ಸರ್ಕಾರಿ ಶಾಲೆಗಳಿಗೆ ಸಮವಸ್ತ್ರ ಪರಿಚಯಿಸಿದ್ದ ಜನ ನಾಯಕ ಇನ್ನಿಲ್ಲ
ಬೆಂಗಳೂರು, ಜೂ. 18: ರಾಜ್ಯದ ಸರ್ಕಾರಿ ಶಾಲೆಗಳಿಗೆ ಸಮವಸ್ತ್ರ ಪರಿಚಯಿಸಿದ ಹಿರಿಮೆಗೆ ಪಾತ್ರರಾಗಿದ್ದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ರಘುಪತಿ ಎಂ. ಅವರು ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಮಲ್ಲೇಶ್ವರಂ ಅವರ ನಿವಾಸದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
81 ವರ್ಷ ವಯಸ್ಸಿನ ರಘುಪತಿ ಅವರು ನಿಜವಾದ ರಾಜಕಾರಣ ಮಾಡಿದ್ದರು. ಜನ ಪ್ರಿಯ ಜನ ನಾಯಕರಾಗಿ ಹೆಸರು ಗಳಿಸಿದ್ದರು. ಕಳೆದ ಎಂಟು ದಿನಗಳಿಂದ ಕರುಳಿನ ಸೋಂಕಿಗೆ ತುತ್ತಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ರಘುಪತಿ ಅವರು ಶನಿವಾರ ಬೆಳಗಿನ ಜಾವ 3 ಗಂಟೆ ಸುಮಾರಿನಲ್ಲಿ ದೈವಾಧೀನರಾಗಿದ್ದಾರೆ.

ಜನತಾ ಪರಿವಾರದ ನಾಯಕರಾಗಿದ್ದ ಎಂ. ರಘುಪತಿ ಅವರು ಶಿವಾಜಿನಗರ ಮತ್ತು ಮಲ್ಲೇಶ್ವರಂ ಕ್ಷೇತ್ರದಿಂದ ಶಾಸಕರಾಗಿದ್ದರು. ವಿದ್ಯಾರ್ಥಿ ದೆಸೆಯಿಂದಲೂ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಇವರು ಕಾಂಗ್ರೆಸ್ ನಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ನ್ಯಾಷನಲ್ ಸ್ಟುಡೆಂಟ್ ಯೂನಿಯನ್ ಎಫ್ ಇಂಡಿಯಾ ಸಂಸ್ಥಾಪಕರಾಗಿದ್ದರು. 1970 ರಲ್ಲಿ ಉಪವಾಸ ಸತ್ಯಾಗ್ರಹ ಮಾಡಿದ್ದರು. ಇವರ ವಿದ್ಯಾರ್ಥಿ ಹೋರಾಟದಿಂದಲೇ ವಿದ್ಯಾರ್ಥಿಗಳ ಕಲ್ಯಾಣ ಯೋಜನೆ ಜಾರಿ ಮಾಡಲು ಜಾನ್ ಮಥಾಯಿ ಕಮಿಟಿಯನ್ನು ಸರ್ಕಾರ ರಚಿಸಿತ್ತು. ಯಶವಂತಪುರದಲ್ಲಿ ಜನಿಸಿದ್ದ ರಘುಪತಿ ಆ ಬಳಿಕ ಶಾಸಕರಾಗಿ, ಸಚಿವರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು.

ಎಂ. ರಘುಪತಿ ಅವರ ನಿಧನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಕಾಂಗ್ರೆಸ್ ನ ಹಿರಿಯ ರಾಜಕಾರಣಿಗಳು ರಘುಪತಿ ಅವರ ಸೇವೆ ಸ್ಮರಿಸಿ ಟ್ವೀಟ್ ಮೂಲಕ ಕಂಬನಿ ಮಿಡಿದಿದ್ದಾರೆ. ಮಾಜಿ ಸಚಿವ, ನನ್ನ ಬಹು ಕಾಲದ ಗೆಳೆಯ ನನ್ನ ಸಹೋದ್ಯೋಗಿ ಎಂ. ರಘುಪತಿ ಅವರ ನಿಧನದಿಂದ ಅಘಾತಗೊಂಡಿದ್ದೇನೆ. ಜನ ಪರಕಾಳಜಿಯುಳ್ಳ ರಘುಪತಿ ಬಹುಬೇಗ ರಾಜಕೀಯ ತೊರೆದಿದ್ದರು. ಇವರ ಬಂಧು ಬಾಂಧವರ, ಅಭಿಮಾನಿಗಳ ಶೋಕದಲ್ಲಿ ಭಾಗಿಯಾಗುವೆ ಎಂದು ಸಿದ್ದರಾಮಯ್ಯ ರಘುಪತಿ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಎಂಟಿಆರ್ ಮತ್ತು ರಾಜ್ ಕುಮಾರ್ ಜತೆ ಒಡನಾಟ:
ಕನ್ನಡ ಕಲಾ ಕೆಲಸದಲ್ಲಿ ಅತಿ ಹೆಚ್ಚು ಆಸಕ್ತಿ ಹೊಂದಿದ್ದ ರಘುಪತಿ ಡಾ. ರಾಜ್ ಕುಮಾರ್ ಅವರ ಜತೆ ಉತ್ತಮ ಒಡನಾಟ ಹೊಂದಿದ್ದರು. ಮಾತ್ರವಲ್ಲ, ಆಂಧ್ರ ಪ್ರದೇಶ ಸಿಎಂ ಎನ್ಟಿಆರ್ ಜತೆ ಉತ್ತಮ ಸಂಬಂಧ ಹೊಂದಿದ್ದರು. ರಘುಪತಿ ಅವರು ಆಂಧ್ರ ಪ್ರದೇಶದ ಹಿರಿಯ ರಾಜಕಾರಣಿಗಳೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಸಾಹಿತ್ಯ ಓದುವುದು ಇವರ ನೆಚ್ಚಿನ ಆಸಕ್ತಿಯಾಗಿತ್ತು.
ಮುಖ್ಯಮಂತ್ರಿ ಸಂತಾಪ:
ಮಾಜಿ ಸಚಿವ ಎಂ. ರಘುಪತಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ ಸಚಿವರಾಗಿ ಉತ್ತಮ ಸೇವೆ ಸಲ್ಲಿಸಿದ್ದ ಅವರ ನಿಧನದಿಂದ ಒಬ್ಬ ಉತ್ತಮ ರಾಜಕಾರಣಿಯನ್ನು ನಾಡು ಕಳೆದುಕೊಂಡಂತಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಿ ಅವರ ಕುಟುಂಬ ವರ್ಗಕ್ಕೆ ಈ ದುಃಖ ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ತಮ್ಮ ಶೋಕ ಸಂದೇಶದಲ್ಲಿ ಮುಖ್ಯ ಮಂತ್ರಿಗಳು ತಿಳಿಸಿದ್ದಾರೆ.












Click it and Unblock the Notifications