ಶಿವನೇ! ಮಠಗಳನ್ನೂ ಬಿಡದ ಸರ್ಕಾರದ ಕಮಿಷನ್ ದಂಧೆ: % ಮಾತ್ರ ಸ್ವಲ್ಪ ಕಮ್ಮಿ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತರಾಜ್ ಇಲಾಖೆಯ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪನವರ ರಾಜೀನಾಮೆಯಿಂದ ಸರಕಾರದ ಕಮಿಷನ್ ದಂಧೆಯ ಹಲವು ಮುಖಗಳು ಹೊರಬರಲಾರಂಭಿಸಿದೆ. ಇದು ಎಷ್ಟರ ಮಟ್ಟಿಗೆ ಎಂದರೆ ಮಠಮಾನ್ಯಗಳಿಗೂ ಆವರಿಸಿಕೊಂಡಿದೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಯ ನಂತರ ಈಶ್ವರಪ್ಪನವರು ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಎದುರಾಯಿತು. ರಾಜ್ಯ ಗುತ್ತಿಗೆದಾರ ಸಂಘದ ಅಧ್ಯಕ್ಷರ ಪ್ರಕಾರ ಸರಕಾರದ ಐವರು ಸಚಿವರು ಕಮಿಷನ್ ದಂಧೆಯಲ್ಲಿ ಶಾಮೀಲಾಗಿದ್ದಾರೆ.
ಸಾಮಾನ್ಯವಾಗಿ, ದೇವಾಲಯ ಮತ್ತು ಮಠಮಾನ್ಯಗಳ ಅಭಿವೃದ್ದಿ ಅಥವಾ ಇತರ ಕಾರ್ಯಕ್ರಮಗಳಿಗೆ ಸರಕಾರ ಅನುದಾನವನ್ನು ಬಿಡುಗಡೆ ಮಾಡುವುದುಂಟು. ಇತ್ತೀಚೆಗಷ್ಟೇ ಬೊಮ್ಮಾಯಿ ಸರಕಾರ ಹಲವು ದೇವಾಲಯ/ಮಠಗಳಿಗೆ ಭರ್ಜರಿ ಅನುದಾನವನ್ನು ಕೊಟ್ಟಿತ್ತು.
ಸರಕಾರದ ಅನುದಾನ ಘೋಷಣೆಯಾಗಿ ಅದು ಕಾರ್ಯರೂಪವಾಗಿ ಬ್ಯಾಂಕ್ ಅಕೌಂಟಿಗೆ ಬರಲು ಕಮಿಷನ್ ನೀಡಬೇಕೇ? ದಿಂಗಾಲೇಶ್ವರ ಸ್ವಾಮೀಜಿಯ ಪ್ರಕಾರ ಇದಕ್ಕೂ ಕಮಿಷನ್ ನೀಡಬೇಕಾದ ದುರ್ಗತಿ ಬಂದಿದೆ. ಆದರೆ, ಇಲ್ಲಿ ಇದು ನಲವತ್ತು ಪರ್ಸೆಂಟ್ ಅಲ್ಲ, ಅದಕ್ಕಿಂತ ಸ್ವಲ್ಪ ಕಮ್ಮಿ..

ಒಟ್ಟು 119 ಕೋಟಿ ರೂಪಾಯಿ ಅನುದಾನ ಬಿಡುಗಡೆ
ರಾಜ್ಯದ ಹಿಂದುಳಿದ ಹಾಗೂ ದಲಿತ ಸಮಾಜದ ವಿವಿಧ 65 ಮಠಗಳ ಶಿಕ್ಷಣ ಸಂಸ್ಥೆಗಳ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿಗೆ ಒಟ್ಟು 119 ಕೋಟಿ ರೂಪಾಯಿ ಬಿಡುಗಡೆಗೆ ಆರ್ಥಿಕ ಇಲಾಖೆ ಕಳೆದ ವಾರ ಅನುಮೋದನೆ ನೀಡಿತ್ತು. ಕಾಗಿನೆಲೆ ಗುರುಪೀಠ, ಹರಿಹರ ತಾಲೂಕು ವಾಲ್ಮೀಕಿ ಗುರುಪೀಠ, ಕುಂಚಿಟಿಗ ಮಠ, ಯಾದವ ಗೊಲ್ಲ ಗುರುಪೀಠ, ಮಹಾಲಕ್ಷ್ಮೀ ತಿಗಳರ ಮಹಾಸಂಸ್ಥಾನ, ಮಾದಾರ ಚನ್ನಯ್ಯ ಮಠ ಸೇರಿದಂತೆ ಹಲವು ಮಠಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದರು.

