್ದೀರಿ' ಎಂದರು.

ಜನವರಿ ತಿಂಗಳಲ್ಲೂ ಜನಸಂಪರ್ಕ ಸಭೆ
ಸರ್ಕಾರದ ಮಟ್ಟದಲ್ಲೂ ಎಲ್ಲಾ ಜಿಲ್ಲೆಗಳಲ್ಲಿ ಜನಸಂಪರ್ಕ ಸಭೆ ಮಾಡ್ತಿದ್ದೀವಿ. 6 ತಿಂಗಳಿಂದ ಬಹಳ ಜನ ನನ್ನನ್ನ ಭೇಟಿ ಮಾಡಲು ಬರುತ್ತಿದ್ದರು. ಪಕ್ಷದ ಜವಾಬ್ದಾರಿ ಮತ್ತು ಬೆಂಗಳೂರು ಜವಾಬ್ದಾರಿ ಕಾರಣಕ್ಕೆ ಹಲವರನ್ನ ಭೇಟಿ ಮಾಡಲು ಆಗಿರಲಿಲ್ಲ. ಇದೀಗ ಬೆಳಗಾವಿಯಲ್ಲಿ ಅಧಿವೇಶನ ಶುರುವಾಗುತ್ತಿದೆ. ಅದಕ್ಕೂ ಮೊದಲು ಕ್ಷೇತ್ರದ ಜನರ ಭೇಟಿ ಮಾಡಬೇಕು ಅಂತಾ ಇಲ್ಲಿಗೆ ಬಂದಿದ್ದೇನೆ ಎಂದರು. ಹಾಗೇ ಜನವರಿ ತಿಂಗಳಲ್ಲೂ ಜನಸಂಪರ್ಕ ಸಭೆ ಮಾಡಲಿದ್ದೇವೆ ಎಂದು ತಿಳಿಸಿದರು.
ಅಧಿಕಾರಿಗಳಿಗೆ ಡಿಸಿಎಂ ಖಡಕ್ ಸೂಚನೆ!
ಹಾಗೇ, ಎಲ್ಲಾ ಸಮಸ್ಯೆ ಆಲಿಸಿ ಬಗೆಹರಿಸುವ ಕೆಲಸ ಮಾಡುತ್ತೇನೆ. ಎಲ್ಲಾ ಸಮಸ್ಯೆಗಳ ಅರ್ಜಿ ಬರೆದು ನೋಂದಣಿ ಮಾಡಿಸಿ. ಜಿಲ್ಲಾ ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರಬೇಕು. ನಾನು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಮೂಲ ದಾಖಲೆ ಸರಿಪಡಿಸಿಕೊಳ್ಳಿ ಎಂದು ಇದೇ ಸಮಯದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೂಚನೆ ನೀಡಿದರು. ಈ ಮೂಲಕ ರಾಮನಗರದಲ್ಲಿ ಆಡಳಿತ ಯಂತ್ರ ಚುರುಕಾಗಿಸಲು ಡಿಸಿಎಂ ಖಡಕ್ ಸೂಚನೆ ನೀಡಿದ್ದಾರೆ.

'ಜನತಾ ದರ್ಶನ' ವೇಳೆ ನೂಕುನುಗ್ಗಲು!
ಸಾವಿರಾರು ಜನ ತಮ್ಮ ಸಮಸ್ಯೆ ಹೇಳಿಕೊಳ್ಳಲು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ 'ಜನತಾ ದರ್ಶನ' ಕಾರ್ಯಕ್ರಮಕ್ಕೆ ಬಂದಿದ್ದರು. ಆದರೆ ಈ ವೇಳೆ ಜನರ ಸಂಖ್ಯೆ ಹೆಚ್ಚಾದ ಕಾರಣ ಜನಸಂಪರ್ಕ ಸಭೆಯಲ್ಲಿ ನೂಕುನುಗ್ಗಲು ಉಂಟಾಗಿತ್ತು. ಹಾಗೇ ಡಿಸಿಎಂ ಡಿಕೆಶಿ ಅವರಿಗೆ ಅರ್ಜಿ ಸಲ್ಲಿಸಲು ಜನ ಮುಗಿಬಿದ್ದರು. ಕೊನೆಗೆ ಸರತಿ ಸಾಲಿನಲ್ಲಿ ನಿಲ್ಲುವಂತೆ ಹೇಳಿ ಅರ್ಜಿ ಪಡೆಯಲಾಯಿತು. ಪ್ರಮುಖವಾಗಿ ಜನ ಖಾತೆ, ಬಸ್, ರಸ್ತೆ, ಚರಂಡಿ ಸಮಸ್ಯೆ ಜೊತೆ ಗೃಹಲಕ್ಷ್ಮೀ ನೋಂದಣಿ ಬಗ್ಗೆ ಅರ್ಜಿ ಸಲ್ಲಿಸಿದರು. ಸ್ಥಳದಲ್ಲೇ ಸಮಸ್ಯೆ ಬಗೆಹರಿಸಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗೆ ಡಿಸಿಎಂ ಹೇಳಿದ್ದೇನು?
ಜನತಾ ದರ್ಶನ ವೇಳೆ ಜಿಲ್ಲಾಧಿಕಾರಿ ಜೊತೆಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು 'ಡಿಸಿ ಅವ್ರೆ ನಿಮ್ಮನ್ನ ನೋಡಿ ಜನ ಗಾಬರಿ ಆಗಿದ್ದಾರೆ. ಮತ್ತೆ ಕೊರೊನಾ ಏನಾದರೂ ಬಂದುಬಿಡ್ತಾ? ಅಂತ. ಅದಕ್ಕೆ ಸ್ವಲ್ಪ ಮಾಸ್ಕ್ ತೆಗೆಯಿರಿ' ಅಂದ್ರು. ರಾಮನಗರ ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್ ಜನತಾ ದರ್ಶನಕ್ಕೆ ಬಂದಾಗ ಮಾಸ್ಕ್ ಹಾಕಿಕೊಂಡಿದ್ದರು. ಆದರೆ ಹೀಗೆ ಡಿಸಿಎಂ ಡಿಕೆಶಿ ಅವರು ಮಾಸ್ಕ್ ತೆಗೆಯಲು ಹೇಳಿದ ತಕ್ಷಣ, ಡಿಸಿ ಮಾಸ್ಕ್ ತೆಗೆದರು.
ಒಟ್ನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಇಂದು ನಡೆಸಿರುವ 'ಜನತಾ ದರ್ಶನ' ಯಶಸ್ವಿಯಾಗಿದೆ. ಕನಕಪುರದ ಜನತೆ ಡಿಸಿಎಂ ಬಳಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಹಾಗೇ ಸಾಧ್ಯವಾದಷ್ಟು ಮಟ್ಟಿಗೆ ಸ್ಥಳದಲ್ಲೇ ಸಮಸ್ಯೆ ಬಗೆಹರಿಸಲು ಡಿಸಿಎಂ ಸೂಚಿಸಿದ್ದು, ಇನ್ನೂ ಸ್ವಲ್ಪ ಸಮಯದಲ್ಲೇ 'ಜನತಾ ದರ್ಶನ' ಅಂತ್ಯವಾಗಲಿದೆ.












Click it and Unblock the Notifications