ಗುತ್ತಿಗೆದಾರ ಸಂಘದ ಆರೋಪದ ಪ್ರಕಾರ, ಯಾವುದೇ ಕೆಲಸಕ್ಕೆ 40%
ಗುತ್ತಿಗೆದಾರ ಸಂಘದ ಆರೋಪದ ಪ್ರಕಾರ, ಯಾವುದೇ ಕೆಲಸಕ್ಕೆ ನಲವತ್ತು ಪರ್ಸೆಂಟ್ ನೀಡಬೇಕಾಗಿದೆ. ಈಗ, ಶಿರಹಟ್ಟಿ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿಯವರ ಪ್ರಕಾರ, ಮಠಗಳಿಗೆ ನೀಡುವ ಅನುದಾನಕ್ಕೂ ಕಮಿಷನ್ ನೀಡಬೇಕಿದೆ. ಆದರೆ, ಇಲ್ಲಿ ನಲವತ್ತು ಪರ್ಸೆಂಟ್ ಬದಲಿಗೆ ಮೂವತ್ತು ಪರ್ಸೆಂಟ್. ನೇರವಾಗಿ ಸರಕಾರದ ವಿರುದ್ದ ದಿಂಗಾಲೇಶ್ವರ ಸ್ವಾಮೀಜಿವರು ಆರೋಪವನ್ನು ಮಾಡಿದ್ದಾರೆ. "ಎಲ್ಲಿಗೆ ಬಂದು ನಿಂತಿದೆ ನೋಡಿ ರಾಜ್ಯದ ಭ್ರಷ್ಟಾಚಾರ"ಎಂದು ಶ್ರೀಗಳು ಆಕ್ರೋಶ ಹೊರಹಾಕಿದ್ದಾರೆ. (ಚಿತ್ರದಲ್ಲಿ: ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ)

ಕೃಷ್ಣಾ-ಮಹಾದಾಯಿ-ನವಲಿ ಸಂಕಲ್ಪಯಾತ್ರೆ
ಬೀಳಗಿ ತಾಲೂಕಿನ ಬಾಡಗಂಡಿಯಲ್ಲಿ ಉತ್ತರ ಕರ್ನಾಟಕ ಸ್ವಾಭಿಮಾನಿ ವೇದಿಕೆ ಆಯೋಜಿಸಿದ್ದ ಕೃಷ್ಣಾ-ಮಹಾದಾಯಿ-ನವಲಿ ಸಂಕಲ್ಪಯಾತ್ರೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ದಿಂಗಾಲೇಶ್ವರ ಶ್ರೀಗಳು,"ಮಠಗಳಿಗೆ ಸರ್ಕಾರ ಬಿಡುಗಡೆ ಮಾಡುವ ಅನುದಾನ ಪಡೆಯಲು ಶೇ. 30 ಕಮಿಷನ್ ನೀಡಬೇಕಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಇಲ್ಲಿಗೆ ಬಂದು ನಿಂತಿದೆ. ಅನುದಾನ ಪರ್ಸೆಂಟೇಜ್ ಕಡಿತ ಆದ ನಂತರವಷ್ಟೇ ಕಟ್ಟಡದ ಕೆಲಸ ಆರಂಭವಾಗುತ್ತದೆ"ಎಂದು ಶ್ರೀಗಳು, ಸರಕಾರದ ವಿರುದ್ದ ಆರೋಪಿಸಿದ್ದಾರೆ.

ಕಮಿಷನ್ ನೀಡದಿದ್ದರೆ ಹಣ ಬಿಡುಗಡೆ ಆಗುವುದಿಲ್ಲ
"ಕಮಿಷನ್ ನೀಡದಿದ್ದರೆ ಹಣ ಬಿಡುಗಡೆ ಆಗುವುದಿಲ್ಲ, ಅಧಿಕಾರಿಗಳು ಇಷ್ಟು ಹಣ ಕೊಡದಿದ್ದರೆ ಅನುದಾನ ಬಿಡುಗಡೆ ಆಗುವುದಿಲ್ಲ ಎಂದು ನೇರವಾಗಿ ಹೇಳುತ್ತಾರೆ. ನಾಡಿನಲ್ಲಿ ಬುದ್ದಿಗೇಡಿ ಸರಕಾರವಿದೆ, ರೈತರ ಹೊಲಗಳಿಗೆ ನೀರು ಕೊಡುವ ಕೆಲಸ ಮೊದಲು ಸರಕಾರದಿಂದ ಆಗಬೇಕಿದೆ. ಅದಕ್ಕೆ, ಉತ್ತರ ಭಾರತದಲ್ಲಿ ಒಂದು ವರ್ಷ ಯಾವುದಕ್ಕೂ ಅಂಜದೇ ರೈತರು ನಡೆಸಿದ ಹೋರಾಟದ ರೀತಿಯಲ್ಲೇ ಪ್ರತಿರೋಧ ತೋರಿದರೆ ಮಾತ್ರ ರೈತರಿಗೆ ಅನ್ನ ಸಿಕ್ಕೀತು"ಎಂದು ದಿಂಗಾಲೇಶ್ವರ ಸ್ವಾಮೀಜಿವರು ಅಭಿಪ್ರಾಯ ಪಟ್ಟಿದ್ದಾರೆ.












Click it and Unblock the Notifications